1971ರ ಯುದ್ಧದಲ್ಲಿ ಪಾಕ್ ಪಡೆಯನ್ನ ಮಣಿಸಿದ್ದ ಭಾರತದ ಹೀರೋ ಇನ್ನಿಲ್ಲ
1971ರ ಯುದ್ಧದಲ್ಲಿ ಪಾಕ್ ಪಡೆಯನ್ನ ಮಣಿಸಿದ್ದ ಭಾರತದ ಹೀರೋ ಬ್ರಿಗೇಡಿಯರ್ ಕುಲದೀಪ್ ಸಿಂಗ್ ಚಂದ್ಪುರಿ (78) ನಿಧನರಾಗಿದ್ದಾರೆ.
ಚಂಡೀಗಢ, [ನ.17]: 1997ರಲ್ಲಿ ತೆರೆಕಂಡಿದ್ದ ಸೂಪರ್ಹಿಟ್ ಬಾರ್ಡರ್ ಚಿತ್ರಕ್ಕೆ ಸ್ಪೂರ್ತಿಯಾಗಿದ್ದ 1971ರ ಭಾರತ-ಪಾಕಿಸ್ತಾನ ಯುದ್ಧದ ಹೀರೋ ಬ್ರಿಗೇಡಿಯರ್ ಕುಲದೀಪ್ ಸಿಂಗ್ ಚಂದ್ಪುರಿ (78) ಅವರು ವಿಧಿವಶರಾಗಿದ್ದಾರೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಚಂದ್ಪುರಿ ಅವರು ಪಂಜಾಬ್ನ ಮೊಹಾಲಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಇಂದು [ಶನಿವಾರ] ಸಂಜೆ ಕೊನೆಯುಸಿರೆಳೆದಿದ್ದಾರೆ. ಕುಲದೀಪ್ ಸಿಂಗ್ ಚಂದ್ಪುರಿ ಅವರು ಲಾಂಗೆವಾಲಾ ಯುದ್ಧದ ಮೂಲಕ ಹೆಸರು ವಾಸಿಯಾಗಿದ್ದರು.
1971ರ ಡಿಸೆಂಬರ್ 4ರ ರಾತ್ರಿ ರಾಜಸ್ಥಾನದ ಲಾಂಗೆವಾಲಾ ಗಡಿಯಲ್ಲಿ 40 ಟ್ಯಾಂಕ್ಗಳೊಂದಿಗೆ ಬಂದಿದ್ದ 2,000 ಪಾಕಿಸ್ತಾನಿ ಸೈನಿಕರನ್ನು ಕುಲದೀಪ್ ಸಿಂಗ್ ನೇತೃತ್ವದ 100 ಕ್ಕೂ ಹೆಚ್ಚು ಭಾರತೀಯ ಸೈನಿಕರಿದ್ದ ಸಣ್ಣ ತುಕಡಿ ಮಣಿಸಿತ್ತು.