ಇಂಡಸ್ ಜಲ ಒಪ್ಪಂದ: ಸಂಸತ್ ನಲ್ಲಿ ಚರ್ಚಿಸಿದ ಬಳಿಕ ಮೋದಿ ನಿರ್ಧಾರ
ನವದೆಹಲಿ (ಸೆ.26): ಉರಿ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ 1960 ರಲ್ಲಿ ಪಾಕ್ ಜೊತೆ ಮಾಡಿಕೊಂಡ 'ಇಂಡಸ್ ಜಲ ಒಪ್ಪಂದ'ವನ್ನು ಮುಂದುವರೆಸಬೇಕೆ ಬೇಡವೇ ಕುರಿತಂತೆ ವಿವಾದ ನಡೆಯುತ್ತಿದೆ. ಈ ಸಂಬಂಧ ಪ್ರಧಾನಿ ಮೋದಿ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಕಾಶ್ಮೀರದ ಉರಿ ಪ್ರದೇಶದ ಮೇಲೆ ಸೆ.18 ರಂದು ಪಾಕ್ ಭಯೋತ್ಪಾದಕ ದಾಳಿ ಮಾಡಿದ್ದು 18 ಮಂದಿ ಸೈನಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ 1960 ರಲ್ಲಿ ಮಾಡಿಕೊಂಡ ಇಂಡಸ್ ಜಲ ಒಪ್ಪಂದವನ್ನು ಮುಂದುವರೆಸಬೇಕೇ, ಅದರ ಸಾಧಕ-ಬಾಧಕಗಳ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್, ಜಲ ಸಂಪನ್ಮೂಲ ಕಾರ್ಯದರ್ಶಿ ಶಶಿ ಶೇಖರ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಮೋದಿ ಸಮಾಲೋಚನೆ ನಡೆಸಿದರು. ಸಂಸತ್ ನಲ್ಲಿ ಚರ್ಚಿಸಿದ ಬಳಿಕ ಕೇಂದ್ರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.