ಸಾಲಾ ಮನ್ನಾ: ಸಮನ್ವಯ ಸಮಿತಿ ತೆಗೆದುಕೊಂಡ ನಿರ್ಧಾರವೇನು?
ನಾಳೆಯಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು ರೈತರು ಬಹಳ ದಿನಗಳಿಂದ ಕಾಯುತ್ತಿದ್ದ ಸಾಲ ಮನ್ನಾಕ್ಕೆ ಒಪ್ಪಿಗೆ ಸಿಕ್ಕಿದೆ. ಹೊಸ ಸರಕಾರ ಹೊಸ ಬಜೆಟ್ ಸಹ ಮಂಡನೆ ಮಾಡಲಿದೆ.
ಬೆಂಗಳೂರು[ಜು.1] ಬಜೆಟ್ ಮಂಡನೆ ಮತ್ತು ರಾಜ್ಯದ ರೈತರ ಸಾಲಮನ್ನಾ ವಿಷಯದಲ್ಲಿ ಕಾಂಗ್ರೆಸ್- ಜೆಡಿಎಸ್ ನಡುವಿನ ಗೊಂದಲಕ್ಕೆ ತೆರೆಬಿದ್ದಿದೆ. ಇಂದು ನಡೆದ ಸಮನ್ವಯ ಸಮಿತಿಯ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮುಂದುವರಿಸಲು ಸಮಿತಿ ಒಪ್ಪಿಗೆ ನೀಡಿದೆ.
ಸಮ್ಮಿಶ್ರ ಸರ್ಕಾರ ರಚನೆಯ ಬಳಿಕ ಅಸ್ವಿಸ್ತಕ್ಕೆ ಬಂದ ಸಮನ್ವಯ ಸಮಿತಿಯ ಎರಡನೇ ಸಭೆ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ, ಕಾಂಗ್ರೆಸ್- ಜೆಡಿಎಸ್ ನಡುವಿನ ಉದ್ಭವಿಸಿದ್ದ ಅನುಮಾನ, ಗೊಂದಲಕ್ಕೆ ತೆರೆ ಎಳೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರ ಬೆಳೆ ಸಾಲ ಮನ್ನಾ ಮತ್ತು ಜುಲೈ 5 ರಂದು ಸಿಎಂ ಕುಮಾರಸ್ವಾಮಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದಕ್ಕೆ ಒಪ್ಪಿಗೆ ನೀಡಿದೆ.
ನೀರಾವರಿ ಯೋಜನೆಗಳಿಗೆ 1 ಲಕ್ಷ 22 ಕೋಟಿ ರೂ. ಮೀಸಲಿಗೆ ನಿಗದಿ, ಮುಂದಿನ 5 ವರ್ಷದಲ್ಲಿ ರಾಜ್ಯದಲ್ಲಿ 20 ಲಕ್ಷ ಮನೆ ನಿರ್ಮಾಣ, 5 ವರ್ಷದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಗೆ ಅಗತ್ಯ ಕ್ರಮ, ಕಾಂಗ್ರೆಸ್ ಸರ್ಕಾರದ ಮಹತ್ವಾಂಕ್ಷೆಯ ‘ಆರೋಗ್ಯ ಕರ್ನಾಟಕ’ ಯೋಜನೆ ಅನುಷ್ಠಾನ ಸೇರಿಂತೆ ಹಿಂದಿನ ಸರ್ಕಾರ ಎಲ್ಲ ಯೋಜನೆಗಳ ಮುಂದುವರಿಕೆಗೆ ಸಮಿತಿ ನಿರ್ಧರಿಸಿದೆ.