ಯೋಗಿ ಕುರ್ಚಿ ಉಳಿಸಲು ಅಮಿತ್ ಶಾ ಕಸರತ್ತು
ರಾಮನಾಥ್ ಕೋವಿಂದರ ರಾಷ್ಟ್ರಪತಿಯಾಗಿ ನೇಮಕಗೊಂಡ ನಂತರ ಅಮಿತ್ ಷಾ ತಮ್ಮ ಗಮನವನ್ನು ಉತ್ತರಪ್ರದೇಶದತ್ತ ನೆಟ್ಟಿದ್ದಾರೆ.
ಲಕ್ನೋ (ಜು.25): ರಾಮನಾಥ್ ಕೋವಿಂದರ ರಾಷ್ಟ್ರಪತಿಯಾಗಿ ನೇಮಕಗೊಂಡ ನಂತರ ಅಮಿತ್ ಷಾ ತಮ್ಮ ಗಮನವನ್ನು ಉತ್ತರಪ್ರದೇಶದತ್ತ ನೆಟ್ಟಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯಗೆ ಮತ್ತೊಮ್ಮೆ ಅಗ್ನಿ ಪರೀಕ್ಷೆ ಎದುರಾಗಿದೆ. ತಮ್ಮ ಹುದ್ದೆಯಲ್ಲೇ ಮುಂದುವರೆಯಬೇಕಾದರೆ ಇಬ್ಬರೂ ವಿಧಾನಮಂಡಲದ ಶಾಸಕ ಸ್ಥಾನವನ್ನು ಪಡೆಯಬೇಕು. 6 ತಿಂಗಳೊಳಗಾಗಿ ವಿಧಾನಸಭೆ ಅಥವಾ ವಿಧಾನಪರಿಷತ್ ಸದಸ್ಯರಾಗಬೇಕು ಎನ್ನುವ ಕಡ್ಡಾಯ ನಿಯಮವಿದೆ. ಈಗಾಗಲೇ 4 ತಿಂಗಳು ಕಳೆದಿದ್ದು ಇನ್ನೂ 2 ತಿಂಗಳು ಬಾಕಿಯಿದೆ. ಹೀಗಾಗಿ ಅಮಿತ್ ಶಾ ಚಿತ್ತ ಉತ್ತರ ಪ್ರದೇಶದತ್ತ ಹೊರಳಿದೆ.
ಜು.29 ರಿಂದ 3 ದಿನಗಳ ಕಾಲ ಅಮಿತ್ ಶಾ ಲಕ್ನೋ ಪ್ರವಾಸ ಕೈಗೊಳ್ಳಲಿದ್ದು, ಆ ವೇಳೆ ಯೋಗಿ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ. ಲಕ್ನೋಗೆ ತಲುಪಿದ ಬಳಿಕ ಅಮಿತ್ ಷಾ ಚುನಾವಣಾ ತಂತ್ರ ಹೆಣೆಯಲಿದ್ದಾರೆ. ಯೋಗಿ ಆದಿತ್ಯನಾಥ್ ಎಲ್ಲಿಂದ ಸ್ಪರ್ಧಿಸಬೇಕು ಎನ್ನುವ ಬಗ್ಗೆ ಪಕ್ಷದ ಹಿರಿಯ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಯೋಗಿ ದಾರಿ ಸುಲಲಿತ ಮಾಡಿಕೊಡಲು ಸಾಕಷ್ಟು ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಗೋರಖ್’ಪುರದಿಂದ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಶವ್ ಪ್ರಸಾದ್ ಮೌರ್ಯ ಉಪಮುಖ್ಯಮಂತ್ರಿಯಾಗಿ ಮುಂದುವರೆಯುವ ಸಾಧ್ಯತೆ ಕಡಿಮೆ ಇದೆ. ಇನ್ನೊಬ್ಬ ಪಮುಖ್ಯಮಂತ್ರಿಯಾದ ದಿನೇಶ್ ಶರ್ಮಾ ವಿಧಾನ ಪರಿಷತ್’ನಿಂದ ಸ್ಪರ್ಧಿಸುವುದು ನಿಚ್ಚಳವಾಗಿದೆ.