ಉನ್ನತ ಶಿಕ್ಷಣ ಸಚಿವ ಜ.ಟಿ ದೇವೇಗೌಡ ಅವರು ರೇವಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡು ಖಾಸಗಿ ಕಾಲೇಜುಗಳ ಸುವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ಕಾರಿ ಕಾಲೇಜುಗಳ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು :  ದೇಶ ಅಭಿವೃದ್ಧಿ ಆಗಬೇಕಾದರೆ ನಿಮ್ಮಂತ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೇಳಿದ್ದಾರೆ. ರಾಜಕಾರಣಿಗಳಿಂದ ಈ ದೇಶ ಮುಂದೆ ಬರಲು ಸಾಧ್ಯವಿಲ್ಲ. ದೇಶವನ್ನು ಅವರು ಉದ್ದಾರ ಮಾಡುವುದೂ ಇಲ್ಲ ಎಂದು ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಅಲ್ಲದೇ ಡಾ ಬಿ.ಆರ್ ಅಂಬೇಡ್ಕರ್ ಒಬ್ಬರಿಗೆ ಒಂದೇ ಮತ ನೀಡುವ ಅವಕಾಶವನ್ನು ನೀಡಿದ್ದಾರೆ. ಆದ್ದರಿಂದ ನೀವು ಜನಪ್ರತಿನಿಧಿಗಳನ್ನ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಿದೆ ಎಂದು ರೇವಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು. 

ಇನ್ನು ಎಪಿಜೆ ಅಬ್ದುಲ್ ಕಲಾಂ ಅವರನ್ನೂ ಕೂಡ ಈ ವೇಳೆ ಸ್ಮರಿಸಿದ್ದು, ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗಲೇ ಕಲಾಂ ಅವರು‌ ಸಾವನ್ನಪ್ಪಿದರು . ಶಿಕ್ಷಣದ ಮಹತ್ವ ಇದು, ರಾಜಕಾರಣಿಗಳಿಂದ ಇದು ಸಾಧ್ಯವಿಲ್ಲ ಎಂದರು. 

ಇದೇ ವೇಳೆ ಸರ್ಕಾರಿ ಕಾಲೇಜುಗಳ ಪರಿಸ್ಥಿತಿಯ ಬಗ್ಗೆಯೂ ಕೂಡ ಪ್ರಸ್ತಾಪ ಮಾಡಿದ್ದು, ಅವುಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ವಿವಿಧ ವಿವಿಗಳ ಉಪಕುಲಪತಿಗಳು, ಅಧಿಕಾರಿಗಳ ವಿರುದ್ದ ಗರಂ ಆಗಿ ಮಾತನಾಡಿದರು. ಸರ್ಕಾರಿ ಕಾಲೇಜುಗಳಲ್ಲಿ ಎಲ್ಲವೂ ಸಮಸ್ಯೆಯಾಗಿರುತ್ತದೆ. ಕಟ್ಟಡಗಳೇ ಇಲ್ಲದೆ ಕಾಲೇಜುಗಳನ್ನು ನಡೆಸಬೇಕಾದ ಸ್ಥಿತಿ ಇರುತ್ತದೆ. 

ಸರ್ಕಾರ ಕೋಟಿ ಕೋಟಿ ಹಣ ಅನುದಾನ ನೀಡುತ್ತದೆ. ಆದರೂ ನಮ್ಮ ಸರ್ಕಾರಿ ಕಾಲೇಜುಗಳ ಸ್ಥಿತಿ ಯಾಕೆ ಹೀಗಿದೆ. ನಮ್ಮ ವಿಸಿಗಳನ್ನ ನಿಮ್ಮ ಕಾಲೇಜುಗಳಿಗೆ ಕಳುಹಿಸಿಕೊಡುತ್ತೇನೆ. ನಿಮ್ಮಿಂದ ನೋಡಿ ಕಲಿಯಲಿ. ಸರ್ಕಾರಿ ಕಾಲೇಜುಗಳನ್ನು ಉನ್ನತ ದರ್ಜೆಗೆ ಏರಿಸಲು ಕೆಲಸ ಮಾಡಲಿ. ಖಾಸಗಿ ಯೂನಿವರ್ಸಿಟಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ನಮ್ಮ ಅಧಿಕಾರಿಗಳು, ವಿಸಿ ಗಳು ಸರ್ಕಾರಿ ಕಾಲೇಜುಗಳ ಹೆಸರು ಕೆಡಿಸುತ್ತಿದ್ದಾರೆ ಎಂದು ಜಿ.ಟಿ ದೇವೇಗೌಡ ಹೇಳಿದ್ದಾರೆ.