ಒಬಿಸಿ ನಾಯಕನ ಪುಣ್ಯತಿಥಿಗೆ ಬಂದರೆ ಎಲೆಕ್ಷನ್ನಲ್ಲಿ ಲಾಭ
ಮಧ್ಯಪ್ರದೇಶದ ಒಬಿಸಿ ನಾಯಕರೊಬ್ಬರ ಪುಣ್ಯ ತಿಥಿ ಇದೇ ತಿಂಗಳು ನಡೆಯಲಿದ್ದು, ಅದರಲ್ಲಿ ಭಾಗಿಯಾದರೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಲಾಭವಾಗಲಿದೆ ಎಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹಿರಿಯ ನಾಯಕ ಕಮಲನಾಥ್ ಪತ್ರ ಬರೆದಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.
ನವದೆಹಲಿ (ಜೂ. 02): ಮಧ್ಯಪ್ರದೇಶದ ಒಬಿಸಿ ನಾಯಕರೊಬ್ಬರ ಪುಣ್ಯ ತಿಥಿ ಇದೇ ತಿಂಗಳು ನಡೆಯಲಿದ್ದು, ಅದರಲ್ಲಿ ಭಾಗಿಯಾದರೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಲಾಭವಾಗಲಿದೆ ಎಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹಿರಿಯ ನಾಯಕ ಕಮಲನಾಥ್ ಪತ್ರ ಬರೆದಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.
ಮಧ್ಯಪ್ರದೇಶದ ಮಾಜಿ ಉಪಮುಖ್ಯಮಂತ್ರಿ ಹಾಗೂ ಒಬಿಸಿ ನಾಯಕ ಸುಭಾಷ್ ಯಾದವ್ ಅವರ ಪುಣ್ಯತಿಥಿ ಜೂನ್ 26ರಂದು ಖರ್ಗೋನೆ ಜಿಲ್ಲೆಯ ಕಸ್ರಾವತ್ನಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಮಧ್ಯಪ್ರದೇಶದಲ್ಲಿ ಒಬಿಸಿ ಸಮುದಾಯ ಸಾಕಷ್ಟುಸಂಖ್ಯೆಯಲ್ಲಿದೆ. ಜನರೂ ಭಾರಿ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಚುನಾವಣಾ ಪ್ರಚಾರ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ನಿಮಡ್- ಮಾಲ್ವಾ ವಲಯದಲ್ಲಿ ಬರುವ 61 ವಿಧಾನಸಭಾ ಕ್ಷೇತ್ರಗಳ ದೃಷ್ಟಿಯಿಂದ ಈ ಕಾರ್ಯಕ್ರಮ ಮಹತ್ವದ್ದಾಗಿದೆ. ಹೀಗಾಗಿ ಭಾಗವಹಿಸಲು ಪರಿಶೀಲಿಸಿ ಎಂದು ರಾಹುಲ್ ಗಾಂಧಿ ಅವರಿಗೆ ತಮ್ಮ ಅಧಿಕೃತ ಲೆಟರ್ಹೆಡ್ನಲ್ಲಿ ಕಮಲನಾಥ್ ಪತ್ರ ಬರೆದಿದ್ದಾರೆ ಎಂದು ‘ರಿಪಬ್ಲಿಕ್ ಟೀವಿ’ ವರದಿ ಮಾಡಿದೆ. ಕಮಲನಾಥ್ ಅವರು ಸದ್ಯ ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥರಾಗಿದ್ದಾರೆ.