ಪಾಕಿಸ್ತಾನ ಸೇರಿದಂತೆ 57 ಮುಸ್ಲಿಂ ರಾಷ್ಟ್ರಗಳು ಒಐಸಿಯ ಸದಸ್ಯತ್ವ ಹೊಂದಿವೆ. ವಿಶ್ವಸಂಸ್ಥೆ ಮೊದಲಾದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಸಂಸ್ಥೆಯು ಈ ಹಿಂದೆಯೂ ಕೆಲ ಬಾರಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದಿದೆ. ಆ ಸಂದರ್ಭದಲ್ಲೆಲ್ಲಾ ಭಾರತ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದೆ.

ನವದೆಹಲಿ(ಸೆ. 16): ಜಗತ್ತಿನ ಮುಸ್ಲಿಂ ರಾಷ್ಟ್ರಗಳ ಪ್ರತಿನಿಧಿ ಎಂದು ಹೇಳಿಕೊಳ್ಳುವ ಓಐಸಿ ಸಂಸ್ಥೆಗೆ ಭಾರತ ಛೀಮಾರಿ ಹಾಕಿದೆ. ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರ ವಿಚಾರದ ಬಗ್ಗೆ ಇಸ್ಲಾಮಿಕ್ ಸಹಕಾರ ಸಂಸ್ಥೆ(ಒಐಸಿ)ಗೆ ಭಾರತ ಸರಿಯಾಗಿ ತಿರುಗೇಟು ನೀಡಿದೆ. ಜಮ್ಮು ಕಾಶ್ಮೀರ ಸಮಸ್ಯೆಯು ಭಾರತದ ಆಂತರಿಕ ವಿಚಾರವಾಗಿದ್ದು, ಅದರಲ್ಲಿ ಮೂಗು ತೂರಿಸುವ ಹಕ್ಕು ಒಐಸಿಗೆ ಇಲ್ಲ ಎಂದು ಭಾರತದ ವಿಶ್ವಸಂಸ್ಥೆ ಕಾರ್ಯದರ್ಶಿ ಸುಮಿತ್ ಸೇಠ್ ಝಾಡಿಸಿದ್ದಾರೆ.

ಒಐಸಿ ಸಂಸ್ಥೆಯ ಪ್ರತಿನಿಧಿಯಾಗಿ ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿತ್ತು. ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಅಲ್ಲಿಯ ಜನರ ಅಭಿಪ್ರಾಯಗಳನ್ನು ಸರಕಾರ ಬಲವಂತವಾಗಿ ಹತ್ತಿಕ್ಕುತ್ತಿದೆ ಎಂದು ಪಾಕಿಸ್ತಾನವು ಆರೋಪಿಸಿತ್ತು.

ಈ ಬಗ್ಗೆ ಮಾತನಾಡಿದ ಸುಮೀತ್ ಸೇಠ್, "ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯವಾಗ ಅಂಗವಾಗಿದೆ. ಒಐಸಿಯಿಂದ ಇಂತಹ ಹೇಳಿಕೆಗಳು ಬರುತ್ತಿರುವುದು ದುರದೃಷ್ಟಕರ," ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನ ಸೇರಿದಂತೆ 57 ಮುಸ್ಲಿಂ ರಾಷ್ಟ್ರಗಳು ಒಐಸಿಯ ಸದಸ್ಯತ್ವ ಹೊಂದಿವೆ. ವಿಶ್ವಸಂಸ್ಥೆ ಮೊದಲಾದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಸಂಸ್ಥೆಯು ಈ ಹಿಂದೆಯೂ ಕೆಲ ಬಾರಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದಿದೆ. ಆ ಸಂದರ್ಭದಲ್ಲೆಲ್ಲಾ ಭಾರತ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದೆ.