ಗೌರಿ ಲಂಕೇಶ್ ಹತ್ಯೆ ತನಿಖೆ ಕೈಗೊಂಡಿರುವ ಎಸ್'ಐಟಿ ಪೊಲೀಸರು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ.
ಬೆಂಗಳೂರು (ಸೆ.07): ಗೌರಿ ಲಂಕೇಶ್ ಹತ್ಯೆ ತನಿಖೆ ಕೈಗೊಂಡಿರುವ ಎಸ್'ಐಟಿ ಪೊಲೀಸರು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ.
ನಕ್ಸಲರಿಂದ ಗೌರಿಗೆ ಬೆದರಿಕೆ ಇತ್ತು ಎಂದು ಸಹೋದರ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದರು. ಇಂದ್ರಜಿತ್ ಹೇಳಿಕೆ ನಂತರ ಎಸ್'ಐಟಿ ಪೊಲೀಸರು ನಕ್ಸಲ್ ಮುಖಂಡರು ಮತ್ತು ಗೌರಿ ನಡುವೆ ಭಿನ್ನಾಭಿಪ್ರಾಯಗಳು ಇದ್ದವಾ? ಎಂಬ ಬಗ್ಗೆ ಮಾಹಿತಿ ಕೇಳಿದ್ದಾರೆ.
ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಗೌರಿ ಲಂಕೇಶ್ ಮಾಡಿದ್ದರು. ಸಿರಿಮನೆ ನಾಗರಾಜ್, ನೂರ್ ಜುಲ್ಫೀಕರ್ ಇಬ್ಬರನ್ನು ಮುಖ್ಯವಾಹಿನಿಗೆ ಕರೆತರಲಾಗಿತ್ತು. ಇದು ಕೆಲ ನಕ್ಸಲ್ ಮುಖಂಡರ ಸಿಟ್ಟಿಗೆ ಕಾರಣವಾಗಿತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ. ಮುಖ್ಯವಾಹಿನಿಗೆ ಬಂದ ಇಬ್ಬರನ್ನು ಹೇಡಿಗಳು ಎಂದು ಕೆಲ ನಕ್ಸಲ್ ಮುಖಂಡರು ಟೀಕಿಸಿದ್ದರು. ನಕ್ಸಲ್ ಚಳವಳಿ ತೀವ್ರತೆ ಕಳೆದುಕೊಳ್ಳಲು ಗೌರಿ ಕಾರಣ ಎಂಬ ಸಿಟ್ಟು ಕೆಲ ನಕ್ಸಲರಿಗಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ.
ನಕ್ಸಲ್ ಪರ ಹೋರಾಟಗಾರ್ತಿ ಎಂದು ಗೌರಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದಾರೆ ಎಂಬ ಸಿಟ್ಟು ನಕ್ಸಲರಿಗಿತ್ತು. ಕೆಲ ನಕ್ಸಲರನ್ನು ಬಲವಂತವಾಗಿ ನಕ್ಸಲ್ ಚಳುವಳಿಯಿಂದ ವಿಮುಖರನ್ನಾಗಿಸಿದ್ದರು ಗೌರಿ ಲಂಕೇಶ್. ಇವರ ಕೆಲ ವಿಚಾರಗಳು ನಕ್ಸಲ್ ಮುಖಂಡರಿಗೆ ಪಥ್ಯವಾಗುತ್ತಿರಲಿಲ್ಲ. ನಕ್ಸಲರನ್ನು ಶರಣಾಗತಿ ಮಾಡುವ ಮೂಲಕ ಸಿಎಂ ಗೆ ಗೌರಿ ಹತ್ತಿರವಾಗಿದ್ದಾರೆ ಎಂಬ ಆಕ್ರೋಶ ನಕ್ಸಲ್ ಮುಖಂಡರಿಗಿತ್ತು ಎನ್ನುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.
