ಬಹುಮತ ಸಿಗದಿದ್ದರೆ ರಾಜಕೀಯ ಸನ್ಯಾಸ: ಎಚ್ಡಿಕೆ
‘‘ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರ ಸಾಮರ್ಥ್ಯ ಏನೆಂಬುದು ಸಾಬೀತಾಗಲಿದೆ. ಒಂದು ವೇಳೆ ಸ್ಪಷ್ಟಬಹುಮತ ಸಿಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ ಹೊರತು ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ/ಚಿಕ್ಕಬಳ್ಳಾಪುರ : ‘‘ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರ ಸಾಮರ್ಥ್ಯ ಏನೆಂಬುದು ಸಾಬೀತಾಗಲಿದೆ. ಒಂದು ವೇಳೆ ಸ್ಪಷ್ಟಬಹುಮತ ಸಿಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ ಹೊರತು ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟಹಾಗೂ ಹಾಸನದಲ್ಲಿ ಸೋಮವಾರ ಆಯೋಜಿಸಿದ್ದ ಜೆಡಿಎಸ್ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿ, ‘ಲಂಚ ಪಡೆಯುವುದು ತಪ್ಪಲ್ಲ’ ಎಂಬ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಹೇಳಿಕೆಯೇ ಕಾಂಗ್ರೆಸ್ ಸರ್ಕಾರದ ಸಾಧನೆ ತೋರಿಸುತ್ತದೆ. ಕರಾವಳಿಯಲ್ಲಿ ಮಾರಣ ಹೋಮ ನಡೆದರೂ ಮೌನವಾಗಿರುವ ರಾಜ್ಯ ಸರ್ಕಾರದ ಬಗ್ಗೆ ರಾಜ್ಯದ ಜನ ಎಂದೋ ಮೌನ ಮುರಿದಿದ್ದಾರೆ ಎಂದು ಲೇವಡಿ ಮಾಡಿದರು.
ಸರ್ಟಿಫಿಕೇಟ್ ಬೇಕಿಲ್ಲ: ದೇವೇಗೌಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಕಿಲ್ಲ. ಅವರ ಸರ್ಟಿಫಿಕೇಟ್ನಿಂದ ದೇವೇಗೌಡರ ಯಶಸ್ಸನ್ನು ಅಳೆಯಬೇಕಿಲ್ಲ. ನಾಮಪತ್ರ ಸಲ್ಲಿಕೆ ನಂತರ ಸಿದ್ದರಾಮಯ್ಯ ಮತ್ತು ದೇವೇಗೌಡರ ಅರ್ಹತೆ ಏನೆಂಬುದು ಗೊತ್ತಾಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ರಾಜ್ಯಕ್ಕೆ ಭವಿಷ್ಯವಿಲ್ಲ: ಕರ್ನಾಟಕದಿಂದ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತೊಲಗಿಸದಿದ್ದರೆ ರಾಜ್ಯದ ಜನತೆಗೆ ಭವಿಷ್ಯ ಇಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲೂಟಿ ಸರ್ಕಾರವಾಗಿದೆ. ರಾಜಕೀಯದ ಗಂಧ, ಗಾಳಿ, ಜನತೆಯ ನೋವು, ನಲಿವು ಗೊತ್ತಿರದ ರಾಹುಲ್ ಗಾಂಧಿ, ಅಮಿತ್ ಶಾ ರಾಜ್ಯದ ಕಾವೇರಿ, ಮಹದಾಯಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಭರವಸೆ ನೀಡಲಿಲ್ಲ. ರಾಜ್ಯದ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚಕಾರ ಎತ್ತಲಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಜೆಡಿಎಸ್ ನಿರ್ನಾಮ ಸಾಧ್ಯವಿಲ್ಲ: ಹಾಸನ ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಅಪ್ಪಟ ಕಾಂಗ್ರೆಸಿಗರನ್ನು ಮುಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಜೆಡಿಎಸ್ ನಿರ್ನಾಮ ಮಾಡಲು ಸಾಧ್ಯವಿಲ್ಲ. ಅದು ಜನರಿಂದ ಮಾತ್ರ ಸಾಧ್ಯ ಎಂದರು.
ನಮ್ಮದು ಸ್ವಂತ ಟೀಂ: ಎಚ್ಡಿಕೆ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇತ್ತೀಚೆಗಷ್ಟೇ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದರು. ಜೆಡಿಎಸ್ ಅನ್ನು ಬಿಜೆಪಿಯ ಬಿಟೀಂ ಎಂದಿದ್ದರು. ಸೋಮವಾರ ಇದೇ ಸ್ಥಳದಲ್ಲಿ ಬೃಹತ್ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘‘ಇದೇ ಜಾಗದಲ್ಲಿ ಭಾಷಣ ಮಾಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜೆಡಿಎಸ್, ಬಿಜೆಪಿಯ ಬಿ ಟೀಂ ಎಂದಿದ್ದರು. ಜೆಡಿಎಸ್ ಯಾವ ಟೀಮೂ ಅಲ್ಲ, ಸ್ವಂತ ಟೀಮು ಎಂಬುದನ್ನು ಇಲ್ಲಿ ನೆರೆದಿರುವ ಜನಸ್ತೋಮವೇ ತಿಳಿಸಿಕೊಟ್ಟಿದೆ. ಮೇ 15ರಂದು ದೇವೇಗೌಡರ ಜನ್ಮದಿನದಂದೇ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರ ಸ್ವೀಕರಿಸಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’’ ಎಂದು ತಿಳಿಸಿದರು.
1 ಲಕ್ಷ ಮಂದಿ ಸೇರಿಸುವ ಸವಾಲು ಹಾಕಿದ್ದ ಎಚ್ಡಿಡಿಯಿಂದ ಬೃಹತ್ ಸಮಾವೇಶ
‘ಹಾಸನದಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸಿ ತೋರಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ ಮಾತಿನಂತೆ ಜೆಡಿಎಸ್ ಭದ್ರಕೋಟೆ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಬೃಹತ್ ವಿಕಾಸ ಪರ್ವ ಸಮಾವೇಶ ನಡೆಸಿದರು. ಸಮಾವೇಶಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ಹಾಗೂ ಕಾರ್ಯಕರ್ತರು ಕ್ರೀಡಾಂಗಣದಲ್ಲಿ ಜಮಾಯಿಸಿದ್ದಲ್ಲದೆ, ಜಾಗವಿಲ್ಲದ ಕಾರಣ ಕ್ರೀಡಾಂಗಣದ ಹೊರಗೂ ಜನರು ನೆರೆದಿದ್ದರು.
ಕಾರ್ಯಕ್ರಮದ ನಡುವೆ ಮಳೆಯಿಂದಾಗಿ ವಿದ್ಯುತ್ ಕಡಿತಗೊಂಡಿದ್ದರಿಂದ ಜೆಡಿಎಸ್ ಮುಖಂಡರು ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರಿಗೆ ತಮ್ಮ ಮೊಬೈಲ್ ಟಾಚ್ರ್ಗಳನ್ನು ಆನ್ ಮಾಡಲು ಸೂಚಿಸಿದರು. ಅದಂತೆ ತಮ್ಮ ಮೊಬೈಲ್ ಟಾಚ್ರ್ಗಳನ್ನು ಆನ್ ಮಾಡಿ ಕ್ರೀಡಾಂಗಣದ ತುಂಬಾ ಬೆಳಕು ಪ್ರಜ್ವಲಿಸುವಂತೆ ಮಾಡಿದ ಕಾರ್ಯಕರ್ತರು, ‘ಎಚ್.ಡಿ. ಕುಮಾರಸ್ವಾಮಿ ಅವರೇ ಮುಂದೆ ಸಿಎಂ ಆಗಿ ರಾಜ್ಯಕ್ಕೆ ಬೆಳಕಾಗಲಿ. ಎಲ್ಲ ವರ್ಗದವರ ಬಾಳಿಗೆ ಬೆಳಕಾಗಲಿ’ ಎಂಬ ಘೋಷಣೆ ಮೊಳಗಿದವು.