ದಿಲ್ಲಿ ಪ್ರತಿನಿಧಿಯಾಗಿ ಅಂತೂ ಅಜಯ್ ಸಿಂಗ್ ನೇಮಕ
ದಿಲ್ಲಿ ಪ್ರತಿನಿಧಿಯಾಗಿ ಅಂತೂ ಅಜಯ್ ಸಿಂಗ್ ನೇಮಕ| ಕಗ್ಗಂಟಾಗಿದ್ದ ನೇಮಕಕ್ಕೆ ಸಮನ್ವಯದಲ್ಲಿ ಪರಿಹಾರ| ಇದೀಗ ಕಡತಕ್ಕೆ ಸಹಿ ಹಾಕಿದ ಸಿಎಂ ಕುಮಾರಸ್ವಾಮಿ
ಬೆಂಗಳೂರು[ಜ.27]: ಕಾಂಗ್ರೆಸ್ ನಾಯಕರು ಶಿಫಾರಸು ಮಾಡಿದ ಒಂದು ತಿಂಗಳ ಬಳಿಕ ಕೊನೆಗೂ ಡಾ.ಅಜಯ್ಸಿಂಗ್ ಅವರನ್ನು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಡಿಸೆಂಬರ್ ಕೊನೆಯ ವಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಿಗಮ ಮಂಡಳಿ ನೇಮಕಾತಿ ಕುರಿತು ಮಾಡಿದ್ದ ಶಿಫಾರಸಿನಲ್ಲಿ ಜೇವರ್ಗಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಧರಂಸಿಂಗ್ ಪುತ್ರ ಅಜಯ್ಸಿಂಗ್ ಅವರನ್ನು ವಿಶೇಷ ಪ್ರತಿನಿಧಿಯಾಗಿ ನೇಮಿಸುವಂತೆಯೂ ಸೂಚಿಸಲಾಗಿತ್ತು. ಎರಡು ನಿಗಮ ಮಂಡಳಿ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ನೇಮಕಾತಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ತಡೆಹಿಡಿದಿದ್ದರು. ಇದು ಕಾಂಗ್ರೆಸ್ ಶಾಸಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಇತ್ತೀಚೆಗೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೂಲಕ ಬಂದಿರುವ ನೇಮಕಾತಿ ಶಿಫಾರಸನ್ನು ತಡೆಹಿಡಿಯುವುದು ನೇರವಾಗಿ ಅವರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಹೀಗಾಗಿ ತಡೆಹಿಡಿದಿರುವ ನೇಮಕಾತಿ ಕುರಿತ ಆದೇಶ ಕೂಡಲೇ ಹೊರಡಿಸಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಪ್ಪಿದ್ದು, ಆದೇಶ ಹೊರಡಿಸುವುದಾಗಿ ತಿಳಿಸಿದ್ದರು. ಅದರಂತೆ ಕಡತಕ್ಕೆ ಸಹಿ ಹಾಕಿದ್ದಾರೆ.