ಕೈ ಫಾಲೋ ಮಾಡಿದ ದಳ, ಅನರ್ಹ ಶಾಸಕರಿಗೆ ದೇವೇಗೌಡರ ಗುದ್ದು
ಅತೃಪ್ತಿಯ ಮಾತನ್ನಾಡಿ ರಾಜೀನಾಮೆ ನೀಡಿ ಹೊರಹೋಗಿದ್ದ ಜೆಡಿಎಸ್ ಅನರ್ಹ ಶಾಸಕರಿಗೆ ಉಚ್ಛಾಟನೆ ಶಿಕ್ಷೆ ನೀಡಲಾಗಿದೆ. ಅನರ್ಹಗೊಂಡಿದ್ದ ಮೂವರು ಶಾಸಕರನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ಬೆಂಗಳೂರು[ಜು. 31] ಹುಣಸೂರು ವಿಧಾನಸಭಾ ಕ್ಷೇತ್ರದ ಎಚ್ ವಿಶ್ವನಾಥ್, ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ಗೋಪಾಲಯ್ಯ ಹಾಗೂ ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದ ನಾರಾಯಣಗೌಡ ಅವರನ್ನು ಜಾತ್ಯತೀತ ಜನತಾ ದಳದಿಂದ ಉಚ್ಛಾಟನೆ ಮಾಡಲಾಗಿದೆ.
ಕಾಂಗ್ರೆಸ್ ಸಹ 14 ಅನರ್ಹ ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು. 2018ರ ಚುನಾವಣೆಯಲ್ಲಿ ಆಯ್ಕೆಯಾಗಿ ರಾಜೀನಾಮೆ ಕೊಟ್ಟಿದ್ದ ಎಲ್ಲಾ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಮಂಗಳವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅನರ್ಹ ಶಾಸಕರನ್ನು ಉಚ್ಛಾಟನೆಗೊಳಿಸಿದ್ದರು.
HDK ವಿಶ್ವಾಸ ಕಳೆದುಕೊಳ್ಳಲು ಕಾರಣವಾದ ಆ 20 ಶಾಸಕರ ಪಟ್ಟಿ
ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇಲೆ ಮೂವರನ್ನು ಉಚ್ಛಾಟನೆ ಮಾಡಲಾಗಿದೆ. ಎಚ್.ವಿಶ್ವನಾಥ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಬದಲಾದ ರಾಜಕಾರಣದ ವಾತಾವರಣದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದರು.
ಯಾರೆಲ್ಲ ರಾಜೀನಾಮೆ ಕೊಟ್ಟು ದೋಸ್ತಿ ಸರ್ಕಾರದ ಪತನಕ್ಕೆ ಕಾರಣರಾದರೋ ಅವರೆಲ್ಲರನ್ನು ಆಯಾ ಪಕ್ಷದಿಂದ ಹೊರಹಾಕಲಾಗಿದೆ. ಕಾಂಗ್ರೆಸ್ ನ 14, ಜೆಡಿಎಸ್ ನ 3 ಒಟ್ಟು 17 ಶಾಸಕರು ಉಚ್ಛಾಟನೆಯಾಗಿದ್ದಾರೆ. ದೋಸ್ತಿ ಸರ್ಕಾರ ವಿಶ್ವಾಸ ಮತ ಯಾಚನೆ ಮಾಡಿದ್ದಾಗ ಇವರೆಲ್ಲ ಗೈರಾಗಿದ್ದರು. ಇದಾದ ಮೇಲೆ ಅಂದು ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಎಲ್ಲ ಶಾಸಕರನ್ನು ಅನರ್ಹ ಮಾಡಿ ಆದೇಶ ನೀಡಿದ್ದರು.