ಕಾರಲ್ಲಿ ಹಿಂದೂ-ಮುಸ್ಲಿಂ ಜೋಡಿಯ ಶವಪತ್ತೆ: ಆತ್ಮಹತ್ಯೆಗೆ ಏನು ಕಾರಣ?
ಕಾರಲ್ಲಿ ಹಿಂದೂ-ಮುಸ್ಲಿಂ ಜೋಡಿಯ ಶವ ಪತ್ತೆ
ಮದುವೆಗೆ ಒಪ್ಪಿಗೆ ಸಿಗದ ಕಾರಣಕ್ಕೆ ಆತ್ಮಹತ್ಯೆ
ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಸಲ್ಮಾನ್, ಮನೀಶಾ
ಮುಂಬೈ(ಜೂ.7): ಇಲ್ಲಿನ ಮುಲುಂದ್ ಸಬ್ ಅರ್ಬನ್ ಪ್ರದೇಶದ ಬಳಿ ಕಾರೊಂದರಲ್ಲಿ ಹಿಂದೂ-ಮುಸ್ಲಿಂ ಜೋಡಿಯ ಶವ ಪತ್ತೆಯಾಗಿದ್ದು, ಈ ಜೋಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಲ್ಮಾನ್ ಅರ್ಫೋಜ್ ಮತ್ತು ಮನೀಶಾ ನೆಗಿಲ್ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ಜೋಡಿಯಾಗಿದ್ದು, ಇಬ್ಬರೂ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, ತಮ್ಮ ವಿವಾಹಕ್ಕೆ ಕುಟುಂಬಸ್ಥರು ವಿರೋಧ ಮಾಡಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಲಾಗಿದೆ.
ಅಜ್ಞಾತ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಕಾರಿನ ಗಾಜು ಒಡೆದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಸಲ್ಮಾನ್ ಮತ್ತು ಮನೀಶಾ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಇಬ್ಬರೂ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಯುವ ಜೋಡಿ, ಮನೆಯಲ್ಲಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದರು. ಆದರೆ ಇಬ್ಬರ ಧರ್ಮ ಬೇರೆಯಾದ ಕಾರಣ ಇಬ್ಬರ ಮನೆಯಲ್ಲೂ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನನೊಂದ ಸಲ್ಮಾನ್ ಮತ್ತು ಮನೀಶಾ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.