ಇನ್ನಾರು ತಿಂಗಳಲ್ಲಿ ಈ ಖಾತೆಯಲ್ಲಿ ಮಹತ್ವದ ಬದಲಾವಣೆ
ಇನ್ನಾರೂ ತಿಂಗಳಲ್ಲಿ ಈ ಖಾತೆಯಲ್ಲಿ ಮಹತ್ವದ ಬದಲಾವಣೆಯನ್ನು ಕಾಣಬಹುದು. ನಾನೇನು ಎನ್ನುವುದನ್ನು ತೋರಿಸಲು ಇಷ್ಟು ಸಮಯ ಸಾಕು ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರು ಹೇಳಿದ್ದಾರೆ.
ಬೆಂಗಳೂರು : ನಾನು ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಇಲಾಖೆ ಒಪ್ಪಿದ್ದೇನೆ. 90 ರ ದಶಕದಲ್ಲೇ ಹಿರಿಯ ಐಎಎಸ್ ಅಧಿಕಾರಿಗಳಿಗೆ ಗುಣಮಟ್ಟದ ಶಿಕ್ಷಣದ ಬಗ್ಗೆ ಪಾಠ ಮಾಡಿದವನು. ನಾನೇನು ಎಂಬುದನ್ನು ಆರು ತಿಂಗಳ ಒಳಗಾಗಿ ತೋರಿಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಂಟನೇ ತರಗತಿ ಮಾತ್ರ ಓದಿದ್ದರೂ ಉನ್ನತ ಶಿಕ್ಷಣ ಖಾತೆ ವಹಿಸಿಕೊಂಡಿರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.
ನಾನು ಹೆಚ್ಚು ಓದದೆ ಇರಬಹುದು ಆದರೆ ನನಗೆ ಬದುಕಿನ ಪಾಠ ಗೊತ್ತು. 6 ತಿಂಗಳು ಸಮಯಾವಕಾಶ ನೀಡಿ ಎಂದು ಹೇಳಿದರು. ನಾನು ರೈತ. ಹೀಗಾಗಿ ನಾನು ರೈತರ ಜೊತೆ ಇರಬೇಕು ಎಂದು ಕೊಂಡಿದ್ದೆ. ಆದರೆ ಕುಮಾರಸ್ವಾಮಿ ಅವರು ನನ್ನನ್ನು ಕರೆದು ಇಷ್ಟು ದಿನ ನೀವು ರೈತರಿಗಾಗಿ ಕೆಲಸ ಮಾಡಿದ್ದೀರಿ. ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಲು ಏನಾದರೂ ಮಾಡಬೇಕು. ದೇಶ ವಿದೇಶದಿಂದ ಬಂದು ರಾಜ್ಯದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.
ಆದರೆ, ಅವರಿಗೆಲ್ಲಾ ಶಿಕ್ಷಣ ಕೊಡುವ ನಮ್ಮ ರಾಜ್ಯದಲ್ಲಿ ಶೇ. 25 ರಿಂದ 30 ರಷ್ಟು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದನ್ನು ಉತ್ತಮಪಡಿಸಬೇಕು ಎಂದು ಹೇಳಿದರು. ಹೀಗಾಗಿ ಖಾತೆ ಒಪ್ಪಿಕೊಂಡೆ ಎಂದರು.