ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಬದುಕಿನಲ್ಲಿ ಪರಿವರ್ತನಾ ಮನ್ವಂತರಕ್ಕೆ ಪಶ್ಚಿಮ ವಿಭಾಗದ ಪೊಲೀಸರು ಯೋಜನೆ ರೂಪಿಸಿದ್ದು, ಈಗ ಭರವಸೆ ಶೀರ್ಷಿಕೆಯಡಿ ಅದನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ. 

ಬೆಂಗಳೂರು : ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಬದುಕಿನಲ್ಲಿ ಪರಿವರ್ತನಾ ಮನ್ವಂತರಕ್ಕೆ ಪಶ್ಚಿಮ ವಿಭಾಗದ ಪೊಲೀಸರು ಯೋಜನೆ ರೂಪಿಸಿದ್ದು, ಈಗ ಭರವಸೆ ಶೀರ್ಷಿಕೆಯಡಿ ಅದನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ.

Add Asianetnews Kannada as a Preferred SourcegooglePreferred

ಗಾಂಧಿ ನಗರದ ತೇರಾಪಂತ್ ಭವನದಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಪಿ ರವಿ.ಡಿ.ಚೆನ್ನಣ್ಣನವರ್ ಅವರು, ಅಕ್ರಮ ಚಟುವಟಿಕೆಗಳನ್ನು ತೊರೆದು ಹೊಸದಾರಿಗೆ ಬರುವವರಿಗೆ ಬದುಕು ಕಟ್ಟಿಕೊಳ್ಳಲು ಸಹಕರಿಸುವುದಾಗಿ ಭರವಸೆ ನೀಡಿದರು. 

ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಹೊಸ ಜೀವನ ಹಾಗೂ ಭವಿಷ್ಯ ರೂಪಿಸುವ ಸಲುವಾಗಿ ಭರವಸೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಿಂದ ವಿಮುಖರಾಗಿ ಹೊಸ ದಾರಿಯಲ್ಲಿ ಹೆಜ್ಜೆ ಹಾಕುವ ಮನಸ್ಸಿನವರಿಗೆ ಸ್ವಾಗತಿಸುತ್ತೇನೆ. ನಿಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಕೊಡಿಸಲು ಯತ್ನಿಸುತ್ತೇನೆ ಎಂದರು. 

ಆಟೋ ಚಾಲಕ, ಮೆಕ್ಯಾನಿಕ್, ಮೊಬೈಲ್ ರಿಪೇರಿ, ಗಾರ್ಮೆಂಟ್ಸ್ ಹೀಗೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ವಾಗ್ದಾನ ಮಾಡಿದ ಡಿಸಿಪಿ ಅವರು, ಈ ಭರವಸೆ ಹೊರತಾಗಿಯೂ ದುಷ್ಕೃತ್ಯಗಳನ್ನು ಮುಂದುವರೆಸುವ ಸಮಾಜಘಾತುಕ ಶಕ್ತಿಗಳನ್ನು ಹೆಡೆಮುರಿ ಕಟ್ಟುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಅಧಿಕ ರೌಡಿಶೀಟರ್‌ಗಳು ಭಾಗವಹಿಸಿದ್ದರು. ಕೆಲವರು ಪಾತಕಲೋಕದಿಂದ ಸಮಾಜಕ ಮುಖ್ಯವಾಹಿನಿಗೆ ಬರುವುದಾಗಿ ಅವರು ವಾಗ್ದಾನ ಸಹ ಮಾಡಿದರು.