ಸಿದ್ದರಾಮಯ್ಯ ಜೊತೆಗೆ ಕಾಣಿಸಿದ ಶಾಸಕ ಶಂಕರ್!
ಪಕ್ಷೇತರ ಶಾಸಕ ಶಂಕರ್ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
ನವದೆಹಲಿ : ರಾಣಿಬೆನ್ನೂರಿನ ಪಕ್ಷೇತರ ಶಾಸಕ ಶಂಕರ್ ದೆಹಲಿಯಲ್ಲಿ ಸಿದ್ದರಾಮಯ್ಯ ಅವರ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.
ಶನಿವಾರ ಬೆಳಗ್ಗೆ ಸಿದ್ದರಾಮಯ್ಯ ಅವರ ಜೊತೆಗೆಯೇ ಕರ್ನಾಟಕ ಭವನಕ್ಕೆ ಆಗಮಿಸಿದ ಶಂಕರ್ ಆ ಬಳಿಕ ಸಂಜೆ ಸಿದ್ದರಾಮಯ್ಯ ಅವರೊಂದಿಗೆಯೇ ಕರ್ನಾಟಕ ಭವನದಿಂದ ನಿರ್ಗಮಿಸಿದರು. ಈ ಬಗ್ಗೆ ಶಂಕರ್ ಅವರನ್ನು ಪ್ರಶ್ನಿಸಿದಾಗ, ನಾನು ಬೇರೆ ಕಾರಣದಿಂದ ಡೆಲ್ಲಿಗೆ ಬಂದಿದ್ದೆ. ಸಿದ್ದರಾಮಯ್ಯ ಕೂಡ ಬಂದಿದ್ದರು.
ಈ ಸಂದರ್ಭದಲ್ಲಿ ಭೇಟಿಯಾಗಿದ್ದೇವೆ. ನಾನು ಯಾರನ್ನೂ ಬೆಂಬಲಿಸುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ನನ್ನ ಬೆಂಬಲವನ್ನು ಯಾರೂ ಕೇಳಿಯೂ ಇಲ್ಲ. ಸಂದರ್ಭ ಬಂದಾಗ ತೀರ್ಮಾನ ಕೈಗೊಳ್ಳುತ್ತೇನೆ. ಸಿದ್ದರಾಮಯ್ಯ ಅವರ ಜೊತೆ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಹೇಳಿದರು.