Asianet Suvarna News Asianet Suvarna News

ಕಾವೇರಿ ತೀರ್ಪಿನ ಬಗ್ಗೆ ಕೊನೆಗೂ ಮೌನ ಮುರಿದ ಮಾಜಿ ಪ್ರಧಾನಿ ದೇವೇಗೌಡ

ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ  ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಕೋರ್ಟ್ ತೀರ್ಪಿನ ಬಗ್ಗೆ ಕೊನೆಗೂ ಮೌನ ಮುರಿದಿರುವ ದೇವೇಗೌಡರು, ಸಿಹಿ ಹಂಚಿ ಸಂಭ್ರಮ ಪಡಬೇಕಾದ ಅಗತ್ಯ ಇಲ್ಲ. ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರು.

HDD Talk About Cauvery Verdict

ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ  ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಕೋರ್ಟ್ ತೀರ್ಪಿನ ಬಗ್ಗೆ ಕೊನೆಗೂ ಮೌನ ಮುರಿದಿರುವ ದೇವೇಗೌಡರು, ಸಿಹಿ ಹಂಚಿ ಸಂಭ್ರಮ ಪಡಬೇಕಾದ ಅಗತ್ಯ ಇಲ್ಲ. ರಾಜ್ಯಕ್ಕೆ ಅನ್ಯಾಯವಾಗಿದೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತಂತೆ ಆದೇಶ ನೀಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರವು ಕಾನೂನು ತಜ್ಞರ ಸಭೆ ಕರೆದು ಸೂಕ್ತವಾದ ತೀರ್ಮಾನ ಕೈಗೊಳ್ಳಬೇಕು. ರಾಜ್ಯಕ್ಕೆ 14.5 ಟಿಎಂಸಿ ನೀರು ಸಿಕ್ಕಿದೆ ಎಂದು ಸಂಭ್ರಮಿಸಬೇಕಾದ ಅಗತ್ಯ ಇಲ್ಲ. ರಾಜ್ಯಕ್ಕೆ 40 ಟಿಎಂಸಿ ನೀರಿನ ಅಗತ್ಯ ಇದೆ. ಅವಶ್ಯಕತೆ ಇರುವ ನೀರು ಪಡೆಯುವ ವಿಚಾರದಲ್ಲಿ ಸರ್ಕಾರದ ನಿಲುವೇನು ಎಂಬುದನ್ನು ಸ್ಪಸ್ಟಪಡಿಸಬೇಕು. ಸದ್ಯದ ತೀರ್ಪಿನ ಬಗ್ಗೆ ಸಂಭ್ರಮಿಸುವುದಕ್ಕಿಂತ ಮುಂದಿನ ಹೆಜ್ಜೆಯ ಬಗ್ಗೆ ಸಿದ್ಧತೆ ನಡೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಕಾವೇರಿ ವಿಷಯ ದಲ್ಲಿ ಅನ್ಯಾಯ ಎಸಗಿವೆ. 2007ರಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಲೋಕಸಭೆಯಲ್ಲಿ ವಿರೋಧಿಸಲಾಗಿತ್ತು. ಮಂಡಳಿಯ ತೂಗುಕತ್ತಿ ನಮ್ಮ ಮೇಲಿದೆ.

ಮಂಡಳಿ ರಚನೆಯಾದರೆ ಜಲಾಶಯಗಳ ಮೇಲಿನ ನಮ್ಮ ನಿಯಂತ್ರಣ ತಪ್ಪಿ ಹೋಗ ಲಿವೆ. ತೀರ್ಪು ಬಂದ ಬಳಿಕ ಮೇಲ್ಮನವಿ ಸಲ್ಲಿಸುವ ಬಗ್ಗೆ ಯಾವುದೇ ತಯಾರಿ ಮಾಡಿಕೊಂಡಿಲ್ಲ. ರಾಜ್ಯದ ಹಿತ ಕಾಪಾಡಲು ಮುಂದಿನ ಹೆಜ್ಜೆ ಇಡುವ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ತಮಿಳುನಾಡಿನ 13 ಸಂಸದರು ಕಾವೇರಿ ನೀರಿಗಾಗಿ ಒಗ್ಗೂಡಿ ಹೋರಾಟ ನಡೆಸುತ್ತಾರೆ. ಆದರೆ, ಸಂಸತ್‌ನಲ್ಲಿ ನಾನು ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ. ನನ್ನ ಹೋರಾಟಕ್ಕೆ ಕೇಂದ್ರ ಸಚಿವ ಅನಂತ ಕುಮಾರ್ ಅವರಿಗೆ ಸಹಕರಿಸುವಂತೆ ಮನವಿ ಮಾಡಿದ್ದೆ. ಆದರೆ, ಪಕ್ಷದ ಮುಖಂಡರ ಜತೆ ಚರ್ಚೆ ಮಾಡಿ ನಾಳೆ ಹೇಳುತ್ತೇನೆ ಎಂದು ಹೇಳಿದ್ದರು. ದುರಂತವೆಂದರೆ ಆ ನಾಳೆ ಬರಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಜಕಾರಣದ ಸ್ವಾರ್ಥಕ್ಕಾಗಿ ಏನೆಲ್ಲಾ ನಡೆಯುತ್ತಿದೆ. ಎಂತಹ ದುರಂತ ನಮ್ಮದು. ಮುಂದಿನ ಪೀಳಿಗೆಯ ಮಕ್ಕಳು ಬದುಕಬೇಕು ಎಂಬ ಉದ್ದೇಶದಿಂದ ಹೋರಾಟ ನಡೆಸಲಾಗುತ್ತಿದೆ ಯೇ ವಿನಃ ಇದರಲ್ಲಿ ಯಾವುದೇ ಸ್ವಾರ್ಥ ರಾಜಕಾರಣ ಇಲ್ಲ ಎಂದು ಹೇಳಿದರು.

ಸುಪ್ರೀಂಕೋರ್ಟ್ ತೀರ್ಪಿನಲ್ಲಿ ನದಿ ತಿರುವು ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ. ಪರಿಣಾಮ ಕಾವೇರಿ ನೀರನ್ನು ಪಾವಗಡ, ಶಿರಾ ತಾಲೂಕುಗಳಿಗೆ ನೀಡಲು ಅಡ್ಡಿಯಾಗುತ್ತದೆ. ನಾನು ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ಮಾಜಿ ಪ್ರಧಾನಿಯಾಗಿ ರಾಜ್ಯ ಜನರಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇನೆ.

ಎರಡು ರಾಷ್ಟ್ರೀಯ ಪಕ್ಷಗಳನ್ನು ನಂಬಿ ರಾಜ್ಯದ ಜನರ ಮೋಸ ಹೋಗಿದ್ದು ಸಾಕು. ನಮಗೆ ಅಧಿಕಾರದ ಆಸೆ ಇಲ್ಲ. ಸಾಯುವವರೆಗೂ ಕಾವೇರಿ ಉಳಿಸಿಕೊಳ್ಳಲು ಏಕಾಂಗಿ ಹೋರಾಟ ಮಾಡುತ್ತೇನೆ. ಕಾವೇರಿ ನದಿ ನೀರು ಹಂಚಿಕೆ ಕುರಿತು ನ್ಯಾಯಾಲಯ ನೀಡಿರುವ ತೀರ್ಪು ಸಂಭ್ರಮಪಡುವಷ್ಟು ರಾಜ್ಯದ ಪರವಾಗಿಲ್ಲ. ಹಲವು ಮಾರಕಾಂಶಗಳು ತೀರ್ಪಿನಲ್ಲಿ ಅಡಗಿವೆ. ಎರಡು ಬೆಳೆ ಬೆಳೆಯುತ್ತಿದ್ದ ಕಾವೇರಿ ಜಲಾಯನಯ ಪ್ರದೇಶದ ರೈತರು ಒಂದು ಬೆಳೆಗೆ ಸೀಮಿತವಾಗುವಂತಾಗಿದೆ. ಏತ ನೀರಾವರಿಗೆ ಅವಕಾಶ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ವಪಕ್ಷ ನಿಯೋಗವು ನ್ಯಾಯಾಲಯದ ತೀರ್ಪು ಪ್ರಶ್ನೆ ಮಾಡುವಂತೆ ಒತ್ತಡ ಹೇರಿದೆ. ಅಲ್ಲದೇ, ತೀರ್ಪಿನ ಕುರಿತು ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯವು ಆರು ವಾರಗಳ ಕಾಲ ಸಮಯಾವಕಾಶ ನೀಡಿದೆ. ಆದರೂ ರಾಜ್ಯ ಸರ್ಕಾರ ಅತ್ತ ಗಮನಹರಿಸಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದು, ಕಾಫಿ, ಪಕೋಡ ಮತ್ತು ಶೇ.10ಹಾಗೂ ಶೇ.90 ಕಮಿಷನ್ ಎಂದು ಹೇಳಿಕೊಂಡು ತಿರುಗಾಡುತ್ತಿವೆ ಎಂದು ವ್ಯಂಗ್ಯವಾಡಿದರು.

Follow Us:
Download App:
  • android
  • ios