ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗುತ್ತಾರಾ ಈ ಮುಖಂಡ..?
ನಾನು ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ. ರಾಜಕೀಯ ಮರಕೋತಿ ಆಟ ಅಲ್ಲ. ನಾನೂ ತತ್ವ, ಸಿದ್ಧಾಂತ ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವವನು ಎಂದು ಡಾ. ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಮೈಸೂರು : ನಾನಲ್ಲ, ನನ್ ಡೆಡ್ಬಾಡಿ ಕೂಡ ಬಿಜೆಪಿಗೆ ಹೋಗಲ್ಲ. ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿರುವವರು ಈ ರೀತಿಯ ಪಿತೂರಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿ.ನರಸೀಪುರ ಕ್ಷೇತ್ರದಲ್ಲಿ ಸೋತ ನಂತರ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಗುರುವಾರ ಕಾಣಿಸಿಕೊಂಡ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ‘ನಾನು ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ. ರಾಜಕೀಯ ಮರಕೋತಿ ಆಟ ಅಲ್ಲ. ನಾನೂ ತತ್ವ, ಸಿದ್ಧಾಂತ ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವವನು. ನನ್ನನ್ನು ಪಕ್ಷದಿಂದ ಹೊರಹಾಕಿ ಕೆಲವರು ಅಧಿಕಾರ ಅನುಭವಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ. ಈಗಲೂ ಕಾಂಗ್ರೆಸ್ನಲ್ಲಿ ಇದ್ದೇನೆ. ಕಾಂಗ್ರೆಸ್ನಲ್ಲೇ ನನ್ನ ರಾಜಕೀಯ ಕೊನೆ’ ಎಂದು ಘೋಷಿಸಿದರು.
ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿರುವ ವಲಸಿಗರು ತಮ್ಮ ಲಾಭಕ್ಕಾಗಿ ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಸಂಬಂಧ ಹಳಸಿದೆ ಎಂಬ ಸುಳ್ಳು ಸುದ್ದಿ ಹರಿಯಬಿಟ್ಟಿದ್ದಾರೆ. ನಮ್ಮ ಸಂಬಂಧ ಹಳಸಿದೆ ಎಂದು ನಾನಾಗಲಿ ಸಿದ್ದರಾಮಯ್ಯ ಆಗಲಿ ಹೇಳಿದ್ದೀವಾ?. ಅವರ ಜತೆ ಯಾವ ಮನಸ್ತಾಪವೂ ಇಲ್ಲ. ನನಗೆ ನನ್ನ ಸೋಲಿಗಿಂತಲೂ ಪಕ್ಷದ ಸೋಲು ಹೆಚ್ಚು ಆಘಾತವಾಗಿದೆ. ಜಾತಿ ಅಭಿವೃದ್ಧಿ ಮೇಲೆ ಸವಾರಿ ಮಾಡಿದೆ. ಇದು ಸಂವಿಧಾನದ ಆಶಯಕ್ಕೆ ಆಘಾತದ ವಿಚಾರ. ಯಾರು ಜಾತಿ ಮಾಡಿದ್ದಾರೆ ಎಂದು ನಿಮಗೆ (ಮಾಧ್ಯಮದವರಿಗೆ) ಗೊತ್ತಿದೆ ಎಂದು ಹೇಳಿದರು.
ಸೋಲಿನಿಂದ ದಿಗ್ಭ್ರಾಂತಿ: ಚುನಾವಣೆ ಸೋಲಿನ ನಂತರ ದಿಗ್ಭ್ರಮೆಗೊಳಗಾಗಿದ್ದೆ. ಸೋಲಿನಿಂದ ಆಚೆ ಬರಲು ಒಂದೂವರೆ ತಿಂಗಳು ಬೇಕಾಯಿತು. ಹೀಗಾಗಿ ಪಕ್ಷದ ಸಭೆಗಳಿಗೆ ಹೋಗಲಾಗಲಿಲ್ಲ. ನನ್ನ ಸೋಲಿಗೆ ಜೆಡಿಎಸ್ ಗೆಲುವು ಕಾರಣವಲ್ಲ. ಬದಲಿಗೆ ಬಿಜೆಪಿ ತಾನು ಗೆಲ್ಲಲು ಆಗದ ಜಾಗದಲ್ಲಿ ತನ್ನ ವೋಟುಗಳನ್ನು ಜೆಡಿಎಸ್ಗೆ ವರ್ಗಾವಣೆ ಮಾಡಿದ್ದೆ ಕಾರಣ. ಈ ಸೋಲಿನ ಅಂತರ ನನಗೆ ದಿಗ್ಭ್ರಾಂತನಾಗಿಸಿತು. ಅಭಿವೃದ್ಧಿ ಮೇಲೆ ಜಾತಿ ಸವಾರಿ ಮಾಡಿತು ಎಂದು ವಿಷಾದಿಸಿದರು.