ಹುಸಿಯಾದ ನಿರೀಕ್ಷೆ : ನಿರಾಶೆಯಾದರಾ ಜಿಟಿಡಿ..?
ಉನ್ನತ ಶಿಕ್ಷಣ ಖಾತೆ ಬೇಡ ಎಂದು ಕಳೆದ 15 ದಿನಗಳಿಂದ ಪಟ್ಟು ಹಿಡಿದಿದ್ದ ಸಚಿವ ಜಿ.ಟಿ.ದೇವೇಗೌಡ ಅವರು ಅನಿವಾರ್ಯವಾಗಿ ಅದೇ ಖಾತೆಯನ್ನು ವಹಿಸಿಕೊಳ್ಳಲು ಮುಂದಾಗಿದ್ದಾರೆ.
ಬೆಂಗಳೂರು : ಉನ್ನತ ಶಿಕ್ಷಣ ಖಾತೆ ಬೇಡ ಎಂದು ಕಳೆದ 15 ದಿನಗಳಿಂದ ಪಟ್ಟು ಹಿಡಿದಿದ್ದ ಸಚಿವ ಜಿ.ಟಿ.ದೇವೇಗೌಡ ಅವರು ಅನಿವಾರ್ಯವಾಗಿ ಅದೇ ಖಾತೆಯನ್ನು ವಹಿಸಿಕೊಳ್ಳಲು ಮುಂದಾಗಿದ್ದಾರೆ.
ಕೊಟ್ಟಿರುವ ಖಾತೆ ಬಿಟ್ಟು ಬೇರೆ ಖಾತೆ ನೀಡಿದರೆ ಸಮ್ಮಿಶ್ರ ಸರ್ಕಾರದಲ್ಲಿ ಅದು ಅನಗತ್ಯ ಗೊಂದಲಕ್ಕೆ ಕಾರಣವಾದೀತು ಎಂಬ ಕಿವಿಮಾತು ಹೇಳುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ದೇವೇಗೌಡರನ್ನು ಒಪ್ಪಿಸುವಲ್ಲಿ ಗುರುವಾರ ಸಂಜೆ ಯಶಸ್ವಿಯಾಗಿದ್ದಾರೆ.
ಜೊತೆಗೆ, ಮೈಸೂರು ಜಿಲ್ಲೆಯ ಉಸ್ತುವಾರಿಯನ್ನೂ ನೀಡುವುದಾಗಿ ಭರವಸೆ ನೀಡಿದ್ದೂ ಜಿ.ಟಿ.ದೇವೇಗೌಡರ ಅತೃಪ್ತಿ ಶಮನ ಗೊಳಿಸುವಲ್ಲಿ ಕೆಲಸ ಮಾಡಿತು ಎಂದು ತಿಳಿದು ಬಂದಿದೆ. ಪರಿಣಾಮ, ವಿಧಾನಸೌಧದಲ್ಲಿ ತಮಗೆ ಹಂಚಿಕೆಯಾಗಿರುವ ಕೊಠಡಿಯಲ್ಲಿ ಶುಕ್ರವಾರ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಪ್ರವೇಶ ಮಾಡಲಿದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.