ಯೋಗೇಶ್ವರ್ ಮಣಿಸಲು ಕಾಂಗ್ರೆಸ್ – ಜೆಡಿಎಸ್ ದೋಸ್ತಿ..?
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಈಗ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ತಂಗಿ ಗಂಡ ಶರಶ್ಚಂದ್ರ ಅವರು ಅಧಿಕೃತವಾಗಿ ಆಕಾಂಕ್ಷಿಯಾಗಿದ್ದಾರೆ.
ಬೆಂಗಳೂರು : ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಈಗ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ತಂಗಿ ಗಂಡ ಶರಶ್ಚಂದ್ರ ಅವರು ಅಧಿಕೃತವಾಗಿ ಆಕಾಂಕ್ಷಿಯಾಗಿದ್ದಾರೆ. ಗುರುವಾರ ಕೆಪಿಸಿಸಿ ಕಚೇರಿಗೆ ತೆರಳಿದ ಶರಶ್ಚಂದ್ರ ಅವರು ಚನ್ನಪಟ್ಟಣ ಕ್ಷೇತ್ರದ ಟಿಕೆಟ್ಗಾಗಿ ಅರ್ಜಿಯನ್ನು ಖರೀದಿ ಮಾಡಿದರು. ತನ್ಮೂಲಕ ಸ್ಟಾರ್ ಕ್ಷೇತ್ರವೆನಿಸಿದ ಚನ್ನಪಟ್ಟಣದಿಂದ ಶಿವಕುಮಾರ್ ಅವರು ಕುಟುಂಬದ ಸದಸ್ಯರೇ ಕಾಂಗ್ರೆಸ್ನಿಂದ ಕಣಕ್ಕಿಳಿಯುವ ಸಾಧ್ಯತೆ ಮೂಡಿದೆ.
ಕಾಂಗ್ರೆಸ್ಗೆ ಕಡೆ ಕ್ಷಣದಲ್ಲಿ ಕೈಕೊಟ್ಟು ಬಿಜೆಪಿ ಸೇರಿದ ಹಾಲಿ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಶರಶ್ಚಂದ್ರ ಅವರನ್ನು ಕಣಕ್ಕೆ ಇಳಿಸಲು ತಯಾರಿ ನಡೆಸಿದೆ ಎಂದು ‘ಕನ್ನಡಪ್ರಭ’ ಈ ಹಿಂದೆ ವರದಿ ಮಾಡಿತ್ತು. ಇದಾದ ನಂತರ ಚನ್ನಪಟ್ಟಣದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಶಿವಕುಮಾರ್ ಅವರ ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್ ಅವರನ್ನು ಕ್ಷೇತ್ರದಿಂದ ಕಣಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದ್ದರು. ಹೀಗಾಗಿ ಕೆಲ ಕಾಲ ಸುರೇಶ್ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು.
ಈ ನಡುವೆ ಜೆಡಿಎಸ್ನಿಂದ ಆ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕಣಕ್ಕೆ ಇಳಿಯುವ ಸಾಧ್ಯತೆಯ ವದಂತಿ ಹಬ್ಬಿತ್ತು. ಈ ಹಂತದಲ್ಲಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಪಾಲ್ಗೊಂಡು ಚರ್ಚೆ ನಡೆಸಿದ್ದು ಸಾಕಷ್ಟುಸುದ್ದಿಯಾಗಿತ್ತು. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಸಮಾನವೈರಿ ಎನಿಸಿದ ಯೋಗೇಶ್ವರ್ ಅವರನ್ನು ಮಣಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಳ್ಳಲಿದ್ದು, ಜೆಡಿಎಸ್ ಅನಿತಾ ಕುಮಾರಸ್ವಾಮಿ ಅವರನ್ನೇ ಕಣಕ್ಕೆ ಇಳಿಸಿದರೆ, ಅವರ ಗೆಲುವಿಗೆ ಸಹಕಾರಿಯಾಗುವಂತೆ ದುರ್ಬಲ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕೆ ಇಳಿಸುವ ಸಾಧ್ಯತೆಯ ಲೆಕ್ಕಾಚಾರ ಆರಂಭವಾಗಿದ್ದವು.
ಆದರೆ, ಶರಶ್ಚಂದ್ರ ಅವರು ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಅರ್ಜಿ ಪಡೆದುಕೊಳ್ಳುವುದರೊಂದಿಗೆ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನಡೆಸಲು ತೀರ್ಮಾನಿಸಿದಂತಿದೆ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ತಮ್ಮ ಕುಟುಂಬದ ಸದಸ್ಯರನ್ನು ಶಿವಕುಮಾರ್ ಕಣಕ್ಕೆ ಇಳಿಸುವುದರಿಂದ ಅವರ ಗೆಲುವಿಗೆ ಗಂಭೀರ ಪ್ರಯತ್ನ ನಡೆಸಲಿದ್ದಾರೆ ಎಂದೇ ಹೇಳಲಾಗುತ್ತಿದೆ.
ಕಾಂಗ್ರೆಸ್ನಲ್ಲಿ ನಡೆದಿರುವ ಮತ್ತೊಂದು ಕುತೂಹಲಕಾರಿ ಚರ್ಚೆಯೆಂದರೆ ಜೆಡಿಎಸ್ನಲ್ಲಿ ವರಿಷ್ಠ ಎಚ್.ಡಿ. ದೇವೇಗೌಡ ಕುಟುಂಬದ ಆಂತರಿಕ ಸಂಘರ್ಷದ ಪರಿಣಾಮವಾಗಿ ಕುಟುಂಬದ ಇಬ್ಬರು ಮಾತ್ರ ಸ್ಪರ್ಧಿಸಬೇಕು ಎಂಬ ನಿಲುವಿಗೆ ಬಂದರೆ ಆಗ ಅನಿತಾ ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ಕಣಕ್ಕೆ ಇಳಿಯುವುದಿಲ್ಲ. ಇನ್ನು ಸಮಾನ ಶತ್ರು ಯೋಗೇಶ್ವರ್ ಮಣಿಸುವ ಉದ್ದೇಶದಿಂದ ಕಾಂಗ್ರೆಸ್ನ ಶರಶ್ಚಂದ್ರ ಅವರಿಗೆ ಜೆಡಿಎಸ್ ಬೆಂಬಲ ನೀಡುತ್ತದೆಯೇ ಎಂಬುದು ಪ್ರಶ್ನೆ. ಇದು ನಿಜವಾಗುವುದೇ ಎಂಬುದನ್ನು ಕಾದು ನೋಡಬೇಕು.
ಖಾನಾಪುರದಿಂದ ನಿಂಬಾಳ್ಕರ್ ಪತ್ನಿ ಅರ್ಜಿ:
ಉಳಿದಂತೆ, ಗುರುವಾರದಂದು ಐಜಿಪಿ (ಸಿಐಡಿ) ಹೇಮಂತ್ ನಿಂಬಾಳ್ಕರ್ ಅವರ ಪತ್ನಿ ಡಾ. ಅಂಜಲಿ ನಿಂಬಾಳ್ಕರ್ ಅವರು ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಅರ್ಜಿಯನ್ನು ಪಡೆದುಕೊಂಡಿದ್ದಾರೆ. ಇದೇ ಕ್ಷೇತ್ರದಿಂದ ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಪರಾಜಿತರಾಗಿದ್ದ ಅಂಜಲಿ ನಿಂಬಾಳ್ಕರ್ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೊಡಿಸುವಲ್ಲಿ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರು ಪ್ರಭಾವ ಕೆಲಸ ಮಾಡಿದೆ. ಹೀಗಾಗಿಯೇ ಅವರು ಅರ್ಜಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರಿ ಅಭಿಯೋಜಕರಾಗಿದ್ದ ಚಂದ್ರಮೌಳಿ ಅವರು ಮಡಿಕೇರಿ ಕ್ಷೇತ್ರದ ಟಿಕೆಟ್ಗಾಗಿ ಅರ್ಜಿ ಪಡೆದುಕೊಂಡಿದ್ದಾರೆ. ಚಂದ್ರಮೌಳಿ ಅವರು ಕಳೆದ ಬಾರಿ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರು.
ಹಾಲಿ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲೂ ಆಕಾಂಕ್ಷಿಗಳು ಅರ್ಜಿ ಪಡೆದುಕೊಳ್ಳುತ್ತಿರುವ ಬೆಳವಣಿಗೆಯೂ ನಡೆದಿದೆ. ವಿಶೇಷವೆಂದರೆ, ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪ್ರಭಾವಿ ಅನಿಲ್ ಲಾಡ್ ಅವರು ಶಾಸಕರಾಗಿದ್ದರೆ, ಆ ಕ್ಷೇತ್ರಕ್ಕೆ ಇದುವರೆಗೂ 8 ಮಂದಿ ಅರ್ಜಿ ಪಡೆದುಕೊಂಡಿದ್ದಾರೆ. ಅದೇ ರೀತಿ ತಮ್ಮ ಪುತ್ರನ ಮೊಹಮ್ಮದ್ ನಲಪಾಡ್ ಉದ್ಯಮಿ ಪುತ್ರನಿಗೆ ಹಲ್ಲೆ ನಡೆಸಿದ ಪ್ರಕರಣದಿಂದ ಕಳೆಗುಂದಿರುವ ಎನ್.ಎ. ಹ್ಯಾರಿಸ್ ಅವರ ಶಾಂತಿನಗರ ಕ್ಷೇತ್ರದಿಂದ ಶಂಕರ್ ಹಾಗೂ ರಾಬರ್ಟ್ ಎಂಬುವರು ಅರ್ಜಿ ಪಡೆದುಕೊಂಡಿದ್ದಾರೆ. ಇನ್ನು ಪುತ್ತೂರು ಕ್ಷೇತ್ರದ ಟಿಕೆಟ್ಗಾಗಿ ಶಕುಂತಲಾ ಶೆಟ್ಟಿಅರ್ಜಿ ಪಡೆದುಕೊಂಡಿದ್ದಾರೆ.