ಗುರು ಗಂಭೀರ್ಗೆ ಬೆಂಚ್ ಕಾಯಿಸಿದ ಶಿಷ್ಯ ಕೊಹ್ಲಿ, ನಂಬಿಕೆ ಉಳಿಸಿಕೊಳ್ಳದ ಸ್ನೇಹಿತ ಶಿಖರ್
ಕೊಲ್ಕತ್ತಾ(ಸೆ.30): ಟೀಮ್ ಇಂಡಿಯದಿಂದ ಹಲವು ದಿನಗಳಿಂದ ದೂರ ಉಳಿದ್ದಿದ್ದ ಗುರು ಗಂಭೀರ್ಗೆ ಸ್ಥಾನ ನೀಡುವುದೋ, ಇಲ್ಲ ಸ್ನೇಹಿತ ಶಿಖರ್'ಗೆ ಅವಕಾಶ ಕೊಡುವುದೋ ಎಂಬ ಗೊಂದಲದಲ್ಲಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ವಿಫಲರಾಗಿದ್ದಾರೆ.
ಎಲ್ಲರೂ ಆಶ್ಚರ್ಯಕ್ಕೊಳಗಾಗುವಂತೆ ಗಂಭೀರ್ ಬದಲು ಸ್ಥಾನ ಅಂತಿಮ 11ರೊಳಗೆ ಸೇರಿಕೊಂಡಿದ್ದ ಶಿಖರ್ ನಾಯಕನ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಹೌದು, ಕೊಹ್ಲಿ ಲೆಕ್ಕಾಚಾರವನ್ನು ಧವನ್ ಉಲ್ಟಾ ಮಾಡಿದ್ದಾರೆ. ಹೊಸ ಬಾಲ್ ಎದುರಿಸುವಲ್ಲಿ ವಿಫಲರಾದ ಅವರು, ದೊಡ್ಡ ಓಪನಿಂಗ್ ಇರಲಿ ಸಾಧಾರಣ ಆರಂಭವನ್ನೂ ತಂಡಕ್ಕೆ ತಂದ್ಕೊಡಲಿಲ್ಲ. ಕೇವಲ 1 ರನ್ಗಳಿಗೆ ನಿರ್ಗಮಿಸಿದರು.
ಗಂಭೀರ್ಗೆ ಬೆಂಚ್ ಕಾಯಿಸಿದ ಕೊಹ್ಲಿ !
ಗಂಭೀರ್ ಬೆಂಚ್ ಕಾಯುವಂತೆ ಮಾಡಿದ್ದು ವಿರಾಟ್. ರಾಹುಲ್ ಗಾಯಾಳುವಾಗ್ತಿದ್ದಾಗೆಯೇ ಕೋಚ್ ಅನಿಲ್ ಕುಂಬ್ಳೆ ಸಲಹೆ ಮೇರೆಗೆ ಬಿಸಿಸಿಐ ಗೌತಿಗೆ ಬುಲಾವ್ ನೀಡಿತ್ತು.
ಮತ್ತೋರ್ವ ಆರಂಭಿಕ ಶಿಖರ್ ಧವನ್ ಅದಾಗಲೇ ತಂಡದಲ್ಲಿದ್ದರೂ ಗಂಭೀರ್ಗೆ 2 ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದರು ಕೊಹ್ಲಿ ಗೌತಿಯನ್ನು ತಂಡದಲ್ಲಿ ಸೇರಿಸಿಕೊಳ್ಳದೆ ತಪ್ಪು ಮಾಡಿದ್ದಾರೆ.
ದೇಸಿ ಟೂರ್ನಿಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಗಂಭೀರ್, ದುಲೀಪ್ ಟ್ರೋಫಿಯಲ್ಲಿಯೂ ಮಿಂಚಿದ್ದರು. ಅದ್ಭುತ ಫಾರ್ಮ್ನಲ್ಲಿದ್ದ ಅವ್ರ ಲಯಬದ್ಧವಾದ ಆಟ ತಂಡಕ್ಕೆ ಉಪಯೋಗವಾಗಲಿ ಅನ್ನೋದು ಎಲ್ಲರ ಆಲೋಚನೆಯಾಗಿತ್ತು. ಆದ್ರೆ, ವಿರಾಟ್ ಮಾತ್ರ ಇದನ್ನು ನಿರ್ಲಕ್ಷಿಸಿ ತಪ್ಪು ಮಾಡಿದ್ದಾರೆ.