Asianet Suvarna News Asianet Suvarna News

ಹೇಡಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಸತ್ಯ ಎಂದು ನಂಬುತ್ತಿದ್ದರು : ಸುವರ್ಣ ನ್ಯೂಸ್ ವರದಿ ಅಭಿನಂದಿಸಿದ ಹಾಲಪ್ಪ

ಈ ಪ್ರಕರಣದಲ್ಲಿ ಮಾನಸಿಕವಾಗಿ ನೊಂದ ನಾನು ಹೇಡಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಹಾಲಪ್ಪ ಮಾಡಿದ್ದು ನಿಜ ಎಂದು ಜನ ನಂಬುತ್ತಿದ್ದರು. ನಾನು ಆರೋಪವನ್ನು ಎದುರಿಸಿ ನಿಂತೆ, ಸತ್ಯ ಹೊರಬರಲು ಸ್ವಲ್ಪ ತಡವಾಯಿತು'.  

Halappa Speak After Judgement

ಶಿವಮೊಗ್ಗ(ಆ.17): ಒಂದು ಆತ್ಮಹತ್ಯೆ ಮಾಡಿಕೊಳ್ಳಬೇಕು ಇಲ್ಲವೆ ಈ ಆರೋಪವನ್ನು ಎದುರಿಸಿ ಸತ್ಯವನ್ನು ಜನತೆಗೆ ತಿಳಿಸಬೇಕು ಎಂದು ನಿರ್ಧರಿಸಿದ್ದೆ ಎಂದು ಬಿಜೆಪಿ ಮುಖಂಡ ಹರತಾಳು ಹಾಲಪ್ಪ ತಿಳಿಸಿದ್ದಾರೆ.

ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಿಂದ ನ್ಯಾಯಾಲಯದಿಂದ ಖುಲಾಸೆಗೊಂಡ ನಂತರ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ಅವರು, ಒಬ್ಬ ಹಾಲಿ ಮಂತ್ರಿಯ ಮೇಲೆ ದೊಡ್ಡ ಆರೋಪವನ್ನು ಉದ್ದೇಶಪೂರ್ವಕವಾಗಿಯೇ ಹೊರಿಸಲಾಗಿತ್ತು. ನನ್ನ ವಿರುದ್ಧ ವ್ಯವಸ್ಥಿತ ರಾಜಕೀಯ ಸಂಚು ರೂಪಿಸಲಾಗಿತ್ತು.

ದೂರುದಾರರೆ ಹಾಜರಾಗುತ್ತಿರಲಿಲ್ಲ

ಈ ಪ್ರಕರಣದಲ್ಲಿ ಮಾನಸಿಕವಾಗಿ ನೊಂದ ನಾನು ಹೇಡಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಹಾಲಪ್ಪ ಮಾಡಿದ್ದು ನಿಜ ಎಂದು ಜನ ನಂಬುತ್ತಿದ್ದರು. ನಾನು ಆರೋಪವನ್ನು ಎದುರಿಸಿ ನಿಂತೆ, ಸತ್ಯ ಹೊರಬರಲು ಸ್ವಲ್ಪ ತಡವಾಯಿತು'.  

ನಮ್ಮ ದೇಶದ ಇತಿಹಾಸದಲ್ಲಿ ದೂರು ಕೊಟ್ಟವರು ಮೊದಲು ಹಾಜರಾಗುತ್ತಾರೆ. ಆದರೆ ನನ್ನ ಪ್ರಕರಣದಲ್ಲಿ ದೂರು ಕೊಟ್ಟವರೆ ಹಾಜರಾಗುತ್ತಿರಲಿಲ್ಲ. ಆದ್ದರಿಂದ ತೀರ್ಪು ಇಷ್ಟು ತಡವಾಯಿತು. ಮುಂದಿನ ಚುನಾವಣೆಯ ಅವಧಿ ಬರುವವರೆಗೂ ಈ ಪ್ರಕರಣವನ್ನು ತೆಗೆದುಕೊಂಡು ಹೋಗಲು ನನ್ನ ವಿರುದ್ಧ ದೂರು ನೀಡಿದವರು ಷಡ್ಯಂತ್ರ ರೂಪಿಸಿದ್ದರು. ರಾತ್ರಿ ಮಲಗಿದ್ದವನಿಗೆ ಬೆಳಗ್ಗೆ ಎದ್ದ ತಕ್ಷಣ ಅತ್ಯಾಚಾರ ಎಂದರೆ ಏನಾಗಬೇಡ. ನನ್ನ ವಿರುದ್ಧದ ಹುನ್ನಾರದ ಪ್ರತಿ ಸತ್ಯವನ್ನು ಪತ್ತೆಹಚ್ಚಿತ್ತು ಸುವರ್ಣ ನ್ಯೂಸ್ ಅದಕ್ಕಾಗಿ ನಾನು ನಿಮ್ಮ ವಾಹಿನಿಯನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಕುಟುಂಬ ರಾಜಕೀಯ ಎದುರಿಸಿ ಗೆದ್ದವನು ನಾನು

ನಾನು ಏಕಾಏಕಿ ರಾಜಕೀಯಕ್ಕೆ ಬಂದವನಲ್ಲ. ವಿದ್ಯಾರ್ಥಿ ಜೀವನದಿಂದಲೂ ರಾಜಕೀಯ ನಾಯಕನಾಗಿ ಗುರುತಿಸಿಕೊಂಡವನು. 1967ರಿಂದ 50 ವರ್ಷಗಳ ಕಾಲ ಒಂದೇ ಕುಟುಂಬದ ಹಿಡಿತದಲ್ಲಿದ್ದ ಕ್ಷೇತ್ರದ ವಿರುದ್ಧ ಸಿಡಿದೆದ್ದು ಶಾಸಕನಾದೆ. ನಮ್ಮ ನಾಯಕರಾದ ಯಡಿಯೂರಪ್ಪವನರು ನನ್ನನ್ನು ಮಂತ್ರಿಯನ್ನಾಗಿ ಮಾಡಿದರು. ಇದೊಂದು ಕೆಟ್ಟ ಕನಸೆಂದು ಮರೆತುಬಿಡುತ್ತೇನೆ' ಎಂದು ಇದೇ ಸಂದರ್ಭದಲ್ಲಿ ಹೇಳಿದರು.

7 ವರ್ಷಗಳ ವಿಚಾರಣೆ       

ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಿಂದ ಬಿಜೆಪಿ ಮುಖಂಡ ಹರತಾಳು ಹಾಲಪ್ಪ ಮುಕ್ತರಾಗಿದ್ದಾರೆ. ಈ ಪ್ರಕರಣದಲ್ಲಿ ಹಾಲಪ್ಪ ನಿರ್ದೋಷಿ ಎಂದು ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. 7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಶಿವಮೊಗ್ಗದ ಮುಖಂಡ ಆರೋಪಮುಕ್ತರಾಗಿದ್ದಾರೆ. ಶಿವಮೊಗ್ಗದ 2ನೇ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶೆ ನ್ಯಾ| ರಮಾ ಅವರು ಈ ತೀರ್ಪು ನೀಡಿದ್ದಾರೆ.

ಏನಿದು ಪ್ರಕರಣ..?
2009ರ ನವೆಂಬರ್​ 26 ರಂದು ಊಟ ಮಾಡಲು ಆಗಮಿಸಿದ್ದ ಹರತಾಳು ಹಾಲಪ್ಪರವರು ತಮ್ಮ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾಗಿ ವೆಂಕಟೇಶಮೂರ್ತಿ ಆರೋಪಿಸಿದ್ದರು. ಈ ಸಂಬಂಧ ವೆಂಕಟೇಶಮೂರ್ತಿ ಮತ್ತು ಆತನ ಪತ್ನಿ ಚಂದ್ರಾವತಿ 2010 ಮೇ 3 ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಆದ್ರೆ ಒಂದು ದಿನ ಮುಂಚಿತವಾಗಿಯೇ ಅಂದ್ರೆ 2010 ಮೇ. 2 ರಂದೇ ಹಾಲಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2010 ಮೇ 10 ರಂದು ಹಾಲಪ್ಪ ಪೊಲೀಸರಿಗೆ ಶರಣಾಗಿದ್ದರು. ಕೆಲ ದಿನಗಳ ಬಳಿಕ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. 

90 ದಿನದೊಳಗೆ ಚಾರ್ಚ್​ಶಿಟ್ ಸಲ್ಲಿಸಬೇಕಾಗಿದ್ದ ಸಿಐಡಿ ಪೋಲಿಸರು 10 ತಿಂಗಳಾದರೂ ನ್ಯಾಯಾಲಯಕ್ಕೆ ಚಾರ್ಚ್​'ಶೀಟ್ ಸಲ್ಲಿಸಿರಲಿಲ್ಲ. ಆಗ ಹಾಲಪ್ಪ ಪರ ವಕೀಲರು ಈ ವಿಳಂಬದ ಕುರಿತು ಹೈಕೊರ್ಟ್​ ಗಮನ ಸೆಳೆದಿದ್ದರು. ಆಗ ಹೈಕೋರ್ಟ್  ಪ್ರಕರಣಕ್ಕೆ ಸಂಬಂಧಿಸಿದಂತೆ 2011 ರ ಮಾ. 31ರೊಳಗೆ ಸಂಬಂಧಿಸಿದ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಸುವಂತೆ  ಸಿಐಡಿಗೆ ಸ್ಪಷ್ಟ ಆದೇಶ ನೀಡಿತ್ತು. ಆಗ  ಸಿಐಡಿ ಪೊಲೀಸರು ಮಾ 30 ರಂದು ಶಿವಮೊಗ್ಗ ನಗರದ ಮೂರನೇ ಹೆಚ್ಚುವರಿ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದೀಗ ಸುದೀರ್ಘ ವಾದ-ಪ್ರತಿವಾದ ಆಲಿಸಿರುವ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.

Follow Us:
Download App:
  • android
  • ios