ತಮ್ಮನ್ನು ಹನಿಟ್ರ್ಯಾಪ್ ಮಾಡುತ್ತಿರುವ  ಪಂಚತಾರಾ ಹೋಟೆಲ್‌ನಲ್ಲಿ ಉದ್ಯಮಿಗೆ ಪರಿಚಿತಳಾದ 24 ವರ್ಷದ ಬಾರ್ ಗರ್ಲ್ ಳಿಂದ ರಕ್ಷಣೆ ನೀಡುವಂತೆ  ಕೋರಿ ವನಿತಾ ಸಹಾಯವಾಣಿ ಕೇಂದ್ರದಲ್ಲಿ  ರಾಜಸ್ಥಾನದ ಉದ್ಯಮಿ ವನಿತಾ ಸಹಾಯವಾಣಿ ಕೇಂದ್ರದಲ್ಲಿ ಮೊರೆಯಿಟ್ಟಿದ್ದಾರೆ.

ಬೆಂಗಳೂರು : ಹನಿಟ್ರ್ಯಾಪ್’ ಬಲೆಗೆ ಬೀಳಿಸಿಕೊಂಡು ರಾಜಸ್ಥಾನ ಮೂಲದ ಉದ್ಯಮಿಯೊಬ್ಬರಿಂದ 2.5 ಕೋಟಿ ಸುಲಿಗೆ ಮಾಡಿದ್ದಾರೆ ಎಂದು ಬಾರ್ ಗರ್ಲ್ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಪೊಲೀಸ್ ಆಯುಕ್ತರ ಕಚೇರಿಯ ವನಿತಾ ಸಹಾಯವಾಣಿ ಕೇಂದ್ರದಲ್ಲಿ ದೂರು ದಾಖಲಾಗಿದೆ. 

ಪಂಚತಾರಾ ಹೋಟೆಲ್‌ನಲ್ಲಿ ಉದ್ಯಮಿಗೆ ಪರಿಚಿತಳಾದ 24 ವರ್ಷದ ಬಾರ್ ಗರ್ಲ್ ಈ ಕೃತ್ಯ ಎಸಗಿದ್ದು, ಆಕೆಯಿಂದ ತನ್ನನ್ನು ರಕ್ಷಿಸುವಂತೆ ಕೋರಿ ವನಿತಾ ಸಹಾಯವಾಣಿ ಕೇಂದ್ರದಲ್ಲಿ ಉದ್ಯಮಿ ಮೊರೆಯಿಟ್ಟಿದ್ದಾರೆ. ಈ ಮನವಿಗೆ ಸ್ಪಂದಿಸಿದ ಸಹಾಯವಾಣಿ ಸಿಬ್ಬಂದಿ, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಸ್ನೇಹದ ಸೋಗಿನಲ್ಲಿ ನನ್ನೊಂದಿಗೆ ಬಾರ್ ಗರ್ಲ್ ಆತ್ಮೀಯವಾಗಿ ನಡೆದುಕೊಂಡಿದ್ದಳು. ಈ ಆಪ್ತ ಗಳಿಗೆಯನ್ನು ರಹಸ್ಯ ಕ್ಯಾಮೆರಾವನ್ನು ಬಳಸಿ ಆಕೆ ಚಿತ್ರೀಕರಿಸಿಕೊಂಡಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಬಹಿರಂಗಗೊಳಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾಳೆ. 

ಇದುವರೆಗೆ 2.5 ಕೋಟಿ ನೀಡಿದ್ದು, ಮತ್ತೆ 75 ಲಕ್ಷ ಬೇಡಿಕೆ ಇಟ್ಟಿದ್ದಾಳೆ. ಆಕೆಯನ್ನು ಕರೆಸಿ ಬುದ್ಧಿ ಮಾತು ಹೇಳಿ ಆ ವಿಡಿಯೋಗಳನ್ನು ನಾಶ ಗೊಳಿಸಿ ಎಂದು ಉದ್ಯಮಿ ದೂರಿನಲ್ಲಿ ಕೋರಿದ್ದಾರೆ ಎನ್ನಲಾಗಿದೆ. ಪಂಚಾತಾರಾ ಹೋಟೆಲ್‌ನಲ್ಲಿ ಗೆಳೆತನದ 

ಬೆಸುಗೆ: ನನಗೆ 2016 ರಲ್ಲಿ ಪಂಚಾತಾರ ಹೋಟೆಲ್‌ವೊಂದರಲ್ಲಿ 24 ವರ್ಷದ ಯುವತಿ ಪರಿಚಯವಾಯಿತು. ಬಳಿಕ ನಮ್ಮಲ್ಲಿ ‘ಆಪ್ತ’ತೆ ಬೆಳೆಯಿತು. ಆಗ ನಗರದ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಪರಿಚಾರಕಿಯಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಳು. ಈ ಸ್ನೇಹದಲ್ಲಿ ಆಕೆಗೆ ಹಲವು ಉಡುಗೊರೆಗಳನ್ನು ಸಹ ಕೊಡಿಸಿದ್ದೆ. ಒಂದು ದಿನ ಆಸ್ಟಿನ್ ಟೌನ್‌ನ ನನ್ನ ಮನೆಗೆ ಆಕೆಯನ್ನು ಕರೆಸಿಕೊಂಡಿದ್ದೆ. ಆಗ ರಹಸ್ಯ ಕ್ಯಾಮೆರಾದೊಂದಿಗೆ ಮನೆಗೆ ಬಂದ ಆಕೆ, ನನಗೆ ಗೊತ್ತಾಗದಂತೆ ನನ್ನ ಬೆಡ್ ರೂಮ್‌ನಲ್ಲಿ ಅಳವಡಿಸಿದ್ದಳು. ಬಳಿಕ ಅಂದು ನಾವಿಬ್ಬರು ಕಳೆದ ಆತ್ಮೀಯ ಸಮಯವನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡ ಆಕೆ, ಮನೆಯಿಂದ ಹೊರಟ ಬಳಿಕ ವಿಡಿಯೋ ಮಾಡಿರುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು ಎಂದು ಉದ್ಯಮಿ ವಿವರಿಸಿದ್ದಾರೆ.

ಮನೆಯಿಂದ ತೆರಳಿದ ಕೆಲ ಹೊತ್ತಿನ ಬಳಿಕ ತನ್ನ ಪ್ರಿಯಕರನಿಂದ ನನಗೆ ಕರೆ ಮಾಡಿಸಿದ ಆಕೆ, ಹಣ ಕೊಡದಿದ್ದರೆ ತಮ್ಮ ಬಳಿ ಇರುವ ವಿಡಿಯೋವನ್ನು ಪತ್ನಿಗೆ ವಾಟ್ಸಪ್ ಮೂಲಕ ಕಳುಹಿಸುವುದಾಗಿ ಬೆದರಿಕೆ ಹಾಕಿದಳು. ಹೀಗೆ ಎರಡು ವರ್ಷಗಳಿಂದ ಇಬ್ಬರೂ ಹಂತ ಹಂತವಾಗಿ ಹಣ ಸುಲಿಗೆ ಮಾಡುತ್ತಲೇ ಇದ್ದಾರೆ. ಈಗ ಒಮ್ಮೆಲೆ 75 ಲಕ್ಷ ಕೇಳುತ್ತಿದ್ದಾರೆ. ಮರ್ಯಾದೆಗೆ ಅಂಜಿ ನಾನು ಪೊಲೀಸರಿಗೆ ದೂರು ಕೊಟ್ಟಿಲ್ಲ. ಈ ಬಗ್ಗೆ ಪತ್ನಿಗೆ ವಿಷಯ ಗೊತ್ತಾದರೆ ಆಕೆ ಖಂಡಿತ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಕೆ ನನಗೆ ಹಣ ಮರಳಿಸುವುದು ಬೇಡ. ಇನ್ಮುಂದೆ ತೊಂದರೆ ಕೊಡದಿದ್ದರೆ ಸಾಕು ಎಂದು ಉದ್ಯಮಿ ಅಳಲು ತೋಡಿಕೊಂಡಿದ್ದಾರೆ.