ಬೆಂಗಳೂರು ರಸ್ತೆಗೆ ಸರ್ಕಾರ ಚಿನ್ನ, ಬೆಳ್ಳಿ ಹಾಕ್ತಿದೆಯೇ?
ವಿಫಲ ಸ್ಟೀಲ್ ಬ್ರಿಡ್ಜ್ ಯೋಜನೆಯ ಗುತ್ತಿಗೆ ನೀಡಿದ್ದ ಕಂಪನಿಗೇ ಕೆಂಪೇಗೌಡ ಬಡಾವಣೆಯ ರಸ್ತೆ ನಿರ್ಮಾಣದ ಗುತ್ತಿಗೆಯನ್ನೂ ರಾಜ್ಯ ಸರ್ಕಾರ ನೀಡಿದ್ದು, ಒಂದು ಕಿ.ಮೀ.ರಸ್ತೆ ನಿರ್ಮಾಣಕ್ಕೆ 39 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಆ ರಸ್ತೆಗಳಿಗೆ ಸರ್ಕಾರವು ಚಿನ್ನ ಅಥವಾ ಬೆಳ್ಳಿಯ ಲೇಪನ ಮಾಡುತ್ತಿದೆಯೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬೆಂಗಳೂರು : ವಿಫಲ ಸ್ಟೀಲ್ ಬ್ರಿಡ್ಜ್ ಯೋಜನೆಯ ಗುತ್ತಿಗೆ ನೀಡಿದ್ದ ಕಂಪನಿಗೇ ಕೆಂಪೇಗೌಡ ಬಡಾವಣೆಯ ರಸ್ತೆ ನಿರ್ಮಾಣದ ಗುತ್ತಿಗೆಯನ್ನೂ ರಾಜ್ಯ ಸರ್ಕಾರ ನೀಡಿದ್ದು, ಒಂದು ಕಿ.ಮೀ.ರಸ್ತೆ ನಿರ್ಮಾಣಕ್ಕೆ 39 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಆ ರಸ್ತೆಗಳಿಗೆ ಸರ್ಕಾರವು ಚಿನ್ನ ಅಥವಾ ಬೆಳ್ಳಿಯ ಲೇಪನ ಮಾಡುತ್ತಿದೆಯೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡ ಬಡಾವಣೆ ಗುತ್ತಿಗೆಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಗಮನಿಸಿದರೆ ಭ್ರಷ್ಟಾಚಾರಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು.
ಸ್ಟ್ರೀಲ್ ಬ್ರಿಡ್ಜ್ ಯೋಜನೆ ಗುತ್ತಿಗೆಯನ್ನು ಯಾವ ಕಂಪನಿಗೆ ನೀಡಲಾಗಿತ್ತು ಹಾಗೂ ಅದೇನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಅದೇ ಕಂಪನಿಗೆ ಕೆಂಪೇಗೌಡ ಬಡಾವಣೆಯ ರಸ್ತೆ ನಿರ್ಮಾಣದ ಗುತ್ತಿಗೆ ನೀಡಲಾಗಿದೆ. ರಸ್ತೆಗೆ ಚಿನ್ನ ಅಥವಾ ಬೆಳ್ಳಿಯ ಲೇಪನ ಮಾಡಲಾಗುತ್ತಿದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಯಾವ ಕಾರಣಕ್ಕಾಗಿ ತರಾತುರಿಯಲ್ಲಿ ಮಾಡಲಾಗುತ್ತಿದೆ ಎಂಬುದನ್ನು ಸರ್ಕಾರ ಹೇಳಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ದಿವಾಳಿಯಾಗಿದೆ. ಹೊಸ ಬಡಾವಣೆ ರಚನೆ ಮಾಡಲು ಸಾಧ್ಯವಾಗುತ್ತಿಲ್ಲ. ವೇತನ ನೀಡಲು ಮೂಲೆಯ ನಿವೇಶನಗಳನ್ನು ಮಾರಾಟ ಮಾಡುತ್ತಿದೆ. ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ ಪ್ಲಾನ್)ಯನ್ನು ತರಾತುರಿಯಲ್ಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.