ಸೋಮವಾರ ವಿಚಾರಣೆ ವೇಳೆ ಡಿ.ಕೆ. ಶಿವಕುಮಾರ್​ ನೀಡಿದ್ದ ಉತ್ತರಗಳಿಗೆ ಸಮಾಧಾನಗೊಳ್ಳದ ಅಧಿಕಾರಿಗಳು ಮತ್ತಷ್ಟು ಪ್ರಶ್ನೆಗಳನ್ನು ಸಿದ್ದಪಡಿಕೊಂಡು ವಿಚಾರಣೆಗೆ ತಯಾರಿ ನಡೆಸಿಕೊಂಡಿದ್ದಾರೆ.

ಬೆಂಗಳೂರು(ಆ.09): ಐಟಿ ದಾಳಿಯ ಸುಳಿಯಲ್ಲಿ ಸಿಲುಕಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್​​ಗೆ ಮತ್ತೊಂದು ನೋಟಿಸ್​ ಜಾರಿಯಾಗಿದೆ. ಡಿಕೆಶಿ ನೀಡಿದ್ದ ಉತ್ತರಕ್ಕೆ ಸಮಾಧಾನಗೊಳ್ಳದ ಐಟಿ ಅಧಿಕಾರಿಗಳು ಮತ್ತೆ ಬುಲಾವ್​​ ನೀಡಿದ್ದಾರೆ. ನಿನ್ನೆ ನೋಟಿಸ್​​ ಜಾರಿ ಮಾಡಿದ್ದು 2 ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ. ಹೀಗಾಗಿ ನಾಳೆ ಐಟಿ ಅಧಿಕಾರಿಗಳ ಮುಂದೆ ಹಾಜರಾಗಲೇ ಬೇಕಾದ ಅನಿವಾರ್ಯತೆ ಡಿಕೆಶಿಗೆ ಎದುರಾಗಿದೆ.

ಸೋಮವಾರ ವಿಚಾರಣೆ ವೇಳೆ ಡಿ.ಕೆ. ಶಿವಕುಮಾರ್​ ನೀಡಿದ್ದ ಉತ್ತರಗಳಿಗೆ ಸಮಾಧಾನಗೊಳ್ಳದ ಅಧಿಕಾರಿಗಳು ಮತ್ತಷ್ಟು ಪ್ರಶ್ನೆಗಳನ್ನು ಸಿದ್ದಪಡಿಕೊಂಡು ವಿಚಾರಣೆಗೆ ತಯಾರಿ ನಡೆಸಿಕೊಂಡಿದ್ದಾರೆ. ನಾಳೆ ಡಿ.ಕೆ.ಶಿವಕುಮಾರ್​ ಜೊತೆ ಡಿಕೆಶಿ ಮಾವ ತಮ್ಮಯ್ಯ ಹಾಗೂ ಶರ್ಮಾ ಟ್ರಾವೆಲ್ಸ್​​ ಮಾಲೀಕ ಸುನಿಲ್​​ ಶರ್ಮಾ ಕೂಡ ಹಾಜರಾಗುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್​ ಮನೆ ಹಾಗೂ ಇತರೆಡೆ ದಾಳಿ ವೇಳೆ 300 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಅಲ್ಲದೆ, 15 ಕೋಟಿ ರೂ ನಗದು ಹಾಗೂ ಚಿನ್ನಾಭರಣ ವಶಕ್ಕೆ ಪಡೆಯಾಲಾಗಿದೆ. ಹೀಗಾಗಿ ಡಿ.ಕೆ.ಶಿವಕುಮಾರ್​, ಪತ್ನಿ ಉಷಾ ಶಿವಕುಮಾರ್​ ಹಾಗೂ ಮಕ್ಕಳ ಬ್ಯಾಂಕ್​ ಅಕೌಂಟ್​ಗಳನ್ನು ಸೀಜ್​ ಮಾಡಲಾಗಿದೆ.