2002ರಲ್ಲಿ ಗೋಧ್ರಾ ರೈಲ್ವೆ ನಿಲ್ದಾಣದ ಬಳಿ ಸಾಬರಮತಿ ಎಕ್ಸ್'ಪ್ರೆಸ್ ರೈಲಿನ ಎಸ್-6 ಕೋಚ್'ನಲ್ಲಿ ಬೆಂಕಿ ಹೊತ್ತಿಕೊಂಡು ಉರಿದು 59 ಮಂದಿ ಸುಟ್ಟುಕರಕಲಾಗಿದ್ದರು. ರೈಲಿನಲ್ಲಿದ್ದವರಲ್ಲಿ ಬಹುತೇಕರು ಅಯೋಧ್ಯೆಯಿಂದ ವಾಪಸ್ ಬರುತ್ತಿದ್ದ ಕರಸೇವಕರಾಗಿದ್ದರು. ಈ ಘಟನೆಯು ಗುಜರಾತ್'ನಾದ್ಯಂತ ದೊಡ್ಡ ಹಿಂಸಾಚಾರಗಳಿಗೆ ಕಾರಣವಾಗಿತ್ತು.

ಅಹ್ಮದಾಬಾದ್(ಅ. 08): ಹದಿನೈದು ವರ್ಷಗಳ ಹಿಂದಿನ ಸಾಬರ್'ಮತಿ ಎಕ್ಸ್'ಪ್ರೆಸ್ ರೈಲು ಅಗ್ನಿ ಅವಘಡ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ನಾಳೆ ಸೋಮವಾರ ಮಹತ್ವದ ತೀರ್ಪು ಪ್ರಕಟಿಸಲಿದೆ. ಗುಜರಾತ್ ನರಮೇಧಕ್ಕೆ ಮೂಲಕಾರಣವಾಗಿದ್ದ ಈ ಘಟನೆಯ ಬಗ್ಗೆ ಉಚ್ಚ ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 2002ರಲ್ಲಿ ಗೋಧ್ರಾ ರೈಲ್ವೆ ನಿಲ್ದಾಣದ ಬಳಿ ಸಾಬರಮತಿ ಎಕ್ಸ್'ಪ್ರೆಸ್ ರೈಲಿನ ಎಸ್-6 ಕೋಚ್'ನಲ್ಲಿ ಬೆಂಕಿ ಹೊತ್ತಿಕೊಂಡು ಉರಿದು 59 ಮಂದಿ ಸುಟ್ಟುಕರಕಲಾಗಿದ್ದರು. ರೈಲಿನಲ್ಲಿದ್ದವರಲ್ಲಿ ಬಹುತೇಕರು ಅಯೋಧ್ಯೆಯಿಂದ ವಾಪಸ್ ಬರುತ್ತಿದ್ದ ಕರಸೇವಕರಾಗಿದ್ದರು. ಈ ಘಟನೆಯು ಗುಜರಾತ್'ನಾದ್ಯಂತ ದೊಡ್ಡ ಹಿಂಸಾಚಾರಗಳಿಗೆ ಕಾರಣವಾಗಿತ್ತು.

ಗುಜರಾತ್ ಸರಕಾರ ನೇಮಿಸಿದ ನಾನಾವತಿ ಆಯೋಗವು ಆ ಘಟನೆಯ ತನಿಖೆ ನಡೆಸಿತ್ತು. ಗೋಧ್ರಾ ದುರಂತವು ಆಕಸ್ಮಿಕವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ನಡೆದ ಘಟನೆಯಾಗಿತ್ತು ಎಂದು ಆಯೋಗದ ವರದಿಯಿಂದ ಗೊತ್ತಾಗಿದೆ. 2011ರಲ್ಲಿ ಎಸ್'ಐಟಿ ವಿಶೇಷ ನ್ಯಾಯಾಲಯವು 31 ಜನರನ್ನು ಅಪರಾಧಿಗಳೆಂದು ಪರಿಗಣಿಸಿ ತೀರ್ಪು ನೀಡಿತ್ತು. ಪ್ರಕರಣದಲ್ಲಿ ಇನ್ನುಳಿದ 63 ಆರೋಪಿಗಳನ್ನ ಖುಲಾಸೆ ಕೂಡ ಮಾಡಲಾಗಿತ್ತು. ದೋಷಿಗಳೆಂದು ತೀರ್ಮಾನಿಸಲಾದ 63 ಮಂದಿ ಪೈಕಿ 11 ಜನರಿಗೆ ಮರಣದಂಡನೆ ಹಾಗೂ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಗೋಧ್ರಾದ ಮಹಾನಗರ ಪಾಲಿಕೆ ಅಧ್ಯಕ್ಷ ಮೊಹಮ್ಮದ್ ಹುಸೇನ್ ಕಲೋಟಾ, ಮೊಹಮ್ಮದ್ ಅನ್ಸಾರಿ ಮೊದಲಾದವರು ಖುಲಾಸೆಯಾದರು.

ಎಸ್'ಐಟಿ ಕೋರ್ಟ್'ನ ತೀರ್ಪಿನ ಬಗ್ಗೆ ಎಲ್ಲರೂ ಆಕ್ಷೇಪ ವ್ಯಕ್ತಪಡಿಸಿದರು. ದೋಷಿಗಳೆಂದು ಪರಿಗಣಿಸಿ ನೀಡಿದ ತೀರ್ಪನ್ನು ಪ್ರಶ್ನಿಸಿ ಹಲವು ಜನರು ಗುಜರಾತ್ ಹೈಕೋರ್ಟ್'ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹಾಗೆಯೇ, 63 ಆರೋಪಿಗಳನ್ನು ಖುಲಾಸೆ ಮಾಡಿದ ತೀರ್ಪನ್ನ ಪ್ರಶ್ನಿಸಿ ಗುಜರಾತ್ ಸರಕಾರ ಕೂಡ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತು. ಮತ್ತೊಮ್ಮೆ ಪ್ರಕರಣದ ವಿಚಾರಣೆ ನಡೆಸಿರುವ ಹೈಕೋರ್ಟ್ ಸೋಮವಾರ ತನ್ನ ತೀರ್ಪನ್ನು ಪ್ರಕಟಿಸುವ ನಿರೀಕ್ಷೆ ಇದೆ.