ರೆಸಾರ್ಟ್'ನಲ್ಲೇ ಶಾಸಕಿ ಪುತ್ರನ ಹುಟ್ಟುಹಬ್ಬ ಆಚರಣೆ: ಇಂದು ನವದೆಹಲಿಗೆ ಡಿ.ಕೆ. ಶಿವಕುಮಾರ್
ಗುಜರಾತ್ ಕಾಂಗ್ರೆಸ್ ಶಾಸಕರ ರೆಸಾರ್ಟ್ ವಾಸ್ತವ್ಯ ನಾಲ್ಕನೇ ದಿನಕ್ಕೆ ಮುಂದುವರಿದಿದೆ. ಇಂದು ನವದೆಹಲಿಗೆ ತೆರಳಲಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ವರಿಷ್ಠರನ್ನು ಭೇಟಿಯಾಗುವ ಸಾಧ್ಯತೆಯಿದೆ. ಇನ್ನು ನಿನ್ನೆ ರಾತ್ರಿ ದಹೇಗಾಮ್ ಶಾಸಕಿ ಕಮಿನಿಬಾ ರಾಥೋರ್ ಪುತ್ರನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ರೆಸಾರ್ಟ್ ನಲ್ಲೇ ಅಚರಿಸಲಾಗಿದ್ದು, ಇಂದೂ ಕೂಡಾ ಶಾಸಕರು ರೆಸಾರ್ಟ್ ನಲ್ಲೇ ಉಳಿಯಲಿದ್ದಾರೆ.
ಬೆಂಗಳೂರು(ಆ.01): ಗುಜರಾತ್ ಕಾಂಗ್ರೆಸ್ ಶಾಸಕರ ರೆಸಾರ್ಟ್ ವಾಸ್ತವ್ಯ ನಾಲ್ಕನೇ ದಿನಕ್ಕೆ ಮುಂದುವರಿದಿದೆ. ಇಂದು ನವದೆಹಲಿಗೆ ತೆರಳಲಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ವರಿಷ್ಠರನ್ನು ಭೇಟಿಯಾಗುವ ಸಾಧ್ಯತೆಯಿದೆ. ಇನ್ನು ನಿನ್ನೆ ರಾತ್ರಿ ದಹೇಗಾಮ್ ಶಾಸಕಿ ಕಮಿನಿಬಾ ರಾಥೋರ್ ಪುತ್ರನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ರೆಸಾರ್ಟ್ ನಲ್ಲೇ ಅಚರಿಸಲಾಗಿದ್ದು, ಇಂದೂ ಕೂಡಾ ಶಾಸಕರು ರೆಸಾರ್ಟ್ ನಲ್ಲೇ ಉಳಿಯಲಿದ್ದಾರೆ.
ರೆಸಾರ್ಟ್ ಪಾಲಿಟಿಕ್ಸ್
ಗುಜರಾತ್ ನಲ್ಲಿ ಬಿಜೆಪಿ ರಣತಂತ್ರಕ್ಕೆ ಬೆದರಿರುವ ಕಾಂಗ್ರೆಸ್ ಶಾಸಕರ ರೆಸಾರ್ಟ್ ವಾಸ್ತವ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೇ ಇಡೀ ದಿನ ರೆಸಾರ್ಟ್ ನಲ್ಲೇ ಶಾಸಕರಿಗೆ ನವದೆಹಲಿಯ ಜವಾಹರ್ ಲಾಲ್ ನೆಹರು ಲೀಡರ್ ಶಿಪ್ ಇನ್ಸ್ಟಿಟ್ಯೂಟ್ ನಿಂದ ಬಂದಿದ್ದ ಡಾ. ಸುರೇಶ್ ಶರ್ಮಾ ಮತ್ತು ನೌಷಾದ್ ಪರಮಾರ್ ಓರಿಯೆಂಟೇಷನ್ ಕ್ಲಾಸ್ ನಡೆಸಿದ್ರು. ಬಳಿಕ ಪುತ್ರನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದಹೇಗಾಮ್ ಶಾಸಕಿ ಕಮಿನಿಬಾ ರಾಥೋರ್ ಕುಟುಂಬ ಸಮೇತ ವಂಡರ್ ಲಾ ಮತ್ತು ದೇವಸ್ಥಾನಗಳಿಗೆ ಸುತ್ತು ಹಾಕಿದ್ರು. ಬಳಿಕ ರಾತ್ರಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕೇಕ್ ಕತ್ತರಿಸಿ ರೆಸಾರ್ಟ್ ನಲ್ಲೇ ಶಾಸಕಿ ಪುತ್ರ ಕೃಷಾಂಗ್ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ.
ಇನ್ನು ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ಇಂದು ಸಚಿವ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದು, ಬಳಿಕ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಶಾಸಕರ ರೆಸಾರ್ಟ್ ವಾಸ್ತವ್ಯದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ದೆಹಲಿ ಪ್ರಯಾಣ ಮಹತ್ವ ಪಡೆದಿದೆ. ಈ ಮಧ್ಯೆ ಶಾಸಕರ ಪ್ರವಾಸ ಇನ್ನೂ ನಿಗದಿಯಾಗದೇ ಉಳಿದುದ್ದು, ಹೈಕಮಾಂಡ್ ನಿರ್ದೇಶನದ ಬಳಿಕ ಪ್ರವಾಸದ ಬಗ್ಗೆ ನಿರ್ಧಾರವಾಗಲಿದೆ.
ಇನ್ನು ಶಾಸಕರಿಗಾಗಿ ಗುಜರಾತಿ ಶೈಲಿಯ ಆಹಾರ ತಯಾರಿಕೆಗಾಗಿ ಗುಜರಾತ್ ನಿಂದ ಇಬ್ಬರು ಬಾಣಸಿಗರನ್ನು ಕರೆಸಲಾಗಿದೆ. ಇನ್ನು ಅಡುಗೆ ಬಲ್ಲ ಕೆಲ ಶಾಸಕರು ತಾವೇ ರೆಸಾರ್ಟ್ ನಲ್ಲಿ ಗುಜರಾತಿ ಶೈಲಿಯ ಆಹಾರ ತಯಾರಿಸಿದ್ದಾರೆ. ಇದೆಲ್ಲದರ ಮಧ್ಯೆ ರಾಜ್ಯ ಕಾಂಗ್ರೆಸ್ ನಾಯಕರು ಮಾತ್ರ ಗುಜರಾತ್ ಕಾಂಗ್ರೆಸ್ ಶಾಸಕರ ರೆಸಾರ್ಟ್ ವಾಸ್ತವ್ಯದ ಬೆಳವಣಿಗೆಯಿಂದ ಪೂರ್ಣ ಅಂತರ ಕಾಯ್ದುಕೊಂಡಿದ್ದಾರೆ.