ಕರ್ನಾಟಕದಲ್ಲಿ ಮೈತ್ರಿ ಕೂಟದ ಮುಖಂಡರ ರಾಜೀನಾಮೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ ಸರ್ಕಾರಕ್ಕೆ ಆತಂಕ ಎದುರಾಗಿದೆ. ಒಂದು ವೇಳೆ 15 ಮಂದಿ ಮೈತ್ರಿ ಕೂಟ ತೊರೆದಲ್ಲಿ ಸರ್ಕಾರ ಉರುಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಬೆಂಗಳೂರು [ಜು.2] : ಆಡಳಿತಾರೂಢ ಕಾಂಗ್ರೆಸ್ಸಿನ ಇಬ್ಬರು ಶಾಸಕರು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರದಲ್ಲಿ ಪತನದ ಭೀತಿ ಕಾಣಿಸಿಕೊಂಡಿದ್ದರೂ ಅಷ್ಟು ಸುಲಭವಾಗಿ ಕುಸಿಯುವ ಸಾಧ್ಯತೆ ಕಡಿಮೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯ ವಿಧಾನಸಭೆಯ ಒಟ್ಟು ಸಂಖ್ಯೆ 224. ಇದರಲ್ಲಿ ಪಕ್ಷವಾರು ಬಲಾಬಲ ಹೀಗಿದೆ. ಬಿಜೆಪಿ 105, ಕಾಂಗ್ರೆಸ್‌ 79, ಜೆಡಿಎಸ್‌ 37, ಬಿಎಸ್‌ಪಿ 1 ಹಾಗೂ ಇಬ್ಬರು ಪಕ್ಷೇತರರು. ಬಿಜೆಪಿಗಿಂತ ಒಂದು ಸಂಖ್ಯೆ ಕಡಿಮೆಯಾದರೂ ಸಮ್ಮಿಶ್ರ ಸರ್ಕಾರ ಪತನಗೊಳ್ಳುವುದು ನಿಶ್ಚಿತ. ರಾಜೀನಾಮೆ ನೀಡಿದ ಶಾಸಕರನ್ನು ಹೊರತುಪಡಿಸಿ ಇನ್ನುಳಿಯುವ ಶಾಸಕರ ಸಂಖ್ಯೆಯ ಆಧಾರದ ಮೇಲೆಯೇ ಬಹುಮತ ನಿರ್ಧರಿಸಲಾಗುತ್ತದೆ. ಅಂದರೆ, ಯಾವ ಪಕ್ಷದ ಬಳಿ ವಿಧಾನಸಭೆಯ ಒಟ್ಟು ಬಲದ ಅರ್ಧಕ್ಕಿಂತ ಒಂದು ಸ್ಥಾನ ಹೆಚ್ಚಿರುತ್ತದೆಯೊ ಆ ಪಕ್ಷಕ್ಕೆ ಬಹುಮತ ಇದೆ ಎಂದು ಅಥವಾ ಒಂದು ಸ್ಥಾನ ಕಡಿಮೆ ಇರುವ ಪಕ್ಷಕ್ಕೆ ಬಹುಮತ ಕಳೆದುಕೊಂಡಿದೆ ಎಂದು ತೀರ್ಮಾನಿಸಲಾಗುತ್ತದೆ.

1. ಕಾಂಗ್ರೆಸ್‌, ಜೆಡಿಎಸ್‌ನಿಂದ ಸೇರಿ ಒಟ್ಟಾರೆ 15 ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರ ಪತನ

2. ಇತರೆ 3 ಶಾಸಕರು ಬಿಜೆಪಿ ಬೆಂಬಲಿಸಿ, ಕೈ-ದಳದ 9 ಶಾಸಕರು ರಾಜೀನಾಮೆ ನೀಡಿದರೂ ಅಭದ್ರ

2 ಲೆಕ್ಕಾಚಾರಗಳು

1. ಸ್ಪೀಕರ್‌ ಸೇರಿದಂತೆ ಸದ್ಯ ಸಮ್ಮಿಶ್ರ ಸರ್ಕಾರದ ಒಟ್ಟು ಸಂಖ್ಯಾ ಬಲ 119. ಇದರಲ್ಲಿ ಇಬ್ಬರು ಪಕ್ಷೇತರರು ಮತ್ತು ಬಿಎಸ್‌ಪಿಯ ಒಬ್ಬ ಶಾಸಕರೂ ಸೇರಿದ್ದಾರೆ. ಈ ಸಂಖ್ಯೆ ಬಿಜೆಪಿಗಿಂತ ಕಡಿಮೆ, ಅಂದರೆ 104ಕ್ಕೆ ಇಳಿಯಬೇಕಾದಲ್ಲಿ ಆಡಳಿತಾರೂಢ ಪಕ್ಷಗಳ ಒಟ್ಟು 15 ಮಂದಿ ಶಾಸಕರು ರಾಜೀನಾಮೆ ನೀಡಿ ಹೊರಬರಬೇಕಾಗುತ್ತದೆ. ಆಗ ಸರ್ಕಾರ ಪತನಗೊಳ್ಳಲಿದೆ.

2. ಒಂದು ವೇಳೆ ಪಕ್ಷೇತರರಿಬ್ಬರು ಮತ್ತು ಬಿಎಸ್‌ಪಿಯ ಒಬ್ಬ ಶಾಸಕ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆದು ಬಿಜೆಪಿಗೆ ಬೆಂಬಲ ನೀಡಿದಲ್ಲಿ ಆಗ ಸರ್ಕಾರದ ಬಲ 116ಕ್ಕೆ ಕುಸಿಯುತ್ತದೆ. ಆಗ ಪ್ರತಿಪಕ್ಷ ಬಿಜೆಪಿಯ ಬಲ 108 ಆಗುತ್ತದೆ. ಆಡಳಿತಾರೂಢ ಪಕ್ಷಗಳ 9 ಶಾಸಕರು ರಾಜೀನಾಮೆ ನೀಡಿದಲ್ಲಿ ಸರ್ಕಾರದ ಸಂಖ್ಯಾಬಲ 107ಕ್ಕೆ ಕುಸಿಯಲಿದೆ.