ಮಗನ ಪರ ದೇವೇಗೌಡರ ಬ್ಯಾಟಿಂಗ್
- ಕಾಂಗ್ರೆಸ್ ಜೊತೆ ಸೇರಿ ಬಿಜೆಪಿ ಸೋಲಿಸುವುದೇ ನಮ್ಮ ಗುರಿ
- ಕುಟುಂಬದಲ್ಲಿ ಒಡಕುಂಡು ಮಾಡದಿರಲು ಮಾಧ್ಯಮಗಳಿಗೆ ಮನವಿ
ಬೆಂಗಳೂರು[ಜೂ.14]: ರೈತರ ಸಾಲ ಮನ್ನಾ ವಿಚಾರವಾಗಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರವಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮಗನ ಪರವಾಗಿ ಬ್ಯಾಟಿಂಗ್ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣೆಯ ಉತ್ಸಾಹದಲ್ಲಿ ರೈತರ ಸಾಲಮನ್ನವನ್ನು ಒಂದೇ ದಿನದಲ್ಲಿ ಮಾಡುವುದಾಗಿ ಹೇಳಿದ್ದರು. ಆದರೆ ಪಕ್ಷಕ್ಕೆ 37 ಸ್ಥಾನ ಬಂದಿರುವ ಕಾರಣ ಹೇಗೆ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರ ಇರುವುದರಿಂದ ಕಾಂಗ್ರೆಸ್ ಪಕ್ಷದವರ ಮಾತನ್ನು ಕೇಳಬೇಕಾಗುತ್ತದೆ. ಆದರೂ ಸಿಎಂ ರೈತರು ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆಗೆ ಮಾತಾಡಿರುವುದು ಉತ್ತಮ ಬೆಳವಣಿಗೆ ಎಂದರು.
ಬಿಜೆಪಿ ಸೋಲಿಸುವುದೇ ನಮ್ಮ ಗುರಿ
ಲೋಕಸಭೆಯಲ್ಲಿ ನಮಗೆ ಎಷ್ಟು ಸ್ಥಾನ ಸಿಗುತ್ತೋ ಗೊತ್ತಿಲ್ಲ. ನಮ್ಮ ಪಕ್ಷಕ್ಕೆ ಸೀಟು ಮುಖ್ಯ ಅಲ್ಲ. ಕಾಂಗ್ರೆಸ್ ಜೊತೆ ಸೇರಿ ಬಿಜೆಪಿಗೆ ಹಿನ್ನಡೆ ಮಾಡುವುದಕ್ಕೆ ನಾವು ಮುಂದಾಗಬೇಕಿದೆ. ಕಾರ್ಯಕರ್ತರು ಇದನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ಬಿಜೆಪಿ ಸೋಲಿಸುವುದೇ ನಮ್ಮ ಗುರಿ ಎಂದು ಕೇಂದ್ರದ ಆಡಳಿತ ಪಕ್ಷದ ವಿರುದ್ಧ ರಣಕಹಳೆ ಊದಿದರು.
ಮಾದ್ಯಮಗಳ ಮೇಲೆ ಕಿಡಿ
ಸಚಿವ ಸಂಪುಟ ವಿಸ್ತರಣೆ ವೇಳೆ ಜೆಡಿಎಸ್'ನಲ್ಲಿ ಗಲಾಟೆ ಅಂತ ಹಾಕಿದ್ದರು. ರೇವಣ್ಣ, ಭವಾನಿ ಮನೆ ಬಿಟ್ಟು ಹೋಗ್ತಾರೆ ಅಂತ ಹೇಳಿದ್ರಿ. ದೇವೇಗೌಡರ ಮನೆಯಲ್ಲಿ ಜಗಳ ಅಂತ ಹಾಕಿದ್ರಿ. ಅದು ನಮಗೆ ಬೇಸರವಾಗಿದೆ. ಅದಕ್ಕೆ ನಾನು ಮಾಧ್ಯಮಗಳೊಂದಿಗೆ ಹೆಚ್ಚು ಮಾತಾಡೊಲ್ಲ ಅಂತ ಹೇಳಿದ್ದೆ. ಅಂತಹ ಯಾವುದೇ ಘಟನೆ ನಮ್ಮಲ್ಲಿ ಆಗಿಲ್ಲ. ಗೌಡರು ಇರೋ ತನಕ ಮತ್ತು ನಂತರ ಸಹ ನಮ್ಮ ಕುಟುಂಬ ಒಂದಾಗಿ ಇರುತ್ತದೆ. ದಯಮಾಡಿ ಕುಟುಂಬದಲ್ಲಿ ಒಡಕುಂಟುಮಾಡಬೇಡಿ ಎಂದು ಮನವಿ ಮಾಡಿದರು.