ಮೋದಿ ಬಳಿ ಶಾಸ್ತ್ರ ಕೇಳಿ ಆಯೋಗದಿಂದ ಚುನಾವಣಾ ದಿನಾಂಕ ನಿಗದಿ
ಕಾಂಗ್ರೆಸ್ ಮುಕ್ತ ಬರಲು ಮಾಡುವವರ ಬಗ್ಗೆ ಎಚ್ಚರವಿರಲಿ ಎಂದು ಬಿಜೆಪಿ ವಿರುದ್ದ ಗುಡುಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಬಿಜೆಪಿ ಎದುರಿಸಲು, ಮೋದಿ ಓಟ ತಡೆಯಲು ಜೆಡಿಎಸ್ನಿಂದ ಮಾತ್ರ ಎಂದು ತಿಳಿಸಿದ್ದಾರೆ.
ಕೋಲಾರ : ಕಾಂಗ್ರೆಸ್ ಮುಕ್ತ ಬರಲು ಮಾಡುವವರ ಬಗ್ಗೆ ಎಚ್ಚರವಿರಲಿ ಎಂದು ಬಿಜೆಪಿ ವಿರುದ್ದ ಗುಡುಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಬಿಜೆಪಿ ಎದುರಿಸಲು, ಮೋದಿ ಓಟ ತಡೆಯಲು ಜೆಡಿಎಸ್ನಿಂದ ಮಾತ್ರ ಎಂದು ತಿಳಿಸಿದ್ದಾರೆ.
ಭಾನುವಾರ ಮುಳಬಾಗಲಿನ ಅಮರಜ್ಯೋತಿ ವಿದ್ಯಾಸಂಸ್ಥೆಯ ಮುಂಭಾಗ ಏರ್ಪಡಿಸಿದ್ದ ವಿಕಾಸಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನರೇಂದ್ರ ಮೋದಿ ಅವರ ಆಟ ನಮ್ಮಲ್ಲಿ ನಡೆಯುವುದಿಲ್ಲ ಎಂದರು. ಇದೇ ವೇಳೆ ಕೇಂದ್ರ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿಯವರನ್ನು ಶಾಸ್ತ್ರ ಕೇಳಿ ನಂತರ ಮೇ ತಿಂಗಳಲ್ಲಿ ಚುನಾವಣಾ ದಿನಾಂಕವನ್ನು ನಿಗದಿ ಮಾಡಲಿದೆ ಎಂದು ಚುನಾವಣಾ ಆಯೋಗದ ಕಾರ್ಯವೈಖರಿಯ ವಿರುದ್ಧವೂ ಕಿಡಿಕಾರಿದರು.
ಜಾಹೀರಾತಿಗೆ ವ್ಯರ್ಥಹಣ:
ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಮೇಲೆ ಹೆಚ್ಚಿನ ತೆರಿಗೆ ಹಾಕಿದ್ದು ಇದರಿಂದ ಜನ ಸಾಮಾನ್ಯರು ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ. ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ರಾಜ್ಯದ ಜನರ ತೆರಿಗೆ ಹಣದಲ್ಲಿ ಪುಟಗಟ್ಟಲೇ ಜಾಹಿರಾತು ನೀಡಿ ಹಣ ವ್ಯರ್ಥ ಮಾಡಲಾಗುತ್ತಿದೆ. ಜಾಹೀರಾತು ಪ್ರಕಟಣೆಯಲ್ಲಿ ಪಕ್ಷದ ವರಿಷ್ಠರು, ಸಚಿವರ ಹೆಸರು ಹಾಗು ಭಾವಚಿತ್ರ ಇರುವುದಿಲ್ಲ ಆದರೆ ಮುಖ್ಯಮಂತ್ರಿಗಳ ಭಾವಚಿತ್ರ ರಾರಾಜಿಸುತ್ತಿರುತ್ತದೆ ಎಂದು ಆರೋಪಿಸಿದರು.
ಇದೇವೇಳೆ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ ರವಿ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಯಾವುದೇ ರೀತಿಯ ಸಹಕಾರ ನೀಡದೇ ಅನ್ಯಾಯ ಮಾಡಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮರ್ಯಾದೆ ಹೋಗಿದೆ ಎಂದರು.
ರಾಜ್ಯದಲ್ಲಿ 3700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಬಿಜೆಪಿ ಬೇಡ ಕುಮಾರಸ್ವಾಮಿ ಬೇಕು ಎಂದು ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ಇಸ್ರೇಲ್ನಲ್ಲಿ ಕೃಷಿ ಬಗ್ಗೆ ಅಧ್ಯಯನ ಮಾಡಲು ತೆರಳಿದಾಗ ಹೃದಯಾಘಾತವಾಯಿತು. ಇದರಿಂದ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡು ರೈತರ ಪರಿಸ್ಥಿತಿ ನೋಡಿ ವಾಪಾಸಾಗಿದ್ದೇನೆ ಎಂದರು.
ಇಸ್ರೇಲ್ ಮಾದರಿ ಕೃಷಿಗೆ ಹಣ:
ಕಳೆದ 10 ದಿನಗಳಿಂದ ವಿಕಾಸ ಪರ್ವ ಪ್ರವಾಸ ಮಾಡುತ್ತಿದ್ದು ಮಾಚ್ರ್ 17ರವರೆಗೆ ಮುಂದುವರೆಯುತ್ತದೆ. ಪ್ರವಾಸಕ್ಕೆ ಹೋದ ವೇಳೆ ಸಾವಿರಾರು ಜನ ಆಗಮಿಸಿ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಇಸ್ರೇಲ್ ದೇಶದಲ್ಲಿ ಮಾಡುವ ಕೃಷಿ ಮಾದರಿಯಲ್ಲೇ ನಮ್ಮ ರಾಜ್ಯದಲ್ಲೂ ರೈತರು ಮಾಡುವ ಸಲುವಾಗಿ ಎಲ್ಲಾ ರೀತಿಯ ಅಗತ್ಯಗಳನ್ನು ಪೂರೈಸಲು 25 ಸಾವಿರ ಕೋಟಿ ರು.ಗಳನ್ನು ಮೀಸಲಿಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಜೆಡಿಎಸ್ ಪಕ್ಷ ಲೆಕ್ಕಕ್ಕಿಲ್ಲ ಎಂದು ಮಾತನಾಡುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನತೆ ಇದಕ್ಕೆ ಪ್ರತ್ಯುತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಜ್ಯದ ರೈತರ ಸಾಲ ಮನ್ನಾ ಮಾಡುವ ಮೂಲಕ ಋುಣಮುಕ್ತಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ರೈತರು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿರುವ 51 ಸಾವಿರ ಕೋಟಿ ಹಾಗು ಸ್ತ್ರೀಶಕ್ತಿ ಸಂಘಗಳು ಪಡೆದಿರುವ 4 ಸಾವಿರ ಕೋಟಿ ರು.ಗಳನ್ನು ಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಯರಗೋಳ್ ಯೋಜನೆಗೆ ಹಣ ಬಿಡುಗಡೆ ಮಾಡಿದೆ ಆದರೆ ತದನಂತರ ಅಧಿಕಾರಕ್ಕೆ ಬಂದ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ಇದನ್ನು ಅನುಷ್ಠಾನಗೊಳಿಸದೇ ಬಿಡುಗಡೆಯಾದ ಅನುದಾನವನ್ನು ದುರುಪಯೋಗಪಡಿಸಿಕೊಂಡಿದೆ. ಯರಗೋಳ್ ಯೋಜನೆಯನ್ನು ಅನುಷ್ಟಾನಕ್ಕೆ ತರಲು ವಿಫಲವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆ.ಸಿ.ವ್ಯಾಲಿ ಯೋಜನೆಯಡಿ ಕೊಳಚೆ ನೀರನ್ನು ಜಿಲ್ಲೆಯ ಕೆರೆಗಳಿಗೆ ಹರಿಸಲು ಮುಂದಾಗಿರುವುದು ಖಂಡನೀಯ ವಿಷಯವಾಗಿದೆ. ಎತ್ತಿನಹೊಳೆ ಯೋಜನೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ ಸಕಲೇಶಪುರದಲ್ಲಿ ಕಾಮಗಾರಿ ನಿಂತಿದೆ. ಈ ಯೋಜನೆಯಡಿ 2800 ಕೋಟಿ ಬಿಡುಗಡೆಯಾಗಿದ್ದರೂ ಸಹ ಕೇವಲ ಪೈಪುಗಳ ಅಳವಡಿಕೆ ಮಾಡುವ ಕಾಮಗಾರಿಗೆ ಖರ್ಚಾಗಿದೆ ಎಂದು ತಿಳಿಸಿದರು.