ದಲಿತ ಬಾಲಕಿ ಪರಿಹಾರದಲ್ಲಿ ಸಿಎಂ ತಾರತಮ್ಯ
ಹಾಡುಹಗಲೇ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿವೆ. ದಲಿತ ಬಾಲಕಿ ಮೇಲೆ ನಡೆದ ದೌರ್ಜನ್ಯ ದುರಾದೃಷ್ಟಕರ ಬೆಳವಣಿಗೆ
ವಿಜಯಪುರ(ಜ.10): ಮಂಗಳೂರಲ್ಲಿ ಕೊಲೆಯಾದ ಬಶೀರ್ ಹಾಗೂ ದೀಪಕ್ ರಾವ್ ಕುಟುಂಬಕ್ಕೆ10 ಲಕ್ಷ ಸರ್ಕಾರ ಪರಿಹಾರ ನೀಡಿದ ಸರ್ಕಾರ ವಿಜಯಪುರದಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಅಪ್ರಾಪ್ತೆ ಕುಟುಂಬಕ್ಕೆ ಕೇವಲ 4 ಲಕ್ಷ ನೀಡಿ ತಾರತಮ್ಯವೆಸಗಿದೆ ಎಂದು ನಟ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಪ್ರಾಪ್ತೆ ಮನೆಗೆ ಭೇಟಿ ಬಳಿಕ ಮಾತನಾಡಿದ ಅವರು, ಚಾರ್ಜಶೀಟ್ ಬಳಿಕ ಬಾಕಿ ಪರಿಹಾರ ನೀಡುತ್ತೇವೆ ಎಂದು ಹೇಳಿರುವುದು ದಲಿತರ ಮೇಲೆ ಮಾಡುತ್ತಿರುವ ದೌರ್ಜನ್ಯ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಪರಾಧ ಪ್ರಕರಣಗಳು ನಾಲ್ಕು ಪಟ್ಟು ಜಾಸ್ತಿಯಾಗಿದೆ. ಹಾಡುಹಗಲೇ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿವೆ. ದಲಿತ ಬಾಲಕಿ ಮೇಲೆ ನಡೆದ ದೌರ್ಜನ್ಯ ದುರಾದೃಷ್ಟಕರ ಬೆಳವಣಿಗೆ ಎಂದರು.
ನೊಂದ ಕುಟುಂಬದ ರಕ್ಷಣೆಗೆ ನಿಲ್ಲಬೇಕಿದ್ದ ಉಸ್ತುವಾರಿ ಮಂತ್ರಿ ಎಂ.ಬಿ. ಪಾಟೀಲ್ ಅವರು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಧರ್ಮ-ಜಾತಿಗಳ ನಡುವೆ ಸಂಘರ್ಷ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಮೊದಲು ದಲಿತ ಬಾಲಕಿಯ ಮೇಲೆ ಆಗಿರುವ ದೌರ್ಜನ್ಯಕ್ಕೆ ನ್ಯಾಯ ಕೊಡಿಸಲು ಮುಂದಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.