ಮಿತಿ ಮೀರಿದ ಅಕ್ರಮ ಕಸಾಯಿಖಾನೆಯವರ ಅಟ್ಟಹಾಸ : ಮೊನ್ನೆ ಟೆಕ್ಕಿ,ಇಂದು ಪೊಲೀಸರು ಮತ್ತು ವಕೀಲರ ಮೇಲೆ ಹಲ್ಲೆ
ಯಲಹಂಕದ ದೊಡ್ಡಬೆಟ್ಟದಹಳ್ಳಿ ಇರುವ ಅಕ್ರಮ ಕಸಾಯಿಖಾನೆ ಮುಚ್ಚುವಂತೆ ನೋಟಿಸ್ ನೀಡಲು ಹೋಗಿದ್ದ ಯಲಹಂಕ ನ್ಯೂಟೌನ್ ಪೊಲೀಸರು ಹಾಗೂ ವಕೀಲರ ಮೇಲೆ ಹಲ್ಲೆ ನಡೆಸಿದ್ದಾರೆ
ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಿತಿ ಮೀರಿದ ಅಕ್ರಮ ಕಸಾಯಿಖಾನೆ ಮಾಲೀಕರ ಅಟ್ಟಹಾಸ. ಮೊನ್ನೆ ಟೆಕ್ಕಿ ಮೇಲೆ ಹಲ್ಲೆ ಮಾಡಿದ್ದ ಕಸಾಯಿ ಖಾನೆ ಮಾಲೀಕರು, ಇಂದು ಹೈಕೋರ್ಟ್ ನಲ್ಲಿ ಕ್ರಿಮಿನಲ್ ಪಿಟಿಷನ್ ಸಲ್ಲಿಸಿದ್ದ ಕವಿತಾ ಮತ್ತು ಜೋಷನ್ ಆಂಟೋನಿ ಮೇಲೆ ದಾಳಿ ನಡೆಸಿದ್ದಾರೆ. ವಿಪರ್ಯಾಸವೆಂದರೆ ಇವತ್ತು ಪೊಲೀಸ್ ಮತ್ತು ಹೈಕೋರ್ಟ್ ನೇಮಿಸಿದ್ದ ಕಮಿಷನರ್ ಸಮ್ಮುಖಲ್ಲಿಯೇ ದಾಳಿ ನಡೆದೆ. ಯಲಹಂಕದ ಎಂಎಸ್ ಪಾಳ್ಯದಲ್ಲಿ ಅಕ್ರಮ ಕಸಾಯಿ ಖಾನೆಗಳಿವೆ ಎಂಬ ಮಾಹಿತಿ ಮೇರೆಗೆ ಸ್ಥಳ ಪರಿಶೀಲನೆಗೆ ಹೋಗಿದ್ದ ತಂಡದ ಮೇಲೆ ಹಲ್ಲೆ ನಡೆದಿದೆ. ಅರ್ಜಿದಾರರಾದ ಕವಿತಾ, ಆಂಟೋನಿ ಸೇರಿದಂತೆ ಪೊಲೀಸರ ಮೇಲೆ ಏಕಾಏಕಿ 200 ಜನರಿದ್ದ ಗುಂಪು ದಾಳಿ ನಡೆಸಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಕಾರು ಗ್ಲಾಸ್ ಒಡೆದಿದ್ದಾರೆ. ಘಟನೆಯಲ್ಲಿ ಪೊಲೀಸ್ ಮತ್ತು ಹೈ ಕೋರ್ಟ್ ಕಮಿಷನರ್ ವಾಹನ ಕೂಡ ಜಖಂಗೊಂಡಿವೆ. ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಿಮಲ್ ವೆಲ್ಫರ್ ಬೋರ್ಡ್ ಆಫ್ ಇಂಡಿಯಾ ಸಂಸ್ಥೆಯ ಸದಸ್ಯರಾದ ಕವಿತಾ, ಆಂಟೋನಿ ಕಳೆದ ಮೂರು ತಿಂಗಳ ಹಿಂದೆ ಹೈ ಕೋರ್ಟ್ ನಲ್ಲಿ ಅಕ್ರಮ ಕಸಾಯಿ ಖಾನೆಗೆ ಕಡಿವಾಣ ಹಾಕುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ್ದ ಹೈ ಕೋರ್ಟ್, ಪೊಲೀಸರ ಮತ್ತು ಕೋರ್ಟ್ ಕಮಿಷನರ್ ನೇತೃತ್ವದಲ್ಲಿ ಸ್ಥಳ ಪರಿಶೀಲಿಸುವಂತೆ ಸೂಚನೆ ನೀಡಿತ್ತು.