ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕೇಂದ್ರ ಸರ್ಕಾರದ ನಂ.2 ಸ್ಥಾನವಾದ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೇಶದಲ್ಲಿ ಮಹತ್ವದ ನಿರ್ಧಾರಗಳು ಪ್ರಕಟವಾಗಬಹುದು ಎಂಬ ನಿರೀಕ್ಷೆ ಗರಿಗೆದರಿದ್ದವು. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಸೋಮವಾರ ನಿಷ್ಕ್ರಿಯವಾಗುವುದರೊಂದಿಗೆ ಅದು ನಿಜವಾಗಿದೆ. 

ನವದೆಹಲಿ (ಆ. 06): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕೇಂದ್ರ ಸರ್ಕಾರದ ನಂ.2 ಸ್ಥಾನವಾದ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ದೇಶದಲ್ಲಿ ಮಹತ್ವದ ನಿರ್ಧಾರಗಳು ಪ್ರಕಟವಾಗಬಹುದು ಎಂಬ ನಿರೀಕ್ಷೆ ಗರಿಗೆದರಿದ್ದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಸೋಮವಾರ ನಿಷ್ಕಿ್ರಯವಾಗುವುದರೊಂದಿಗೆ ಅದು ನಿಜವಾಗಿದೆ. ಇದು ಅಮಿತ್‌ ಶಾ ಅವರು ತಮ್ಮ ರಾಜಕೀಯ ಜೀವನದಲ್ಲಿ ಕೈಗೊಂಡ ಬಹುದೊಡ್ಡ ನಿರ್ಧಾರವಾಗಿದ್ದು, ಅವರ ಹೆಸರು ಚಿರಸ್ಥಾಯಿಯಾಗಲಿದೆ.

ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಮಿತ್‌ ಶಾ ಆ ರಾಜ್ಯದ ಗೃಹ ಸಚಿವರಾಗಿದ್ದರು. ಅವರ ಆಡಳಿತ ವೈಖರಿ ಗೊತ್ತಿದ್ದ ಕಾರಣದಿಂದಲೇ ಈ ಬಾರಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ನಿರ್ಧಾರವನ್ನು ಮೋದಿ ಕೈಗೊಂಡಿದ್ದರು. ಅದಕ್ಕಾಗಿ ಅಮಿತ್‌ ಶಾ ಅವರನ್ನು ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ನಿಲ್ಲಿಸಲಾಗಿತ್ತು. ಗೆದ್ದು ಬರುತ್ತಿದ್ದಂತೆ ಅವರಿಗೆ ಗೃಹ ಖಾತೆಯನ್ನು ನೀಡಲಾಗಿತ್ತು.

ಜಮ್ಮು-ಕಾಶ್ಮೀರದಂತಹ ವಿಚಾರಗಳಲ್ಲಿ ರಹಸ್ಯ ಕಾಪಾಡಿಕೊಂಡು, ನಿರ್ಧಾರಗಳನ್ನು ಜಾರಿಗೊಳಿಸಲು ನಂಬಿಕಸ್ಥ ಬಂಟರೊಬ್ಬರು ಮೋದಿ ಅವರಿಗೆ ಬೇಕಾಗಿದ್ದರು. ಆ ಸ್ಥಾನಕ್ಕೆ ಮೋದಿ ಅವರು ಅಮಿತ್‌ ಶಾ ಅವರನ್ನು ಆಯ್ಕೆ ಮಾಡಿಕೊಂಡರು. ಅವರ ಆಯ್ಕೆ ಸರಿಯಾಗಿಯೇ ಇದೆ ಎಂಬುದನ್ನು ಅಮಿತ್‌ ಶಾ ಮತ್ತೊಮ್ಮೆ ನಿರೂಪಿಸಿದ್ದಾರೆ.

ಶಂಕಿತ ಉಗ್ರರನ್ನು ಉಗ್ರಗಾಮಿಗಳೆಂದು ಘೋಷಿಸುವ ಕಾನೂನುಬಾಹಿರ ಚಟುವಟಿಕೆ ತಡೆ ಮಸೂದೆಯನ್ನು ಕಳೆದ ವಾರವಷ್ಟೇ ಯಶಸ್ವಿಯಾಗಿ ಅಂಗೀಕರಿಸಿದ್ದ ಅಮಿತ್‌ ಶಾ, ತನ್ಮೂಲಕ ಉಗ್ರರ ಹೆಡೆಮುರಿ ಕಟ್ಟಲು ಕಾನೂನಿನ ಬಲ ಒದಗಿಸಿದ್ದರು. ಈಗ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕಾದ ಹೊಣೆಯನ್ನೂ ಹೊತ್ತಿದ್ದಾರೆ. ಕಾಶ್ಮೀರದ ಕಾನೂನು- ಸುವ್ಯವಸ್ಥೆ ಇನ್ನು ಕೇಂದ್ರ ಸರ್ಕಾರ ಅದರಲ್ಲೂ ಗೃಹ ಇಲಾಖೆಯ ಪರಿಧಿಗೆ ಬರುವುದರಿಂದ ಅವರ ಜವಾಬ್ದಾರಿ ಇನ್ನಷ್ಟುಹೆಚ್ಚಾಗಿದೆ.