ಫಿಲ್ಮ್‌ ಚೇಂಬರ್‌ಗೆ ಅಧ್ಯಕ್ಷರಾಗಿ ಜೈರಾಜ್‌ ಅವಿರೋಧ ಆಯ್ಕೆ | ಅವಿರೋಧ ಆಯ್ಕೆ | 29 ಕ್ಕೆ ಅಧಿಕೃತ ಪ್ರಕಟಣೆ | ನಾಮಪತ್ರ ಹಿಂಪಡೆದ ರಾಕ್‌ಲೈನ್‌, ಸುಂದರರಾಜ್‌ 

ಬೆಂಗಳೂರು (ಜೂ. 23):  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಪ್ರದರ್ಶಕ ಗುಬ್ಬಿ ಜೈರಾಜ್‌ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾಗಿದ್ದ ರಾಕ್‌ಲೈನ್‌ ವೆಂಕಟೇಶ್‌, ಸುಂದರರಾಜ್‌ ಹಾಗೂ ನರಸಿಂಹಲು ಕಣದಿಂದ ಹಿಂದೆ ಸರಿಯಲು ಇಚ್ಛಿಸಿ, ಶನಿವಾರ ತಮ್ಮ ನಾಮಪತ್ರಗಳನ್ನು ವಾಪಸ್‌ ಪಡೆದುಕೊಂಡರು. ಇದರಿಂದಾಗಿ ಅಧ್ಯಕ್ಷ ಸ್ಥಾನದಲ್ಲಿ ಏಕಾಂಗಿ ಆಗಿ ಉಳಿದ ಜೈರಾಜ್‌ ಅವಿರೋಧವಾಗಿ ಆಯ್ಕೆಯಾದರು. ಅವರ ಅಧಿಕೃತ ಆಯ್ಕೆ ಜೂನ್‌ 29ರಂದು ನಡೆಯಲಿದೆ.

ಜೂನ್‌ 29ರಂದು ವಾಣಿಜ್ಯ ಮಂಡಳಿ ವಿವಿಧ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಸಂಜೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನ ಈ ಬಾರಿ ಪ್ರದರ್ಶಕರ ವಲಯಕ್ಕೆ ಮೀಸಲಾಗಿತ್ತು.

ಆ ಪ್ರಕಾರ ಗುಬ್ಬಿ ಜೈರಾಜ್‌, ರಾಕ್‌ಲೈನ್‌ ವೆಂಕಟೇಶ್‌, ಆರ್‌. ಸುಂದರ ರಾಜ್‌ ಮತ್ತು ಎಂ. ನರಸಿಂಹಲು ನಾಮಪತ್ರ ಸಲ್ಲಿಸಿದ್ದರು. ಆದರೆ ಜೈರಾಜ್‌ ಅವರನ್ನು ಬೆಂಬಲಿಸಿ ಆ ಮೂವರು ನಾಮಪತ್ರ ಹಿಂಪಡೆದರು.

ಅವಿರೋಧ ಆಯ್ಕೆಗೆ ಸಹಕರಿಸಿದ ವಾಣಿಜ್ಯ ಮಂಡಳಿಯ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ನೂತನ ಅಧ್ಯಕ್ಷ ಜೈರಾಜ್‌, ‘ಚಿತ್ರೋದ್ಯಮ ಇವತ್ತು ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಿದೆ.

ಈ ಸಮಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದೇನೆ. ಸಾಕಷ್ಟುಕೆಲಸ ಮಾಡಬೇಕಿದೆ. ಹಿಂದಿನ ಅಧ್ಯಕ್ಷರು, ನೂತನವಾಗಿ ಆಯ್ಕೆಯಾಗುವ ಪದಾಧಿಕಾರಿಗಳ ಬೆಂಬಲದೊಂದಿಗೆ ಚಿತ್ರೋದ್ಯಮದ ಪ್ರಗತಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ’ ಎಂದು ಹೇಳಿದರು.

ಅಧ್ಯಕ್ಷ ಸ್ಥಾನದ ಜತೆಗೆ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ವಿತರಕ ವಲಯದಿಂದ ಎ ಗಣೇಶ್‌, ಪ್ರದರ್ಶಕ ವಲಯದಿಂದ ಎಂ. ನರಸಿಂಹಲು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರದರ್ಶಕ ವಲಯದ ವೆಂಕಟರಮಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್‌ಎ ಗೋವಿಂದರಾಜು, ಅವಿನಾಶ್‌ ಶೆಟ್ಟಿ, ಎಸ್‌ವಿ ಜೋಷಿ, ಶ್ರವಣ್‌ಕುಮಾರ್‌ ಬಿ ಮಹೀಂದ್ರಕರ್‌, ರಂಗಸ್ವಾಮಿ, ನಾಗರಾಜ್‌ ಸಿ, ರಾಮಕೃಷ್ಣ ಆಯ್ಕೆಯಾಗಿದ್ದಾರೆ.