ನಾನು ಹಿಂದೂ ವಿರೋಧಿಯಲ್ಲ; ಶಾ, ಮೋದಿ, ಹೆಗಡೆ ವಿರೋಧಿ: ರೈ
‘ನಾನು ಹಿಂದು ವಿರೋಧಿ ಅಲ್ಲ. ಆದರೆ ನಾನು ಮೋದಿ ವಿರೋಧಿ, ಅನಂತ್ ಹೆಗಡೆ ವಿರೋಧಿ, ಅಮಿತ್ ಶಾ ವಿರೋಧಿ. ಏಕೆಂದರೆ, ಅವರೆಲ್ಲ ನನ್ನ ಪ್ರಕಾರ ಹಿಂದುಗಳೇ ಅಲ್ಲ. ಮನುಷ್ಯರ ಹತ್ಯೆ ಬೆಂಬಲಿಸುವವರು ಹಿಂದುಗಳಾಗುವುದಿಲ್ಲ’ ಎಂದು ನಟ ಪ್ರಕಾಶ್ ರೈ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ಹೈದ್ರಾಬಾದ್ (ಜ.19): ‘ನಾನು ಹಿಂದು ವಿರೋಧಿ ಅಲ್ಲ. ಆದರೆ ನಾನು ಮೋದಿ ವಿರೋಧಿ, ಅನಂತ್ ಹೆಗಡೆ ವಿರೋಧಿ, ಅಮಿತ್ ಶಾ ವಿರೋಧಿ. ಏಕೆಂದರೆ, ಅವರೆಲ್ಲ ನನ್ನ ಪ್ರಕಾರ ಹಿಂದುಗಳೇ ಅಲ್ಲ. ಮನುಷ್ಯರ ಹತ್ಯೆ ಬೆಂಬಲಿಸುವವರು ಹಿಂದುಗಳಾಗುವುದಿಲ್ಲ’ ಎಂದು ನಟ ಪ್ರಕಾಶ್ ರೈ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ಇಂಡಿಯಾ ಟುಡೇ ಟೀವಿ ವಾಹಿನಿಯೊಂದು ಆಯೋಜಿಸಿದ್ದ ಸಂವಾದದಲ್ಲಿ ಗುರುವಾರ ಮಾತನಾಡಿದ ಅವರು, ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಜೆಪಿ ವಕ್ತಾರರೊಬ್ಬರು ಹಾಗೂ ರೈ ನಡುವೆ ಸಣ್ಣ ಜಟಾಪಟಿಯೂ ನಡೆಯಿತು. ಕರ್ನಾಟಕ ಸರ್ಕಾರದಿಂದ ಭೂಮಿ ಪಡೆದಿದ್ದೀರಿ, ಅದಕ್ಕೆ ಹಿಂದುತ್ವದ ವಿರೋಧಿಯಾಗಿದ್ದೀರಿ ಆರೋಪವಿದೆಯಲ್ಲಾ ಎಂದು ನಿರೂಪಕರು ಪ್ರಶ್ನಿಸಿದಾಗ ಅದನ್ನು ನಿರಾಕರಿಸಿದ ರೈ, ನನ್ನ ಬಳಿ ಸಾಕಷ್ಟು ಭೂಮಿ ಇದೆ, ಹಣವಿದೆ. ಸರ್ಕಾರದಿಂದ ಯಾವುದೇ ಭೂಮಿ ಪಡೆದಿಲ್ಲ ಎಂದರು. ಅನಂತ್ ಹೆಗಡೆ ಅವರು ಒಂದು ಧರ್ಮವನ್ನೇ ಭೂಮಿಯಿಂದ ನಿರ್ನಾಮ ಮಾಡಬೇಕು ಎಂದು ಹೇಳುತ್ತಾರೆ. ಹೀಗಾಗಿ ಅವರು ಹಿಂದೂ ಆಗಲು ಸಾಧ್ಯವಿಲ್ಲ ಎಂದರು. ಈ ವೇಳೆ, ಮಧ್ಯಪ್ರವೇಶಿಸಿದ ಬಿಜೆಪಿ ವಕ್ತಾರ ಕೃಷ್ಣ ಸಾಗರ್ ರಾವ್ ಎಂಬುವರು, ‘ಹಿಂದು ಯಾರೆಂದು ನಿರ್ಧರಿಸಲು ನೀವು ಯಾರು? ಎಂದು ಕೇಳಿದರು. ‘ನಾನೊಬ್ಬ ಹಿಂದು ವಿರೋಧಿ ಎಂದು ಅವರು ನಿರ್ಧರಿಸುವುದಾದರೆ, ನಾನು ಕೂಡ ಅವರೆಲ್ಲಾ ಹಿಂದುಗಳಲ್ಲ ಎಂದು ಹೇಳಬಹುದು’ ಎಂದರು.