ಸಂವಿಧಾನದ ನಿರ್ಮಾತೃಗಳ ಪ್ರಕಾರ ಅತ್ಯಂತ ಅಪರೂಪದ  ಸಂದರ್ಭಗಳಲ್ಲಿ ಉಪಯೋಗಿಸಬೇಕಾದ ‘ಮಹಾಭಿಯೋಗ’ ಕೂಡ ಈಗ ದೇಶದ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಹಗ್ಗಜಗ್ಗಾಟಕ್ಕಾಗಿ ಬಳಕೆಯಾಗುತ್ತಿದ್ದು, ವಿಪಕ್ಷಗಳು ಇತಿಹಾಸದಲ್ಲಿಯೇ ಮೊದಲ ಬಾರಿಗೆ ನೇರವಾಗಿ ಸುಪ್ರೀಂಕೋರ್ಟ್ ಮುಖ್ಯ  ನ್ಯಾಯಮೂರ್ತಿಗಳ ವಿರುದ್ಧವೇ ಸಹಿ ಸಂಗ್ರಹ ಆರಂಭಿಸಿವೆ.

ನವದೆಹಲಿ (ಏ. 03):  ಸಂವಿಧಾನದ ನಿರ್ಮಾತೃಗಳ ಪ್ರಕಾರ ಅತ್ಯಂತ ಅಪರೂಪದ  ಸಂದರ್ಭಗಳಲ್ಲಿ ಉಪಯೋಗಿಸಬೇಕಾದ ‘ಮಹಾಭಿಯೋಗ’ ಕೂಡ ಈಗ ದೇಶದ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಹಗ್ಗಜಗ್ಗಾಟಕ್ಕಾಗಿ ಬಳಕೆಯಾಗುತ್ತಿದ್ದು, ವಿಪಕ್ಷಗಳು ಇತಿಹಾಸದಲ್ಲಿಯೇ ಮೊದಲ ಬಾರಿಗೆ ನೇರವಾಗಿ ಸುಪ್ರೀಂಕೋರ್ಟ್ ಮುಖ್ಯ  ನ್ಯಾಯಮೂರ್ತಿಗಳ ವಿರುದ್ಧವೇ ಸಹಿ ಸಂಗ್ರಹ ಆರಂಭಿಸಿವೆ.

ಕಳೆದ ವಾರದಿಂದ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಮಹಾಭಿಯೋಗ  ಪ್ರಸ್ತಾವನೆಯ ಕರಡು ಪ್ರತಿ ಓಡಾಡತೊಡಗಿದ್ದು, ಕಾಂಗ್ರೆಸ್ ಮಾಜಿ  ಅಧ್ಯಕ್ಷೆ ಸೋನಿಯಾ ಗಾಂಧಿ  50 ರಾಜ್ಯಸಭಾ ಸಂಸದರ ಸಹಿ  ತೆಗೆದುಕೊಳ್ಳುವ ಜವಾಬ್ದಾರಿಯನ್ನು ಗುಲಾಂ ನಬಿ ಅಜಾದ್, ಆನಂದ್ ಶರ್ಮಾ ಮತ್ತು ಅಹ್ಮದ್ ಪಟೇಲ್‌ರಿಗೆ ವಹಿಸಿದ್ದಾರೆ.  ಈಗಾಗಲೇ ೪೦ಕ್ಕೂ ಹೆಚ್ಚು ಸಹಿ ತೆಗೆದುಕೊಳ್ಳಲಾಗಿದೆ. ನಾಳೆ-ನಾಡಿದ್ದು ಮಹಾಭಿಯೋಗದ ನೋಟಿಸ್ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ನೀಡಲು ವಿಪಕ್ಷಗಳು ಯೋಚಿಸುತ್ತಿವೆ. 

ದೀಪಕ್ ಮಿಶ್ರಾ ಏನು ಮಾಡಿದ್ದಾರೆ? 

 ದೀಪಕ್ ಮಿಶ್ರಾ ಅವರನ್ನು ಹೈಕೋರ್ಟ್‌ಗೆ ನೇಮಿಸಿದ್ದು,  ನಂತರ ಸುಪ್ರೀಂಕೋರ್ಟ್‌ಗೆ ಬಡ್ತಿ ನೀಡಿದ್ದು ಎಲ್ಲವೂ ಕಾಂಗ್ರೆಸ್  ಸರ್ಕಾರದ ಸಮಯದಲ್ಲಿಯೇ. ಆದರೆ ಮಿಶ್ರಾ ಯಾವಾಗ  ಅಯೋಧ್ಯೆ ವಿವಾದದ ವಿಚಾರಣೆಯನ್ನು ಆರಂಭಿಸಿದರೋ
ಕಾಂಗ್ರೆಸ್ ಕಣ್ಣು ಕೆಂಪಗಾಗಿದೆ. ಇದಕ್ಕೆ ಪ್ರಮುಖ ಕಾರಣ  ಅಕ್ಟೋಬರ್‌ನಲ್ಲಿ ನಿವೃತ್ತಿಯಾಗಲಿರುವ ನ್ಯಾಯಮೂರ್ತಿಮಿಶ್ರಾ  ಅಯೋಧ್ಯೆ ವಿವಾದದ ತೀರ್ಪು ನೀಡಿಯಾರು ಎಂಬ ಆತಂಕ.  ಒಂದು ವೇಳೆ ಮಂದಿರ ನಿರ್ಮಾಣದ ಪರವಾಗಿ ತೀರ್ಪು ನೀಡಿದರೆ  2019 ರಲ್ಲಿ ಬಿಜೆಪಿಗೆ ಲಾಭವಾಗಬಹುದು ಎಂಬ ಚಿಂತೆ. ವಿರುದ್ಧ  ತೀರ್ಪು ನೀಡಿದಲ್ಲಿ ನರೇಂದ್ರ ಮೋದಿ ಹಿಂದುತ್ವ ಧ್ರುವೀಕರಣಕ್ಕಾಗಿ  ಬಳಸಿಕೊಳ್ಳಬಹುದು ಎಂಬ ಆತಂಕ. ಹೀಗಾಗಿ ನ್ಯಾ| ಮಿಶ್ರಾ ವಿರುದ್ಧ  ಸುಪ್ರೀಂ ಕೋರ್ಟ್‌ನಲ್ಲಿಯೇ ನಾಲ್ವರು ನ್ಯಾಯಮೂರ್ತಿಗಳು  ಬಂಡೆದ್ದ ಪ್ರಕರಣವನ್ನು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್,  ಮಹಾಭಿಯೋಗ ಪ್ರಸ್ತಾವನೆ ತಂದು ದೀಪಕ್ ಮಿಶ್ರಾ ತಾನೇ  ತಾನಾಗಿ ಅಯೋಧ್ಯೆ ಸೇರಿದಂತೆ ಪ್ರಮುಖ ಪ್ರಕರಣಗಳಿಂದ ಹಿಂದೆ
ಸರಿಯುವಂತೆ ಮಾಡುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

ಹೆಚ್ಚಿನ ಸುದ್ದಿಗಳಿಗೆ ಇಂಡಿಯಾ ಗೇಟ್  ಕ್ಲಿಕ್ ಮಾಡಿ