ಜಮೀರ್ಗೆ ಸಿಬಿಐ ನೋಟಿಸ್: ಹಾಜರಿಗೆ 5 ದಿನ ಕಾಲಾವಕಾಶ
ಐಎಂಎ ಬಹುಕೋಟಿ ವಂಚನೆ ಪ್ರಕರಣ; ಬಿರುಸಿನಿಂದ ಸಾಗುತ್ತಿದೆ ತನಿಖೆ | ತನಿಖಾಧಿಕಾರಿಗಳನ್ನು ಭೇಟಿ ಮಾಡಿದ ಜಮೀರ್ ಖಾನ್ | ವಿಚಾರಣೆಗೆ ಐದು ದಿನಗಳ ಕಾಲಾವಕಾಶ ಪಡೆದಿದ್ದಾರೆ
ಬೆಂಗಳೂರು (ಸೆ. 20): ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಬಿಐ ತನಿಖೆ ಬಿರುಸಿನಿಂದ ಮುಂದುವರೆದಿದ್ದು, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರು ಬುಧವಾರ ತನಿಖಾಧಿಕಾರಿಗಳನ್ನು ಭೇಟಿಯಾಗಿ ವಿಚಾರಣೆಗೆ ಐದು ದಿನಗಳ ಕಾಲಾವಕಾಶ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಡಿಕೆಶಿ ಭತ್ತ ಬೆಳೆದಿದ್ದಾರೆಯೇ ಹೊರತು ಬಂಗಾರವಲ್ಲ
ಈ ಪ್ರಕರಣದ ಸೆ.20 ರಂದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವರಿಗೆ ಸಿಬಿಐ ನೋಟಿಸ್ ನೀಡಿತ್ತು. ಈ ಸಂಬಂಧ ನಗರದ ಗಂಗಾ ನಗರದಲ್ಲಿರುವ ಸಿಬಿಐ ಕಚೇರಿಗೆ ತೆರಳಿದ ಜಮೀರ್ ಅವರು, ‘ನಾನು ಪೂರ್ವನಿಗದಿತ ಕಾರ್ಯನಿಮಿತ್ತ ಜೈಪುರಕ್ಕೆ ಹೋಗುತ್ತಿದ್ದೇನೆ. ಹೀಗಾಗಿ ವಿಚಾರಣೆಗೆ ಬರಲು ಐದು ದಿನಗಳ ಕಾಲಾವಕಾಶ ನೀಡಬೇಕು’ ಎಂದು ಅಧಿಕಾರಿಗಳಿಗೆ ಕೋರಿದ್ದಾರೆ. ಈ ಮನವಿಯನ್ನು ಪುರಸ್ಕರಿಸಿದ ಅಧಿಕಾರಿಗಳು, ಮುಂದೆ ವಿಚಾರಣೆಗೆ ಬರುವಂತೆ ಸೂಚಿಸಿ ಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಪೇಜಾವರ ಶ್ರೀ ಶಿಷ್ಯ ಡಿಪಿ ಅನಂತ್ ಟಿಟಿಡಿ ಸದಸ್ಯರಾಗಿ ನೇಮಕ
ಐಎಂಎ ಮಾಲಿಕ ಮಹಮ್ಮದ್ ಮನ್ಸೂರ್ ಖಾನ್ಗೆ ರಿಚ್ಮಂಡ್ ಟೌನ್ ಸಮೀಪದ ತಮ್ಮ ಆಸ್ತಿಯನ್ನು .9 ಕೋಟಿಗೆ ಜಮೀರ್ ಮಾರಾಟ ಮಾಡಿದ್ದರು. ಈ ಆಸ್ತಿ ಪರಭಾರೆ ವಿಚಾರವನ್ನು ಅವರು, 2018ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಕೂಡಾ ಉಲ್ಲೇಖಿಸಿದ್ದರು.
ಆದರೆ ಮಾರುಕಟ್ಟೆನಿಗದಿತ ಮೌಲ್ಯಕ್ಕಿಂತ ಹೆಚ್ಚಿನ ದರಕ್ಕೆ ಖಾನ್ಗೆ ಜಮೀರ್ ಆಸ್ತಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆಸ್ತಿ ಮಾರಾಟ ನೆಪದಲ್ಲಿ ಮನ್ಸೂರ್ನಿಂದ ಅವರು ಕೋಟ್ಯಾಂತರ ವಹಿವಾಟು ನಡೆಸಿರುವ ಬಗ್ಗೆ ಅಧಿಕಾರಿಗಳು ಸಹ ಶಂಕಿಸಿದ್ದಾರೆ.
ಈ ಶಂಕೆ ಹಿನ್ನೆಲೆಯಲ್ಲಿ ಎಸ್ಐಟಿ ಹಾಗೂ ಇಡಿ ಅಧಿಕಾರಿಗಳು, ಜಮೀರ್ ಅವರನ್ನು ಸುದೀರ್ಘವಾಗಿ ಪ್ರಶ್ನಿಸಿ ಹೇಳಿಕೆ ದಾಖಲಿಸಿದ್ದರು. ಈಗ ವಂಚನೆ ಪ್ರಕರಣದ ತನಿಖೆ ಕೈಗೊಂಡಿರುವ ಸಿಬಿಐ, ಜಮೀರ್ ಅವರಿಗೆ ಬುಲಾವ್ ನೀಡಿತ್ತು.