ಒಲಿದ ಅವಕಾಶವನ್ನು ನಿರಾಕರಿಸಿದ ಸತೀಶ್ ಜಾರಕಿಹೊಳಿ
ತಮಗೆ ಈ ಹುದ್ದೆಯ ಅವಕಾಶ ಒದಗಿ ಬಂದಿದ್ದರೂ ಕೂಡ ತಾವೇ ಸ್ವತಃ ನಿರಾಕರಣೆ ಮಾಡಿದ್ದಾಗಿ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ : ನನಗೆ ಕೆಪಿಸಿಸಿ ಅಧ್ಯಕ್ಷನಾಗುವ ಅವಕಾಶ ಸಿಕ್ಕಿತ್ತು. ನನಗೆ ಆ ಅರ್ಹತೆ ಇದ್ದರೂ ಸದ್ಯ ಆ ಸ್ಥಾನ ಬೇಡವೇ ಬೇಡ ಎಂದು ನಿರಾಕರಿಸಿದ್ದೇನೆ ಎಂದು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಯಾರೇ ಪಕ್ಷದ ರಾಜ್ಯಾಧ್ಯಕ್ಷರಾದರೂ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಇದೇವೇಳೆ ಕೆಪಿಸಿಸಿ ಅಧ್ಯಕ್ಷರಿಗೆ ಐದು ವರ್ಷಗಳ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಯೊಂದು ವಿಚಾರದಲ್ಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಆದರೆ ಇನ್ನೂ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆಗೆ ಕಾಲ ಪಕ್ವ ಆಗಿಲ್ಲ. ಹೀಗಾಗಿರುವುದಕ್ಕೆ ಸೂಕ್ತ ನಾಯಕತ್ವ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಸಂಸದ ಮಲ್ಲಿಕಾರ್ಜುನ ಖರ್ಗೆ ರೀತಿಯಲ್ಲೇ ಅನೇಕರು ಬೆಳೆದರೆ ಅನ್ಯಾಯ ಸರಿಪಡಿಸಲು ಸಾಧ್ಯವಾಗುತ್ತದೆ ಎಂದರು.
ಇದೇ ವೇಳೆ ನಿಗಮ ಮಂಡಳಿಗಳ ನೇಮಕಕ್ಕೆ ಅರ್ಹ ಆಕಾಂಕ್ಷಿಗಳಾದ ನನ್ನ ಬೆಂಬಲಿಗರ ಪಟ್ಟಿಯನ್ನು ಸಿದ್ಧಪಡಿಸಿ ಪಕ್ಷದ ರಾಜ್ಯಉಸ್ತುವಾರಿ ವೇಣುಗೋಪಾಲ ಅವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.