ಬೆಂಗಳೂರು(ಸೆ. 15): ಬಿಬಿಎಂಪಿ ಮೇಯರ್ ಸ್ಥಾನ ಕೊಟ್ಟವರೊಂದಿಗೆ ನಮ್ಮ ದೋಸ್ತಿ ಎಂದು ಜೆಡಿಎಸ್​ ಹೊಸ ಬಾಂಬ್​ ಸಿಡಿಸಿದೆ. ಪಾಲಿಕೆಯಲ್ಲಿ ಸದ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಈ ಹೇಳಿಕೆಯದ್ದೇ ಸದ್ದು. ಮೇಯರ್ ಸ್ಥಾನ ಕೊಡಲು ಒಪ್ಪಿದವರಿಗೆ ಮಾತ್ರ ನಾವು ಬೆಂಬಲ ಕೊಡುವುದಾಗಿ ದಾಳ ಹೂಡಿದ್ದಾರೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಿದ್ದೆಕೆಡಿಸಿದೆ.

ಇಡೀ ಬೆಂಗಳೂರಿನಲ್ಲಿ ಜೆಡಿಎಸ್​ ಗೆದ್ದಿರುವುದು 14 ವಾರ್ಡ್​'ಗಳಲ್ಲಿ ಮಾತ್ರ.. ಇತ್ತ ಕಾಂಗ್ರೆಸ್​ 76 ವಾರ್ಡ್​ಗಳಲ್ಲಿ ಜಯಿಸಿದೆ. ಬಿಜೆಪಿಯಂತೂ 100 ವಾರ್ಡ್'​ಗಳಲ್ಲಿ ಜಯಭೇರಿ ಭಾರಿಸಿದೆ.. ಹೀಗಿರುವಾಗ, ಬೆರಳೆಣಿಕೆಯಷ್ಟು ವಾರ್ಡ್​'ಗಳಲ್ಲಿ ಗೆದ್ದವರಿಗೆ ಮೇಯರ್ ಸ್ಥಾನವನ್ನ ಬಿಟ್ಟು ಕೊಡೊದು ಹೇಗೆ ಎಂದು ಗುಸುಗುಸು ಪಿಸುಪಿಸು ಚರ್ಚೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಶುರುವಾಗಿದೆ.

ಮಾತನಾಡಲಿ ಎಂದ ಅಶೋಕ್:
ಮಾಧ್ಯಮದಲ್ಲಿ ಮಾತ್ರ ಜೆಡಿಎಸ್ ತನ್ನ ಬೇಡಿಕೆಯನ್ನು ಪ್ರಸ್ತಾಪಿಸಿದೆ. ಬಿಜೆಪಿ ಅಂಗಳಕ್ಕೆ ಜೆಡಿಎಸ್​ ತನ್ನ ಬೇಡಿಕೆಯ ಚೆಂಡನ್ನ ಎಸೆದಿಲ್ಲ..ಹಾಗಾಗಿ ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದಿದ್ದಾರೆ ಬಿಜೆಪಿ ಮುಖಂಡ ಆರ್​.ಆಶೋಕ್​..

ಕಾಂಗ್ರೆಸ್ ಪರ್ಯಾಯ ಆಫರ್:
ಇತ್ತ ಕಾಂಗ್ರೆಸ್ ವಲಯದಲ್ಲಿ ಜೆಡಿಎಸ್​'ನ ಮೇಯರ್ ಬೇಡಿಕೆಯನ್ನು ಈಡೇರಿಸುವುದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ. ಆದ್ರೆ, ಉಪಮೇಯುರ್ ಸ್ಥಾನ , 4 ಸ್ಥಾಯಿ ಸಮಿತಿಗಳನ್ನ ನೀಡಿ ಜೆಡಿಎಸ್​ ಬೆಂಬಲ ಪಡೆಯುವ ಯೋಜನೆ ಕೈಪಾಳಯದ ತಲೆಯಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ.

ಬಿಬಿಎಂಪಿಯಲ್ಲಿ ಅಧಿಕಾರದ ಗದ್ದುಗೆ ಏರಲು ಜೆಡಿಎಸ್​ ಬೆಂಬಲ ಬೇಕೆ ಬೇಕು.. ಜೆಡಿಎಸ್​ ಕಿಂಗ್ ಮೇಕರ್​ ಎಂಬುದರಲ್ಲಿ ಅನುಮಾನವೇ ಇಲ್ಲ. 269 ಮತಗಳಲ್ಲಿ 135 ಮ್ಯಾಜಿಕ್ ನಂಬರ್​ ಗೆಲ್ಲಬೇಕಾದ್ರೆ ಜೆಡಿಎಸ್​ ಅಸ್ತು ಸಿಗಲೇ ಬೇಕು. ಹೀಗಾಗಿ ಜೆಡಿಎಸ್ ತನಗಿರುವ ಬೇಡಿಕೆಯನ್ನು ಬಳಸಿಕೊಂಡು ಅಧಿಕಾರದ ಗದ್ದುಗೆ ಹಿಡಿಯಲು ರಣತಂತ್ರ ರೂಪಿಸಿದೆ.

ವರದಿ: ನಂದಿನಿ ಜೆ., ಸುವರ್ಣ ನ್ಯೂಸ್​