ಅಪಘಾತದಿಂದ ಸಾವು ಸಂಭವಿಸಿದಾಗ ನೀಡುವ ಪರಿಹಾರದ ಆಧಾರದ ಮೇಲೆ ಈ ಪ್ರಕರಣಕ್ಕೆ ಪರಿಹಾರ ನಿರ್ಧಾರ | ಮೃತ ಮಹಿ​ಳೆಯ ಪತಿ ಮತ್ತು ಮಕ್ಕ​ಳಿಗೆ ರೂ.23.54 ಲಕ್ಷ ದಂಡ ಪಾವತಿಸು​ವಂತೆ ಆದೇ​ಶಿಸಿದ ಗ್ರಾ​ಹಕ ನ್ಯಾಯಾಲಯ

ಬೆಂಗಳೂರು (ನ.02): ಬೆನ್ನು​ಮೂಳೆ ಮುರಿ​ತ​ಕ್ಕೊ​ಳ​ಗಾಗಿ ಆಸ್ಪ​ತ್ರೆಗೆ ಸೇರಿದ್ದ ಮಹಿ​ಳೆ ಶಸ್ತ್ರ​ಚಿ​ಕಿತ್ಸೆ ಪಡೆ​ದಾಗ್ಯೂ ಮೃತ​ಪ​ಟ್ಟಿದ್ದರು. ಇದಕ್ಕೆ ಆಸ್ಪತ್ರೆ ಸಿಬ್ಬಂದಿಯ ನಿರ್ಲ​ಕ್ಷ್ಯವೇ ಕಾರಣ ಎಂದು ಗ್ರಾಹ​ಕರ ನ್ಯಾಯಾ​ಲ​ಯದ ಮೊರೆ ಹೋದ ಆ ಮಹಿಳೆಯ ಪತಿ ಕೇಸು ಗೆದ್ದಿ​ದ್ದಾರೆ. ಹೀಗಾಗಿ ಬೆಂಗ​ಳೂ​ರಿನ ಫೋರ್ಟಿಸ್‌ ಆಸ್ಪ​ತ್ರೆಯ ವೈದ್ಯರು ಮೃತ ಮಹಿ​ಳೆಯ ಪತಿ ಮತ್ತು ಮಕ್ಕ​ಳಿಗೆ ರೂ.23.54 ಲಕ್ಷ ಹಣ​ವನ್ನು ದಂಡದ ರೂಪ​ದಲ್ಲಿ ಪಾವ​ತಿ​ಸ​ಬೇ​ಕಾಗಿ ಬಂದಿದೆ.

ವಿದ್ಯಾರಣ್ಯಪುರದ ರಿಜೆನ್ಸಿ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲರಾಗಿದ್ದ ಕೆ.ವಿದ್ಯಾ​ಪ್ರಸಾದ್‌ (45) ಕಳೆದ 2010ರ ಫೆಬ್ರವರಿ 11ರಂದು ಮೃತಪಟ್ಟಿದ್ದರು. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಅವರ ಪತಿ, ಹೈಕೋರ್ಟ್‌ ವಕೀಲರಾಗಿರುವ ಎಚ್‌ಎನ್‌ಎಂ ಪ್ರಸಾದ ಅವರು ಆರೋಪಿಸಿದ್ದರು.

‘‘ಬೆನ್ನು ಮೂಳೆ ಶಸ್ತ್ರ ಚಿಕಿತ್ಸೆ ವೇಳೆ ಮೃತ ರೋಗಿಗೆ ಹೃದಯ ಸಂಬಂಧಿ ಸಮಸ್ಯೆ ಇರುವ ಬಗೆಗೆ ಶಸ್ತ್ರ ಚಿಕಿತ್ಸೆಗೂ ಮೊದಲೇ ಸಂಬಂಧಿಸಿದ ವೈದ್ಯರಿಗೆ ಮಾಹಿತಿ ಇತ್ತು. ಆದಾಗ್ಯೂ ಹೃದಯ ಸಂಬಂಧಿ ಚಿಕಿತ್ಸಾ ಘಟಕ ವ್ಯವಸ್ಥೆ ಇಲ್ಲದೇ ಬೆನ್ನಿನ ಶಸ್ತ್ರ ಚಿಕಿತ್ಸೆ ನಡೆಸಿದ್ದರು'' ಎಂದು ಆಯೋಗ ಅಭಿಪ್ರಾ​ಯಪಟ್ಟಿದೆ.

ಈ ಪ್ರಕರಣದಲ್ಲಿ ನರರೋಗ ತಜ್ಞರೊಬ್ಬರು ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿ​ದ್ದರೂ ಅವರು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಪಾತ್ರ ವಹಿಸಿ​ರಲಿಲ್ಲ ಎಂದು ತೀರ್ಮಾನಿಸಿ, ಅವರನ್ನು ದಂಡ ಪ್ರಕ್ರಿಯೆಯಿಂದ ಕೈಬಿಟ್ಟಿದೆ.

ಪ್ರಸಾದ್‌ ಹಾಗೂ ಅವರ ಇಬ್ಬರು ಅಪ್ರಾಪ್ತ ಮಕ್ಕಳು 2011ರಲ್ಲಿ ಪ್ರಕರಣ ಕುರಿತು ರಾಜ್ಯ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಮೃತ ಪ್ರಾಂಶುಪಾಲರಾದ ವಿದ್ಯಾ ಅವರು ಹಲವು ವರ್ಷಗಳಿಂದ ಬೆನ್ನುಮೂಳೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯರು ಅದನ್ನು ‘ಇಂಟ್ರಾ ವೆರೈಬ್ರಲ್‌ ಡಿಸ್ಕ್‌ ಪ್ರೊಲಾಫ್ಸ್‌' ಸಮಸ್ಯೆ ಎಂದು ಪತ್ತೆ ಮಾಡಿದ್ದರು. ಈ ಮೊದಲು 2009ರ ಅಕ್ಟೋಬರ್‌ನಲ್ಲಿ ಕೊಲಂಬಿಯಾ ಏಷ್ಯಾ ಪೆರಿಫೆರಲ್‌ ಆಸ್ಪತ್ರೆ​ಯಲ್ಲಿ ವಿದ್ಯಾ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿ​ದ್ದರು. ಆದರೆ 2010ರಲ್ಲಿ ಸಮಸ್ಯೆ ಮತ್ತೆ ಮರು​ಕ​ಳಿಸಿದಾಗ ಫೋರ್ಟಿಸ್‌ ಆಸ್ಪತ್ರೆಯ ಡಾ.ಪಿ.ಕೆ.ರಾಜು ಅವರನ್ನು ಸಂಪರ್ಕಿಸಿದ್ದರು. ಈ ಮೊದಲು ಆಗಿರುವ ಶಸ್ತ್ರ ಚಿಕಿತ್ಸೆ ವಿಫಲವಾ​ಗಿದ್ದು, ಮತ್ತೊಂದು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಡಾ.ರಾಜು ಸಲಹೆ ನೀಡಿದ್ದರು. ಅವರ ಸಲಹೆ ಮೇರೆಗೆ 2010ರ ಫೆ.11ರಂದು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ‘‘ಫೆ.10ರಂದು ಶಸ್ತ್ರ ಚಿಕಿತ್ಸೆ ನಡೆದ ಬಳಿಕ ಬೆಳಗ್ಗೆ 11.30ಕ್ಕೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಆದಷ್ಟಬೇಗ ವಾರ್ಡ್‌ಗೆ ಸ್ಥಳಾಂತರಿಸುತ್ತೇವೆ ಎಂದು ವೈದ್ಯರು ತಿಳಿಸಿದರು. ಆದರೆ ಮಧ್ಯಾಹ್ನ 12.45ರ ವೇಳೆಗೆ ವಿದ್ಯಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ದೇವರೇ ಅವರನ್ನು ಉಳಿಸಬೇಕು. ನಮ್ಮ ಆಸ್ಪತ್ರೆಯಲ್ಲಿ ಪೇಸ್‌-ಮೇಕರ್‌ ಸೌಲಭ್ಯ ಇಲ್ಲ ಎಂದು ಅದೇ ವೈದ್ಯರು ಹೇಳಿದರು. ಹೀಗಾಗಿ ಬೇರೆ ಅಸ್ಪತ್ರೆಗೆ ಸ್ಥಳಾಂತರಿಸುವ ಮೊದಲೇ ಅವರು ಸಾವಿಗೀಡಾದರು'' ಎಂದು ಮೃತ ವಿದ್ಯಾ ಪತಿ ಪ್ರಸಾದ್‌ ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.

‘‘ಸಂತ್ರಸ್ತ ಮಹಿಳೆಯ ಅಕಾಲಿಕ ಸಾವಿನಿಂದ ಆಕೆಯ ಪತಿ ಹಾಗೂ ಮಕ್ಕಳಿಗೆ ಆಗಿರುವ ನಷ್ಟವನ್ನು ಭರಿಸಲು ಸಾಧ್ಯವಿಲ್ಲವಾದರೂ ಅವರು ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಹೀಗಾಗಿ ಆಸ್ಪತ್ರೆ ಮತ್ತು ವೈದ್ಯರು ಪರಿಹಾರ ಭರಿಸತಕ್ಕದ್ದು'' ಎಂದು ಆಯೋಗದ ಆದೇಶ ತಿಳಿಸಿದೆ. ಆಯೋಗವು ಮೋಟರ್‌ ವೆಹಿಕಲ್‌ ಆ್ಯಕ್ಟ್ ಅಡಿಯಲ್ಲಿ ಅಪಘಾತದಿಂದ ಸಾವು ಸಂಭವಿ​ಸಿದಾಗ ನೀಡುವ ಪರಿಹಾರದ ಆಧಾರದ ಮೇಲೆ ಈ ಪ್ರಕರಣದ ಪರಿಹಾರವನ್ನು ನಿರ್ಧರಿಸಿದೆ. (ಕನ್ನಡಪ್ರಭ ವಾರ್ತೆ)