ತಿಮ್ಮಪ್ಪನ ದರ್ಶನ ಪಡೆಯಲು ತಿರುಮಲಕ್ಕೆ ಭೇಟಿ ನೀಡಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಅವರ ಪುತ್ರರೂ ಆಗಿರುವ ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಶಿಷ್ಟಾಚಾರದ ಪ್ರಕಾರ ಗೌರವ ನೀಡದೇ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ

ತಿರುಪತಿ: ವೈಕುಂಠ ಏಕಾದಶಿ ದಿನದಂದು ತಿಮ್ಮಪ್ಪನ ದರ್ಶನ ಪಡೆಯಲು ತಿರುಮಲಕ್ಕೆ ಭೇಟಿ ನೀಡಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಅವರ ಪುತ್ರರೂ ಆಗಿರುವ ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಶಿಷ್ಟಾಚಾರದ ಪ್ರಕಾರ ಗೌರವ ನೀಡದೇ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಸ್ಥಳೀಯವಾಗಿ ಜಟಾಪಟಿಗೂ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಿರುಮಲಕ್ಕೆ ಬಂದಿದ್ದಾಗ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಸೂಕ್ತ ಭದ್ರತೆ ಒದಗಿಸದೇ ಅಗೌರವ ತೋರಲಾಗಿದೆ ಎಂದು ತಿರುಮಲ- ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಮಾಜಿ ಸದಸ್ಯ ಒ.ವಿ. ರಮಣ ಆರೋಪಿಸಿದ್ದಾರೆ. ಗಣ್ಯರು ಆಗಮಿಸಿದ್ದಾಗ ಶಿಷ್ಟಾಚಾರದ ಪ್ರಕಾರ ನೀಡಬೇಕಾದ ಗೌರವವನ್ನು ಇಬ್ಬರಿಗೂ ನೀಡಲಾಗಿಲ್ಲ. ಇದಕ್ಕೆ ಟಿಟಿಡಿ ಜಂಟಿ ಕಾರ್ಯನಿರ್ವಾಹಕ ಕೆ.ಎಸ್‌. ಶ್ರೀನಿವಾಸ ರಾಜು ಕಾರಣ, ಈ ಬಗ್ಗೆ ಅವರು ಕ್ಷಮೆಯಾಚಿಸಬೇಕು ಎಂದು ರಮಣ ಆಗ್ರಹಿಸಿದ್ದಾರೆ.

ಅವರ ಈ ಟೀಕೆಗೆ ಶ್ರೀನಿವಾಸ ರಾಜು, ಕಾನೂನು ನೋಟಿಸ್‌ ಮೂಲಕ ಪ್ರತಿಕ್ರಿಯೆ ನೀಡಿದ್ದು, ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. ಇದಕ್ಕೆ ಮರು ಪ್ರತಿಕ್ರಿಯೆ ನೀಡಿರುವ ರಮಣ, ನನ್ನ ಆರೋಪದ ಕುರಿತು ಕ್ಷಮೆ ಯಾಚನೆಗೆ ನಾನು ಸಿದ್ಧ. ಆದರೆ ದೇವೇಗೌಡ ಮತ್ತು ಎಚ್‌ಡಿಕೆಗೆ ಆಗಿರುವ ಅವಮಾನಕ್ಕೆ ಕ್ಷಮೆ ಕೇಳಲು ನೀವು ಸಿದ್ಧವೇ ಎಂದು ತಿರುಗೇಟು ನೀಡಿದ್ದಾರೆ.