* ಸ್ಥಳೀಯ ಆಡಳಿತ ಸಂಸ್ಥೆಗಳಿಂದುಂಟಾದ ವೈಫಲ್ಯದಿಂದಾಗಿ ಜನರಿಗೆ ತಲುಪದ ಯೋಜನೆ* ಯಾದಗಿರಿ ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಸಾಧನೆ
ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳು ಗುರಿ ಸಾಧಿಸಲಾಗದೇ ಶಿಥಿಲವಾಗುತ್ತಿವೆ. ಕಳೆರಡು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ವಸತಿ ಯೋಜನೆಗಳು ಇತ್ತೀಚಿನ ದಿನಗಳಲ್ಲಿ ಮುಂದೆ ಸಾಗದೆ ಮಕಾಡೆ ಮಲಗಿ ಬಿಟ್ಟಿದೆ. ಇದರೊಂದಿಗೆ 5 ವರ್ಷಗಳಲ್ಲಿ 12 ಲಕ್ಷ ಮನೆಗಳನ್ನು ನಿರ್ಮಿಸಬೇಕೆನ್ನುವ ರಾಜ್ಯ ಸರ್ಕಾರದ ಕನಸು ಕಮರಿ ಹೋಗುತ್ತಿದೆ.
ಪ್ರಸಕ್ತ ವರ್ಷದಲ್ಲಿ ಸುಮಾರು 3 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಅದರಲ್ಲಿ ಈತನಕ 32,500 ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ. ಉಳಿದಂತೆ ವಿವಿಧ ವಸತಿ ಯೋಜನೆಗಳ ಹಿಂದಿನ ಬಾಕಿ ಮನೆಗಳೂ ಸೇರಿದಂತೆ ಇನ್ನೂ 4 ಲಕ್ಷಕ್ಕೂ ಹೆಚ್ಚಿನ ಮನೆಗಳು ಇನ್ನೂ ಪ್ರಗತಿ ಹಂತದಲ್ಲೇ ಇವೆ. ವಿಚಿತ್ರವೆಂದರೆ ಈ ಬಾಕಿ ಮನೆಗಳ ನಿರ್ಮಾಣಕ್ಕೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ, ಅನುಮೋದನೆ ತೊಂದರೆ ಮತ್ತು ನೆರವು ಮಂಜೂರು ಹಂತದಲ್ಲಿ ಭ್ರಷ್ಟಾಚಾರ ಅಡ್ಡಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಲ್ಲೆಲ್ಲಿ ಕಳಪೆ ಸಾಧನೆ?: ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ, ವಾಜಪೇಯಿ ನಗರ ಯೋಜನೆ, ವಾಜಪೇಯಿ ನಗರ ಹಾಗೂ ಗ್ರಾಮೀಣ ವಸತಿ ಯೋಜನೆ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಗ್ರಾಮೀಣ ಹಾಗೂ ನಗರ ವಸತಿ ಯೋಜನೆಗಳ ಮೂಲಕ ಸರ್ಕಾರ ಬಡವರು ಮತ್ತು ಹಿಂದುಳಿದ ವಸತಿ ರಹಿತರಿಗೆ ಮನೆ ನಿರ್ಮಿಸಲು ಪ್ರತಿ ಫಲಾನುಭವಿಗೆ 1.30ಲಕ್ಷದಿಂದ 2ಲಕ್ಷ ರೂವರೆಗೂ ನೆರವು ನೀಡುತ್ತದೆ.
ಆದರೆ ಫಲಾನುಭವಿಗಳ ಆಯ್ಕೆ ಮತ್ತು ಅನುಷ್ಠಾನಗೊಳಿಸುವಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳಿಂದುಂಟಾದ ವೈಫಲ್ಯದಿಂದಾಗಿ ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಲುಪದಂತಾಗಿದೆ.
ಮಾಜಿ ಸಚಿವ ಅಂಬರೀಷ್ ಅವರ ಅವಧಿಯಲ್ಲಿ ವಸತಿ ಯೋಜನೆಗಳು ವಿಳಂಬವಾಗಿದ್ದವು. ಆನಂತರ ವಸತಿ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚುವರಿ ಖಾತೆಗಳಿಗೆ ಸೇರಿದಾಗ ತೀರಾ ನೆಲ ಕಚ್ಚುವಂತಾಗಿತ್ತು. ಇದರಿಂದಾಗಿ ಇಲಾಖೆ ಸಾಧನೆ ತೀರಾ ಕಳಪೆ ಮಟ್ಟಕ್ಕೆ ಕುಸಿದಿದೆ.
ಮನೆ ನಿರ್ಮಾಣ ಪ್ರಗತಿ ನೋಡುವುದಾದರೆ ಯಾದಗಿರಿ ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಸಾಧನೆ ಆಗಿದೆ. ಯಾದಗಿರಿಯಲ್ಲಿ ಶೇ.47.26 ಸಾಧನೆಯಾಗಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.49.78ರಷ್ಟುಸಾಧನೆಯಾಗಿದೆ. ಇದೇರೀತಿ ನಗರ ಪ್ರದೇಶಗಳ ಸಾಧನೆ ನೋಡಿದರೆ ಬೆಂಗಳೂರು ನಗರ, ಚಿಕ್ಕಮಗಳೂರು, ಕೋಲಾರ, ರಾಮನಗರ, ಉಡುಪಿಯಲ್ಲಿ ಶೂನ್ಯ ಸಾಧನೆ ಮಾಡಲಾಗಿದೆ. ಉಳಿದಂತೆ ಧಾರವಾಡ, ಕೊಪ್ಪಳ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶೇ.11ರ ಪ್ರಗತಿಯನ್ನೇ ದೊಡ್ಡ ಸಾಧನೆ ಎನ್ನುವಂತಾಗಿದೆ.
ಅನೇಕ ಜಿಲ್ಲೆಗಳಲ್ಲಿ ಮನೆಗಳ ನಿರ್ಮಾಣಕ್ಕೆ ನಿವೇಶನಗಳ ಹೊಂದಿರುವ ಫಲಾನು ಭವಿಗಳು ಸಿಗದೆ ಪ್ರಕ್ರಿಯೆ ಮುಂದುವರಿಸು ವುದೇ ಕಷ್ಟವಾಗಿದೆ. ಇದರೊಂದಿಗೆ ಮರ ಳು ಕೊರತೆಯೂ ದೊಡ್ಡ ತಲೆನೋವಾಗಿದೆ ಎಂದು ರಾಜೀವಗಾಂಧಿ ವಸತಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ.
15ಲಕ್ಷಕ್ಕೆ 9.50ಲಕ್ಷ ಮಾತ್ರ: ಪೂರ್ವ ನಿಯೋಜಿತ ಗುರಿಯಂತೆ ವರ್ಷಕ್ಕೆ 3ಲಕ್ಷ ಮನೆಗಳನ್ನು ನಿರ್ಮಿಸಬೇಕಿತ್ತು. ಅಂದರೆ ವರ್ಷಕ್ಕೆ 3ಲಕ್ಷದಂತೆ 5ವರ್ಷಗಳ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ 15ಲಕ್ಷಮನೆಗಳನ್ನು ನಿರ್ಮಿಸಬೇಕೆನ್ನುವ ಗುರಿಯೊಂದಿಗೆ ಯೋಜನೆ ರೂಪಿಸಲಾಗಿತ್ತು. ಆದರೆ ಫಲಾನುಭವಿಗಳ ಆಯ್ಕೆ ಮತ್ತು ಅದರಲ್ಲಿ ನಡೆಯುತ್ತಿರುವ ಅಕ್ರಮ ಗಳು ಮತ್ತು ಸ್ಥಳೀಯ ರಾಜಕಾರಣದ ಗೊಂದಲದಿಂದಾಗಿ ವಿಳಂಬ ಆಗಿತ್ತು. ಸರಿಪಡಿಸುವಲ್ಲಿ ಇಲಾಖೆ ಹಿರಿ ಯ ಅಧಿ ಕಾರಿಗಳಾಗಲಿ, ಹಿಂದಿನ ಸಚಿವರಾಗಲಿ ಕಠಿಣ ಕ್ರಮ ಕೈಗೊಳ್ಳಲಿಲ್ಲ. ವಾರ್ಷಿಕ ಗುರಿ ಮುಟ್ಟುವುದಕ್ಕೆ ಸಾಧ್ಯವಾಗಲಿಲ್ಲ. 12ಲಕ್ಷಗಳ ಮನೆ ನಿರ್ಮಾಣದ ಗುರಿಗೆ ಬರೀ 9.50ಲಕ್ಷಗಳ ಮನೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
ಕೋಟ್ಸ್:
ಕೆಲವು ನ್ಯೂನತೆ ಸರಿಪಡಿಸಿ ಫಲಾನುಭವಿಗಳಿಗೆ ಸುಲಭವಾಗಿ ಸೌಲಭ್ಯ ಸಿಗುವಂತೆ ಮಾಡುತ್ತಿದ್ದೇವೆ.ಅದಕ್ಕಾಗಿ ನಿಯಮ ಸರಳಗೊಳಿಸಲಾಗುತ್ತಿದ್ದೇವೆ: - ಮೌನೀಷ್ ಮೌದ್ಗಿಲ್, ರಾಜೀವ್ಗಾಂಧಿ ವಸತಿ ನಿಗಮದ ನಿರ್ದೇಶಕ
