ಪೆಟ್ರೋಲ್,  ಡೀಸೆಲ್ ದರ ದಿನದಿನಕ್ಕೇ ಏರಿಕೆಯಾಗುವ ಮೂಲಕ ಜನರ ತಲೆ ನೋವಿಗೆ ಕಾರಣವಾಗಿದೆ. ಇದೇ ವೇಳೆ ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಸರ್ಕಾರ ಒಪ್ಪಿದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ನೀಡಲಾಗುವುದು ಎಂದು ಹೇಳಿದ್ದಾರೆ.

ನವದೆಹಲಿ :  ಪೆಟ್ರೋಲ್, ಡೀಸೆಲ್ ದರ ದಿನದಿನಕ್ಕೂ ಕೂಡ ಏರಿಕೆಯಾಗಿ ಜನರಿಗೆ ಶಾಕ್ ನೀಡುತ್ತಿದೆ. ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್ ಡೀಸೆಲ್ ದರ ಪ್ರತೀ ಲೀಟರ್ ಗೆ ನೂರರ ಸಮೀಪ ಸಾಗುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಇದೇ ವೇಳೆ ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಒಂದು ವೇಳೆ ಸರ್ಕಾರ ಅನುಮತಿ ನೀಡಿ, ತೆರಿಗೆ ವಿನಾಯಿತಿ ನೀಡಿದಲ್ಲಿ 35ರಿಂದ 40 ರು.ಗೆ ಪೆಟ್ರೋಲ್ ನೀಡಲಾಗುವುದು ಎಂದು ಹೇಳಿದ್ದಾರೆ.

ಅಲ್ಲದೇ ಪೆಟ್ರೋಲ್, ಡೀಸೆಲ್ ಅನ್ನು ಅತ್ಯಂತ ಕಡಿಮೆ ಇರುವ ಜಿಎಸ್ ಟಿ ತೆರಿಗೆ ಸ್ಥರದಲ್ಲಿ ತರಬೇಕು ಎಂದು ಈ ವೇಳೆ ಅವರು ಹೇಳಿದ್ದಾರೆ. ಅತ್ಯಧಿಕ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಸದ್ಯ ಜನರ ಜೇಬು ಖಾಲಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 

ಪೆಟ್ರೋಲ್, ಡೀಸೆಲ್ ಬೆಲೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗಿ ದಾಖಲೆ ನಿರ್ಮಾಣವಾಗಿದೆ. ಬೆಲೆ ಏರಿಕೆಯನ್ನು ಖಂಡಿಸಿ ಕೆಲ ದಿನಗಳ ಹಿಂದಷ್ಟೇ ವಿಪಕ್ಷಗಳು ಭಾರತ್ ಬಂದ್ ಆಚರಿಸಿದ್ದವು. ಅದಾದ ನಂತರ ಪಶ್ಚಿಮ ಬಂಗಾಳ, ರಾಜಸ್ಥಾನ, ಕರ್ನಾಟದಲ್ಲಿ ಪೆಟ್ರೋಲ್ ಬೆಲೆಯನ್ನು ಇಳಿಕೆ ಮಾಡಲಾಗಿತ್ತು.