ರಫೇಲ್ ಡೀಲ್’ನಲ್ಲಿ ಭಾರಿ ಹಗರಣ, ರಾಷ್ಟ್ರೀಯ ಭದ್ರತೆ ರಾಜಿ: ಕಾಂಗ್ರೆಸ್
- ಡೀಲ್’ನಲ್ಲಿ ಭಾರೀ ಹಗರಣ ನಡೆದಿದ್ದು ಕೇಂದ್ರ ಸರ್ಕಾರವು ಅದನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ
- ಮೋದಿ ಸರ್ಕಾರದ ಉದ್ದೇಶವಾದರೂ ಏನು? ರಫೇಲ್ ಯುದ್ಧವಿಮಾನಗಳ ಬೆಲೆಯನ್ನು ಸರ್ಕಾರ ಬಹಿರಂಗಪಡಿಸಬೇಕು
ನವದೆಹಲಿ: ರಫೇಲ್ ಡೀಲ್ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್, ಡೀಲ್’ನಲ್ಲಿ ಭಾರೀ ಹಗರಣ ನಡೆದಿದ್ದು ಕೇಂದ್ರ ಸರ್ಕಾರವು ಅದನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ರಫೇಲ್ ಡೀಲ್’ನಲ್ಲಿ ಅಕ್ರಮ ನಡೆಸುವ ಮೂಲಕ ಮೋದಿ ಸರ್ಕಾರವು ರಾಷ್ಟ್ರೀಯ ಭದ್ರತೆಯನ್ನು ರಾಜಿಮಾಡಿಕೊಂಡಿದೆಯೆಂದು ಕಾಂಗ್ರೆಸ್ ನಾಯಕ ಗುಲಾಂ ನಬೀ ಆಝಾದ್ ವಾಗ್ದಾಳಿ ನಡೆಸಿದ್ದಾರೆ..
ರಫೇಲ್ ಯುದ್ಧವಿಮಾನಗಳ ಖರೀದಿಗೆ ಈಜಿಪ್ಟ್ ಹಾಗೂ ಕತರ್ ದೇಶಗಳು ನೀಡಿರುವ ದರಕ್ಕಿಂತ ಹೆಚ್ಚು ದರವನ್ನು ಭಾರತವು ಪಾವತಿಸುತ್ತಿದೆ. ಮೋದಿ ಸರ್ಕಾರದ ಉದ್ದೇಶವಾದರೂ ಏನು? ರಫೇಲ್ ಯುದ್ಧವಿಮಾನಗಳ ಬೆಲೆಯನ್ನು ಸರ್ಕಾರ ಬಹಿರಂಗಪಡಿಸಬೇಕು, ಎಂದು ಈ ಸಂದರ್ಭದಲ್ಲಿ ಆಝಾದ್ ಒತ್ತಾಯಿಸಿದ್ದಾರೆ.
26 ಯುದ್ಧವಿಮಾನಗಳನ್ನು ಖರೀದಿಸುವ ಮುನ್ನ ಪ್ರಧಾನಿ ಮೋದಿ, ಸಂಪುಟದ ಭದ್ರತಾ ಸಮಿತಿಯ ಅನುಮೋದನೆ ಯಾಕೆ ಪಡೆದುಕೊಂಡಿಲ್ಲವೆಂದು ಅವರು ಪ್ರಶ್ನಿಸಿದ್ದಾರೆ.
ಮೊದಲು ದರವನ್ನು ಬಹಿರಂಗಪಡಿಸುತ್ತೇನೆಂದು ಬಳಿಕ ಯೂ –ಟರ್ನ್ ಹೊಡೆದ ರಕ್ಷಣಾ ಸಚಿವರ ನಿಲುವನ್ನು ಕೂಡಾ ಗುಲಾಂ ನಬೀ ಆಝಾದ್ ಈ ಸಂದರ್ಭದಲ್ಲಿ ಟೀಕಿಸಿದ್ದಾರೆ.