ವರ್ಗ ಮಾಡಿಸ್ತೇನೆಂದು ಅಧಿಕಾರಿಗೆ ಬೆದರಿಕೆ ಹಾಕಿದ ಎಚ್.ಡಿ.ರೇವಣ್ಣ
- ಕುಮಾರಸ್ವಾಮಿ ಮಾತನಾಡುವಾಗ ಸೋದರನ ‘ಅಡ್ಡಬಾಯಿ’
- ಕರೆಯದಿದ್ದರೂ ಕೃಷಿ ಇಲಾಖಾ ಸಭೆಗೆ ಬಂದಿದ್ದ ರೇವಣ್ಣ
- ಕೆಎಂಎಫ್ ವಿಚಾರವಾಗಿ ಸಿಎಂ ಮಾತಾಡುವಾಗ ಮೈಕ್ ಕಸಿದು ಹೇಳಿಕೆ
ಬೆಂಗಳೂರು: ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜೊತೆ ಶನಿವಾರ ವಿಧಾನಸಭೆಯಲ್ಲಿ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಎಂಎಫ್ ಕುರಿತು ಮಾತನಾಡುವಾಗ ಮಧ್ಯ ಪ್ರವೇಶಿಸಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಲು ಶುರು ಮಾಡಿ ಕಿರಿ ಕಿರಿ ಉಂಟು ಮಾಡಿದ ಪ್ರಸಂಗ ನಡೆಯಿತು.
ಸಭೆಗೆ ಕೇವಲ ಇಲಾಖಾ ಅಧಿಕಾರಿಗಳನ್ನು ಮಾತ್ರ ಆಹ್ವಾನಿಸಲಾಗಿತ್ತಾದರೂ, ರೇವಣ್ಣ ಅವರು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ನಂತರ ‘ರೈತರಿಗೆ ನೀಡುತ್ತಿರುವ ಹಾಲಿನ ದರ ಕಡಿಮೆ ಮಾಡುವಂತೆ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆಯೇ’ ಎಂದು ಪ್ರಶ್ನಿಸಿದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ‘ಈವರೆಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಬಂದ ನಂತರ ಪರಿಶೀಲಿಸಲಾಗುವುದು’ ಎಂದರು.
ಆದರೆ ಪಕ್ಕದಲ್ಲಿಯೇ ಕುಳಿತಿದ್ದ ಎಚ್.ಡಿ. ರೇವಣ್ಣ ಅವರು ಮೈಕ್ ಎಳೆದುಕೊಂಡು, ‘ದರ ಕಡಿಮೆ ಮಾಡುವ ನಿರ್ಧಾರವನ್ನು ಜಿಲ್ಲಾ ಹಾಲು ಒಕ್ಕೂಟಗಳೇ ನಿರ್ಧರಿಸಬೇಕಾಗುತ್ತದೆ, ಕೆಎಂಎಫ್ ಮಾಡುವುದಿಲ್ಲ’ ಎಂದು ವಿವರಿಸುತ್ತಾ ಹೊರಟಾಗ, ಸ್ವಲ್ಪ ಕಿರಿ ಕಿರಿಗೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಈ ಬಗ್ಗೆ ಪ್ರತ್ಯೇಕ ಪ್ರೆಸ್ಮೀಟ್ ಕರೆದು ವಿವರಿಸಿ’ ಎಂದು ಹೇಳಿದರು. ಆದರೂ, ರೇವಣ್ಣ ಮಾತು ಮುಂದುವರೆಸಿದರು.
ವರ್ಗ ಮಾಡಿಸ್ತೀನಿ: ರೇವಣ್ಣ ‘ಬೆದರಿಕೆ’
ಸಭೆ ನಂತರ ಸಮಿತಿ ಕೊಠಡಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಗೆ ಮಾಧ್ಯಮ ಪ್ರತಿನಿಧಿಗಳನ್ನು ಒಳಬಿಡುತ್ತಿದ್ದ ಅಧಿಕಾರಿಯೊಬ್ಬರ ಮೇಲೆ ರೇವಣ್ಣ ಹರಿಹಾಯ್ದರು. ಒಳಗೆ ಹೀಗೆ ಎಲ್ಲರನ್ನು ಬಿಡುತ್ತಿದ್ದರೆ ಸುಮ್ಮನಿರುವುದಿಲ್ಲ. ಬೇರೆ ಕಡೆ ವರ್ಗ ಮಾಡಿಸುತ್ತೇನೆ ಎಂದು ದಬಾಯಿಸಿದ ಪ್ರಸಂಗ ಕೂಡಾ ನಡೆಯಿತು.