ಅರಣ್ಯದಲ್ಲಿ ಹನಿಟ್ರ್ಯಾಪ್, ಖೆಡ್ಡಾಕ್ಕೆ ಬಿದ್ದ ಪುಂಡಾನೆ
ಪುಂಡ ಒಂಟಿಸಲಗವನ್ನು ಹನಿಟ್ರ್ಯಾಪ್ ಮೂಲಕ ಖೆಡ್ಡಾಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ನೇತೃತ್ವದ ಗಜಪಡೆ ಕಡೆಗೂ ಯಶಸ್ವಿಯಾಗಿದೆ. ಕಳೆದ 2 ವರ್ಷಗಳಿಂದಲೂ ಚನ್ನಗಿರಿ, ಭದ್ರಾವತಿ, ಕುಕ್ಕವಾಡ ಅರಣ್ಯ ಪ್ರದೇಶದಂಚಿನ ಗ್ರಾಮಗಳು ಹಾಗೂ ಚನ್ನಗಿರಿ ತೋಟಕ್ಕೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿದ್ದ ಪುಂಡಾನೆ ಮಂಗಳವಾರ ಜೋಡಿ ಹೆಣ್ಣಾನೆಗಳ ಧ್ವನಿ ಕೇಳಿ ಬಂದು, ತಾನಾಗಿಯೇ ಖೆಡ್ಡಾಕ್ಕೆ ಬಿದ್ದಿದೆ.
ದಾವಣಗೆರೆ: ಅರಣ್ಯದಂಚಿನ ಗ್ರಾಮಸ್ಥರು, ರೈತರ ನಿದ್ದೆಗೆಡಿಸಿದ್ದ ಪುಂಡ ಒಂಟಿಸಲಗವನ್ನು ಹನಿಟ್ರ್ಯಾಪ್ ಮೂಲಕ ಖೆಡ್ಡಾಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ನೇತೃತ್ವದ ಗಜಪಡೆ ಕಡೆಗೂ ಯಶಸ್ವಿಯಾಗಿದೆ. ಕಳೆದ 2 ವರ್ಷಗಳಿಂದಲೂ ಚನ್ನಗಿರಿ, ಭದ್ರಾವತಿ, ಕುಕ್ಕವಾಡ ಅರಣ್ಯ ಪ್ರದೇಶದಂಚಿನ ಗ್ರಾಮಗಳು ಹಾಗೂ ಚನ್ನಗಿರಿ ತೋಟಕ್ಕೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿದ್ದ ಪುಂಡಾನೆ ಮಂಗಳವಾರ ಜೋಡಿ ಹೆಣ್ಣಾನೆಗಳ ಧ್ವನಿ ಕೇಳಿ ಬಂದು, ತಾನಾಗಿಯೇ ಖೆಡ್ಡಾಕ್ಕೆ ಬಿದ್ದಿದೆ.
ಚನ್ನಗಿರಿ ವಲಯ ಅರಣ್ಯ ಪ್ರದೇಶ ದುರ್ಗದ ಬಸಾಪುರ ಬಳಿ ಅರಣ್ಯ ಪ್ರದೇಶದಲ್ಲಿ ಪುಂಡ ಒಂಟಿ ಸಲಗ ಅಭಿಮನ್ಯು ನೇತೃತ್ವದ 5 ಗಂಡಾನೆಗಳಿಗೆ ಸೆರೆಯಾದರೆ, ಈ ಗಜಪೆಡೆಗೆ ಸಕ್ರೆಬೈಲು ಆನೆ ಬಿಡಾರದಿಂದ ಬಂದಿದ್ದ ಗಂಗೆ, ದೀಪಾ ಧ್ವನಿಗೆ ಒಂಟಿ ಸಲಗ ಮಾರು ಹೋಗಿ ಬಿಟ್ಟಿತು.
ಗಣಗನ ಅಂಕಲಿನ ಆನೆ ಬಿಡಾರದಿಂದ ಎರಡನೇ ದಿನದ ಕಾರ್ಯಾಚರಣೆ ಮಂಗಳವಾರ ಬೆಳಗ್ಗೆ ಅಭಿಮನ್ಯು ಸಾರಥ್ಯದಲ್ಲಿ 5 ಗಂಡಾನೆಗಳೊಂದಿಗೆ ಆರಂಭವಾಯಿತು. ವಯಸ್ಕ ಪುಂಡ ಒಂಟಿ ಸಲಗವನ್ನು ಸೆಳೆಯಲು ಸಕ್ರೆಬೈಲಿನಿಂದ ಬಂದಿದ್ದ ಗಂಗೆ, ದೀಪಾ ಹೆಣ್ಣಾನೆಗಳು ಘೀಳಿಡುತ್ತಾ ಗಂಡಾನೆಗಳ ಪಡೆಯೊಂದಿಗೆ ಸಾಗುತ್ತಿದ್ದವು. ಹೆಣ್ಣಾನೆಗಳ ಧ್ವನಿಗೆ ಮಾರು ಹೋದ ಪುಂಡ ಸಲಗ ಹೆಣ್ಣಾನೆಗಳನ್ನ ಹುಡುಕಿಕೊಂಡು ಜೋರಾಗಿ ಘೀಳಿಡುತ್ತಾ ಧಾವಿಸಿತು.
ಅರಣ್ಯಾಧಿಕಾರಿಗಳ ಯೋಜನೆಯಂತೆ ಹೆಣ್ಣಾನೆಗಳ ಧ್ವನಿಗೆ ಮಾರು ಹೋಗಿ ಬಂದ ಒಂಟಿ ಸಲಗವನ್ನು ಕಂಡ ತಂಡ ಒಂದು ಕ್ಷಣ ಹೌಹಾರುವಂತಾಯಿತು. ಭರ್ಜರಿ ಗಾತ್ರದ, ದೊಡ್ಡ ದಂತಗಳನ್ನು ಹೊಂದಿದ್ದ ಒಂಟಿ ಸಲಗ ಏಕಾಏಕಿ ಅಭಿಮನ್ಯು ನೇತೃತ್ವದ ಗಜಪಡೆ ಮೇಲೆರಗಲು ಮುಂದಾಗಿದೆ. ತಕ್ಷಣವೇ ಸ್ಥಳದಲ್ಲಿಯೇ ಇದ್ದ ಅರಣ್ಯ ಇಲಾಖೆಯ ಅರವಳಿಕೆ ತಜ್ಞ ಡಾ.ಪ್ರದೀಪ್ ಅರವಳಿಕೆ ಮದ್ದನ್ನು ಒಂಟಿ ಸಲಗದ ಮೇಲೆ ಪ್ರಯೋಗಿಸಿದ್ದಾರೆ. ಅರವಳಿಕೆ ಮದ್ದು ದೇಹ ಸೇರಿದ 10 ನಿಮಿಷಕ್ಕೂ ಹೆಚ್ಚು ಕಾಲ ಸಲಗ ಕೈಗೆ ಸಿಗದಂತೆ ವರ್ತಿಸಿದೆ.
ಅರವಳಿಕೆ ಮದ್ದು ಕೆಲಸ ಮಾಡುತ್ತಿದ್ದಂತೆಯೇ ಒಂಟಿ ಸಲಗ ಅರಣ್ಯದಲ್ಲಿದ್ದ ನೈಸರ್ಗಿಕ ನಿರ್ಮಿತ ಖೆಡ್ಡಾಗೆ ಉರುಳಿ ಬಿತ್ತು. ತಕ್ಷಣವೇ ಕಾರ್ಯೋನ್ಮುಖರಾದ ಮಾವುತರು, ಕಾವಾಡಿಗರು ಆಳವಾದ ಗುಂಡಿಗೆ ಇಳಿದು, ಸಲಗದ ಕಾಲುಗಳಿಗೆ ಸರಪಳಿ, ದಪ್ಪನೆಯ ಹಗ್ಗಗಳನ್ನು ಬಿಗಿದಿದ್ದಾರೆ. ಸ್ವತಃ ಆರ್ಎಫ್ಓ ದಿನೇಶ ಮಾವುತರೊಂದಿಗೆ ಗುಂಡಿಗೆ ಇಳಿದು, ಸರಪಳಿ, ಹಗ್ಗ ಬಿಗಿಯುವ ಕಾರ್ಯ ನೋಡಿಕೊಂಡರು.
ಪುಂಡಾನೆ ಮದ್ದು ಇಳಿಯಲೆಂದು ಅದರ ಮೇಲೆ ಸಾಕಷ್ಟುನೀರು ಸುರಿಯಲಾಯಿತು. ನಿಧಾನವಾಗಿ ಮಂಪರಿನಿಂದ ಹೊರ ಬರುತ್ತಿದ್ದ ಒಂಟಿ ಸಲಗದ ಆರ್ಭಟ ಹೆಚ್ಚುತ್ತಲೇ ಇತ್ತು. ಅಷ್ಟರಲ್ಲಾಗಲೇ ಅದರ ನಾಲ್ಕೂ ಕಾಲುಗಳಿಗೆ ಸರಪಳಿ, ದೊಡ್ಡ ಹಗ್ಗಗಳನ್ನು ಬಿಗಿದು, ಅಭಿಮನ್ಯು ನೇತೃತ್ವದ ಗಜಪಡೆಗಳಿಗೆ ಕಟ್ಟಿದ್ದರಿಂದ ಒಂಟಿ ಸಲಗದ ಕೂಗು ಕೇವಲ ಅರಣ್ಯ ರೋಧನವಾಯಿತು. ರಸ್ತೆಯಿಂದ ಸುಮಾರು 8-10 ಕಿಮೀ ಒಳಗೆ ದಟ್ಟಾರಣ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆನೆ ಸೆರೆ ಸಿಗುತ್ತಿದ್ದಂತೆ ಇಡೀ ತಂಡ ಹರ್ಷೋದ್ಘಾರ ಮಾಡಿತು.
ಮತ್ತಿಗೋಡು ಅರಣ್ಯ ಬಿಡಾರದ 2 ಗಂಡಾನೆ, ದುಬಾರೆ ಅರಣ್ಯ ಬಿಡಾರದಿಂದ ಬಂದಿದ್ದ 3 ಗಂಡಾನೆಗಳ ನೇತೃತ್ವ ವಹಿಸಿದ್ದು ಅಭಿಮನ್ಯು ಆನೆ. ಒಂಟಿ ಸಲಗವನ್ನು ಹನಿಟ್ರ್ಯಾಪ್ಗೆ ಬಳಸಿ ಕೊಳ್ಳಲು ಕರೆಸಿಕೊಂಡಿದ್ದ ಗಂಗೆ, ದೀಪಾ ಪಾತ್ರವನ್ನೂ ಇಲ್ಲಿ ಮರೆಯುವಂತಿಲ್ಲ. ಸದ್ಯಕ್ಕೆ ಚಿಕ್ಕಮಳಲಿ ಅರಣ್ಯ ಪ್ರದೇಶಕ್ಕೆ ಆನೆಯನ್ನು ಕಟ್ಟಿತರಲಾಗಿದೆ. ಚಿಕ್ಕಮಳಲಿ ಸಮೀಪದ ಅಳ್ಳಿಬೈಲು ಅರಣ್ಯ ಪ್ರದೇಶದಲ್ಲಿ ದೊಡ್ಡ ಮರವೊಂದಕ್ಕೆ ಸಲಗವನ್ನು ಕಟ್ಟಿಹಾಕಿದ್ದು, ಸಲಗ ಮಂಪರಿನಿಂದ ಹೊರ ಬರುವುದರಲ್ಲಿದೆ.
ಸೆರೆ ಸಿಕ್ಕ ಒಂಟಿ ಸಲಗವನ್ನು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರಕ್ಕೆ ರಾತ್ರೋರಾತ್ರಿಯೇ ಕೊಂಡೊಯ್ಯಲು ಸಿದ್ಧತೆ ನಡೆದಿದೆ. ಸಲಗವನ್ನು ಲಾರಿಗೆ ಹತ್ತಿಸಲು
ಗುಂಡಿ ತೆಗೆಯುವ ಕೆಲಸ ನಡೆದಿದೆ. ರಾತ್ರಿಯೇ ಟಾಚ್ರ್, ಮೊಬೈಲ್ಗಳ ಬೆಳಕಿನಲ್ಲಿ ಈ ಎಲ್ಲಾ ಕಾರ್ಯಗಳು ಸಾಗಿವೆ. ಡಿಎಫ್ಓ ಚಲುವರಾಜ, ಎಸಿಎಫ್ ಸುಬ್ರಹ್ಮಣ್ಯ, ಆರ್ಎಫ್ಓ ಎಸ್.ಓ.ದಿನೇಶ, ಮಂಜುನಾಥ ಮಾರ್ಗದರ್ಶನ ನೀಡಿದರು. 150ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ, ಮಾವುತರು, ಕಾವಾಡಿಗರು ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದರು.