ಕಲ್ಲಡ್ಕ ಪ್ರಭಾಕರ್ ಭಟ್ ಆಪ್ತ ಬಿಜೆಪಿ ವಿರುದ್ಧ ಕಣಕ್ಕೆ
ಆರ್ಎಸ್'ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆಪ್ತನೇ ಬಿಜೆಪಿ ವಿರುದ್ದ ಸ್ಪರ್ಧೆಗೆ ನಿರ್ಧರಿಸಿದ್ದಾರೆ.
ಬೆಂಗಳೂರು (ಮಾ. 26): ಆರ್ಎಸ್'ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆಪ್ತನೇ ಬಿಜೆಪಿ ವಿರುದ್ದ ಸ್ಪರ್ಧೆಗೆ ನಿರ್ಧರಿಸಿದ್ದಾರೆ.
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಲ್ಲಡ್ಕ ಭಟ್ ಆಪ್ತ ಶ್ರೀಕರ ಪ್ರಭು ಪಕ್ಷೇತರನಾಗಿ ಕಣಕ್ಕಿಳಿಯಲಿದ್ದಾರೆ. 2014 ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ತೇಜೋವಧೆಗೆ ಯತ್ನಿಸಿದ್ದ ಆರೋಪದಲ್ಲಿ ಬಿಜೆಪಿಯಿಂದ ಶ್ರೀಕರ ಪ್ರಭು ಉಚ್ಚಾಟಿಸಲ್ಪಟ್ಟಿದ್ದರು. ರಾಜ್ಯ ಕಾರ್ಯಕಾರಿಣಿ ಸದಸ್ಯತ್ವದಿಂದಲೂ ಶ್ರೀಕರ ಪ್ರಭುರನ್ನ ಆರು ವರ್ಷ ಉಚ್ಚಾಟಿಸಲಾಗಿದೆ. ಕಲ್ಲಡ್ಕ ಆಪ್ತರಾಗಿದ್ದರೂ ಸಂಸದ ನಳಿನ್ ವಿರೋಧವಿರುವ ಕಾರಣ ಮತ್ತೆ ಪಕ್ಷ ಸೇರ್ಪಡೆ ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಮಂಗಳೂರು ದಕ್ಷಿಣದಲ್ಲಿ ಪಕ್ಷೇತರನಾಗಿ ಶ್ರೀಕರ ಪ್ರಭು ಕಣಕ್ಕಿಳಿಯಲಿದ್ದಾರೆ.
ಕಾಂಗ್ರೆಸ್ ಶಾಸಕ ಜೆ.ಆರ್.ಲೋಬೋ ವಿರುದ್ದ ತೊಡೆ ತಟ್ಟಲು ನಿಂತಿರುವ ಬಿಜೆಪಿಗೆ ಶ್ರೀಕರ ಪ್ರಭು ಸ್ಪರ್ಧೆ ಬಿಸಿ ತುಪ್ಪವಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ ಅತ್ಯಂತ ಆಪ್ತವಾಗಿ ಗುರುತಿಸಿಕೊಂಡಿರುವ ಶ್ರೀಕರ ಪ್ರಭು ಕಳೆದ ಬಾರಿ ಬಿಜೆಪಿ ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷನಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದರು.