ರಾಜ್ಯದ ಇಬ್ಬರಿಗೆ ಜೀವನ ರಕ್ಷಾ ಪದಕ
ಪ್ರಾಣಾಪಾಯದಲ್ಲಿದ್ದವರನ್ನು ಜೀವದ ಹಂಗು ತೊರೆದು ರಕ್ಷಿಸುವವರಿಗೆ ನೀಡುವ ಜೀವನ ರಕ್ಷಾ ಪದಕಗಳನ್ನು ಗಣರಾಜ್ಯ ದಿನಕ್ಕೆ 2 ದಿನ ಉಳಿದಿರುವಂತೆಯೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ಪ್ರಕಟಿಸಿದ್ದಾರೆ.
ನವದೆಹಲಿ: ಪ್ರಾಣಾಪಾಯದಲ್ಲಿದ್ದವರನ್ನು ಜೀವದ ಹಂಗು ತೊರೆದು ರಕ್ಷಿಸುವವರಿಗೆ ನೀಡುವ ಜೀವನ ರಕ್ಷಾ ಪದಕಗಳನ್ನು ಗಣರಾಜ್ಯ ದಿನಕ್ಕೆ 2 ದಿನ ಉಳಿದಿರುವಂತೆಯೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ಪ್ರಕಟಿಸಿದ್ದಾರೆ.
ಈ ಪೈಕಿ 7 ಜನರಿಗೆ ಜೀವನ ರಕ್ಷಾ ಪದಕ, 13 ಜನರಿಗೆ ಉತ್ತಮ ಜೀವನರಕ್ಷಾ ಪದಕ ಹಾಗೂ 24 ಜನರಿಗೆ ಜೀವನ ರಕ್ಷಾ ಪದಕ ಪ್ರಕಟಿಸಲಾಗಿದೆ. ಇವರಲ್ಲಿ ಕರ್ನಾಟಕದ ಇಬ್ಬರಿದ್ದಾರೆ. ಇವರಿಗೆ 40 ಸಾವಿರ ರು. ಬಹುಮಾನ ಹಾಗೂ ಒಂದು ಪದಕ ನೀಡಿ ಗೌರವಿಸಲಾಗುತ್ತದೆ. ಕರ್ನಾಟಕದ ಸತ್ಯೇನ್ ಸಿಂಗ್ ಉತ್ತಮ ಜೀವನರಕ್ಷಾ ಪದಕ ಹಾಗೂ ಮಾಸ್ಟರ್ ಕೆ.ಯು. ನಿಶಾಂತ್ ಜೀವನರಕ್ಷಾ ಪದಕ ಗೌರವಗಳಿಗೆ ಪಾತ್ರರಾಗಲಿದ್ದಾರೆ.
52 ಯಾತ್ರಿಕರ ಪ್ರಾಣ ಉಳಿಸಿದ ಗಫೂರ್ಗೆ: 2017ರ ಜು.10ರಂದು ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಆಗ ತನ್ನ ಪ್ರಾಣವನ್ನೂ ಲೆಕ್ಕಿಸದೇ, ಬಸ್ ಅನ್ನು ಓಡಿಸಿಕೊಂಡು ಹೋಗಿ 52 ಯಾತ್ರಾರ್ಥಿಗಳ ಜೀವ ಕಾಪಾಡಿದ್ದ ಗುಜರಾತ್ನ ಬಸ್ ಚಾಲಕ ಶೇಖ್ ಸಲೀಂ ಗಫೂರ್ಗೆ ಪ್ರಸಕ್ತ ಸಾಲಿನ ಉತ್ತಮ ಜೀವನ ರಕ್ಷಾ ಪದಕ ಘೋಷಿಸಲಾಗಿದೆ.
ಈ ಗುಂಡಿನ ದಾಳಿಯಲ್ಲಿ 7 ಯಾತ್ರಿಕರು ಬಲಿಯಾಗಿ, 14 ಜನ ಗಾಯಗೊಂಡಿದ್ದರು. ಒಂದು ವೇಳೆ ಗಫೂರ್ ಬಸ್ ಓಡಿಸಿಕೊಂಡು ಮುಂದೆ ಸಾಗದೇ ಇದ್ದಲ್ಲಿ ಬದುಕುಳಿದ 52 ಜನ ಕೂಡಾ ಉಗ್ರರ ಗುಂಡಿಗೆ ಬಲಿಯಾಗುವ ಸಾಧ್ಯತೆ ಇತ್ತು.