ರೈತರ ಸಾಲಮನ್ನಾದ ವಿಚಾರಕ್ಕೆ ಸಂಬಂಧಪಟ್ಟು ರಾಜ್ಯದ ಜನತೆಯಲ್ಲಿ ಹದಿನೈದು ದಿನದ ಸಮಯ ಕೇಳಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಇದೀಗ ಸಾಲಮನ್ನಾದ ಪ್ರಮಾಣವನ್ನು ಮುಂದಿನ ಬಜೆಟ್‌ನಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.

ಆದಿಚುಂಚನಗಿರಿ (ಮಂಡ್ಯ ಜಿಲ್ಲೆ): ರೈತರ ಸಾಲಮನ್ನಾದ ವಿಚಾರಕ್ಕೆ ಸಂಬಂಧಪಟ್ಟು ರಾಜ್ಯದ ಜನತೆಯಲ್ಲಿ ಹದಿನೈದು ದಿನದ ಸಮಯ ಕೇಳಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಇದೀಗ ಸಾಲಮನ್ನಾದ ಪ್ರಮಾಣವನ್ನು ಮುಂದಿನ ಬಜೆಟ್‌ನಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದಿಚುಂಚನಗಿರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಲಮನ್ನಾ ವಿಚಾರವಾಗಿ ಈಗಾಗಲೇ ಬ್ಯಾಂಕ್‌ ಅಧಿಕಾರಿಗಳ ಜತೆ ಚರ್ಚಿಸಲಾಗಿದ್ದು ಎಷ್ಟುಸಾಲವಿದೆ, ಯಾವ ರೀತಿ ಮಾಡಬೇಕು ಎಂದು ವರದಿ ಪಡೆದುಕೊಳ್ಳಲಾಗುತ್ತಿದೆ ಎಂದರು. ರೈತರ ಸಾಲಮನ್ನಾ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಪುನರುಚ್ಚರಿಸಿರುವ ಅವರು, ಈ ವಿಚಾರದಲ್ಲಿ ನಾನು ಬೇರೆ ಪಕ್ಷದವರ ರೀತಿಯಲ್ಲಿ ಪಲಾಯನ ಮಾಡುವುದಿಲ್ಲ. ನನ್ನ ಘೋಷಣೆ ಅನುಷ್ಠಾನ ಮಾಡೇ ತೀರುತ್ತೇನೆ. ಬಜೆಟ್‌ನಲ್ಲಿ ಯಾವ ಪ್ರಮಾಣದ ಸಾಲಮನ್ನಾ ಮಾಡಲಾಗುವುದು ಎಂದು ತಿಳಿಸಲಾಗುವುದು ಎಂದರು. ಜೂನ್‌ ತಿಂಗಳಲ್ಲಿ ನೂತನ ಸರ್ಕಾರದ ಬಜೆಟ್‌ ಮಂಡಿಸಲಾಗುವುದು ಎಂದು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇತ್ತೀಚೆಗೆ ತಿಳಿಸಿದ್ದರು.

ಇದೇ ವೇಳೆ ಇಸ್ರೇಲ್‌ ಮಾದರಿ ಕೃಷಿ ಪದ್ಧತಿಯ ಬಗ್ಗೆಯೂ ಮಾತನಾಡಿದ ಅವರು, ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಈ ಪದ್ಧತಿ ಜಾರಿ ಮಾಡಲು ಚಿಂತನೆ ನಡೆದಿದೆ ಎಂದು ತಿಳಿಸಿದರು.

ಭತ್ತದ ನಾಟಿ ಮಾಡುವೆ:

ಎರಡು, ಮೂರು ವರ್ಷಗಳಿಂದ ಮಂಡ್ಯ ಜಿಲ್ಲೆಯಲ್ಲಿ ಭತ್ತದ ನಾಟಿ ಮಾಡಿಲ್ಲ. ಹಿಂದಿನ ಸರ್ಕಾರಗಳು ರೈತರಿಗೆ ಹುರುಳಿ ಚೆಲ್ಲುವ ಸಲಹೆ ನೀಡಿದ್ದವು. ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿಯೇ ಸಾಕಷ್ಟುಮಳೆಯನ್ನು ಕಂಡಿದ್ದೇನೆ. ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಭತ್ತ ನಾಟಿ ಮಾಡುವ ಕಾರ್ಯಕ್ರಮದಲ್ಲಿ ಖುದ್ದು ಪಾಲ್ಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.