ರೆಡ್ಡಿ ಪುತ್ರಿ ವಿವಾಹ: ನಿಯಮಬಾಹಿರವಾಗಿ ಅರಮನೆ ಮೈದಾನ ಬಾಡಿಗೆಗೆ ನೀಡಿದ ಸರ್ಕಾರ
ನಿಯಮಬಾಹಿರ ಅನುಮತಿ ನೀಡಿದ ರಾಜ್ಯ ಸರ್ಕಾರ | ಜನಾರ್ಧನ ರೆಡ್ಡಿ ಹೆಸರಲ್ಲಿ 3, ಶ್ರೀರಾಮುಲು ಹೆಸರಲ್ಲಿ 2 ದಿನ ಬುಕ್
ಬೆಂಗಳೂರು (ನ.16): ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಳೆದ ನಾಲ್ಕು ದಿನಗಳಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರಿಯ ಆಡಂಬರದ ಮದುವೆ ನಡೆಯುತ್ತಿದ್ದು, ವಿವಾಹಕ್ಕಾಗಿ ತಿಂಗಳುಗಟ್ಟಲೆ ಸಿದ್ಧತೆ ನಡೆಸಲಾಗಿದೆ. ಇಲ್ಲಿ ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷ ದೇಗುಲ ಸೇರಿದಂತೆ ಈ ಭಾಗದ ಹಳ್ಳಿಗಳನ್ನು ರೂಪಿಸಲು ತಿಂಗಳುಗಟ್ಟಲೆ ಸಮಯ ತಗುಲಿದೆ. ಆದರೆ, ಅರಮನೆ ಮೈದಾನವನ್ನು ಕಾರ್ಯಕ್ರಮಗಳಿಗೆ 3 ದಿನ ಮಾತ್ರ (ಅತಿ ಹೆಚ್ಚು) ನೀಡಬೇಕೆಂಬ ಸರ್ಕಾರದ ಮಾರ್ಗದರ್ಶಿ ನಿಯಮಗಳನ್ನು ಸರ್ಕಾರವೇ ಗಾಳಿಗೆ ತೂರಿದೆ.
ಜನಾರ್ದನ ರೆಡ್ಡಿ ಆಸ್ತಿ ಮುಟ್ಟುಗೋಲು ಹಾಕಿದ ಬಳಿಕವೂ ಕೋಟ್ಯಂತರ ಖರ್ಚು ಮಾಡಿ ಹೇಗೆ ಮದುವೆ ಮಾಡಲಾಗುತ್ತಿವೆ. ಪ್ರಶ್ನಿಸುವ ಅಧಿಕಾರವಿದ್ದರೂ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯಗಳೇಕೆ ಸುಮ್ಮನಿವೆ. ಕಾನೂನು ಎಲ್ಲಿ ಪಾಲನೆ ಆಗಿದೆ.
ಕೆ ವಿ ಧನಂಜಯ ಸುಪ್ರೀಂ ಕೋರ್ಟ್ ನ್ಯಾಯವಾದಿ
ಮಾರ್ಗದರ್ಶಿ ನಿಯಮದಲ್ಲೇನಿದೆ?: ಅರಮನೆ ಮೈದಾನ ಬಳಕೆ ಕುರಿತು 2012ರಲ್ಲಿ ಸರ್ಕಾರ ಹೊರಡಿಸಿದ ಆದೇಶ (ಆ.ಸಂ.ಡಿಪಿಎಆರ್ 184 ಪಿಎಸ್ಆರ್ 2012 ದಿ.21.12.2012)ದ ಮೊದಲ ಷರತ್ತಿನಲ್ಲೇ ಅರಮನೆ ಮೈದಾನವನ್ನು ಕಡಿಮೆ ಅವಧಿಯ ಕಾರ್ಯಕ್ರಮಗಳಿಗೆ ಮಾತ್ರ ನೀಡಬೇಕು. ಕಾರ್ಯಕ್ರಮವೊಂದು 3 ದಿನಗಳಿಗೆ ಮೀರುವಂತಿಲ್ಲವೆಂದು ಹೇಳಿದೆ.
ಸಮಾರಂಭಕ್ಕಾಗಿ ಮಾಡಲಾಗುವ ಎಲ್ಲ ತಾತ್ಕಾಲಿಕ ನಿರ್ಮಾಣಗಳನ್ನು ಕಾರ್ಯಕ್ರಮ ಮುಗಿದ ತಕ್ಷಣ ತೆಗೆಯಬೇಕು. ಮದುವೆ, ಮದುವೆ ಅರತಕ್ಷತೆ, ಹುಟ್ಟುಹಬ್ಬ ಸಮಾರಂಭ, ರಾಜಕೀಯ ಸಭೆ ಸಮಾವೇಶ, ಫಲಪುಷ್ಪ ಪ್ರದರ್ಶನ, ತೋಟಗಾರಿಕೆ,ಅರಣ್ಯ,ಪರಿಸರ ಸಂಬಂಧಿ ಕಾರ್ಯಕ್ರಮಗಳು, ಧಾರ್ಮಿಕ ಸಭೆ ಸಮಾರಂಭಗಳು, ಕೇಂದ್ರ, ರಾಜ್ಯ ಸರ್ಕಾರದ ಕಾರ್ಯಕ್ರಮಗಳಿಗೆ ನೀಡಬಹುದೆಂದು ಮಾರ್ಗದರ್ಶಿ ನಿಯಮದಲ್ಲಿ ಹೇಳಲಾಗಿದೆ. ಆದರೆ, ಇಲ್ಲಿ ಯಾವುದೇ ವಾಣಿಜ್ಯ, ವ್ಯವಹಾರ ಚಟುವಟಿಕೆಗೆ ಅವಕಾಶವಿಲ್ಲ. ಮದ್ಯಪಾನಕ್ಕೆ ಪ್ರೇರೇಪಿಸುವುದಷ್ಟೆಅಲ್ಲ, ಸೇವಿಸುವಂತೆಯೂ ಇಲ್ಲ. ಒಂದು ದಿನ ಕುಟುಂಬವೊಂದರ (ಸಹೋದರ, 5 ಸಹೋದರಿ ಯರು) ಒಂದೇ ಕಾರ್ಯಕ್ರಮಕ್ಕೆ ಅವಕಾಶ ನೀಡಬೇಕು.
ಐದು ದಿನ ಬುಕ್ಕಿಂಗ್!: ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹಕ್ಕೆ ಅರಮನೆ ಮೈದಾನವನ್ನು ಐದು ದಿನಗಳ ಕಾಲ ಬುಕ್ಕಿಂಗ್ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎಆರ್) ಇಲಾಖೆಯ ಮೂಲಗಳು ‘ಕನ್ನಡಪ್ರಭ'ಕ್ಕೆ ಖಚಿತಪಡಿಸಿವೆ. 3 ದಿನ ರೆಡ್ಡಿ ಹೆಸರಲ್ಲಿ ಮುಂಗಡ ಕಾಯ್ದಿರಿಸಲಾಗಿದ್ದರೆ, ಮತ್ತೆರಡು ದಿನ ಸಂಸದ ಶ್ರೀರಾಮುಲು ಹೆಸರಲ್ಲಿ ಬುಕ್ ಮಾಡಲಾಗಿದೆ ಎಂದು ಡಿಪಿಎಆರ್ನ ಅಧಿಕಾರಿಗಳು ತಿಳಿಸಿದ್ದಾರೆ. ಒಬ್ಬರ ಹೆಸರಲ್ಲೇ ಐದು ದಿನಗಳ ಕಾಲ ಬುಕ್ಕಿಂಗ್ ಮಾಡಲು ಅವಕಾಶವಿಲ್ಲದ ಕಾರಣ ರೆಡ್ಡಿ ಈ ಮಾಗೋರ್ಪಾಯ ಮಾಡಿದ್ದಾರೆ ಎನ್ನಲಾಗಿದೆ. ಸರ್ಕಾರಕ್ಕೆ ಈ ವಿಷಯ ಗೊತ್ತಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದೆ.
ಮಾರ್ಗದರ್ಶಿ ನಿಯಮದ ಹಿನ್ನೆಲೆ:
ಅರಮನೆ ಮೈದಾನ ಬಳಕೆ ವಿವಾದ ಸುಪ್ರೀಂ ಮೆಟ್ಟಿಲೇರಿದ್ದು ಮೈಸೂರು ಮಹಾರಾಜರ ವಂಶಸ್ಥರು ಸುಪ್ರೀಂನಲ್ಲಿ ಸಾಕಷ್ಟುವಿಶೇಷ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ 1996ರಲ್ಲಿ ಮೈದಾನವನ್ನು ಸಾರ್ವಜನಿಕ ಹಿತಾಸಕ್ತಿಯಿಂದ ತನ್ನ ಸ್ವಾಧೀನಕ್ಕೆ ಪಡೆಯಲು ಮುಂದಾದ ರಾಜ್ಯ ಸರ್ಕಾರ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ ರೂಪಿಸಿ ಈ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಬಿದ್ದಿದ್ದರೂ ಈ ಕಾಯ್ದೆಯನ್ನು ಪ್ರಶ್ನಿಸಿ ರಾಜವಂ ಶಸ್ಥರು ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸಿದ್ದರು. ಈ ರಿಟ್ ವಜಾಗೊಳಿಸಿದ್ದ ಹೈಕೋರ್ಟ್ 1997ರಲ್ಲಿ ಸರ್ಕಾರದ ಪರ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜಮನೆತನದವರು ಸುಪ್ರೀಂ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ 1997ರಲ್ಲಿ ಯಥಾ ಸ್ಥಿತಿ ಕಾಪಾಡುವಂತೆ ಸುಪ್ರೀಂ ಆದೇಶ ನೀಡಿತ್ತು. ಬಳಿಕ 1998ರಲ್ಲಿ ಮೈದಾನದಲ್ಲಿ ಖಾಸ ಗಿ ಕಾರ್ಯಕ್ರಮ ಆಯೋಜಿಸಲು ಅನುವು ಮಾಡಿ ನಿರ್ದೇಶನ ನೀಡಿ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎ ಆರ್) ಇಲಾಖೆ ಪೂರ್ವಾನುಮತಿಯೊಂದಿಗೆ ಖಾಸಗಿ ಕಾರ್ಯಕ್ರಮ ಆಯೋಜಿಸಬಹುದು ಎಂದು ಹೇಳಿತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅರಮನೆ ಮೈದಾನ ಬಳಕೆ ಕುರಿತು 2007ರಲ್ಲಿ ಮೊಟ್ಟಮೊದಲ ಬಾರಿಗೆ ಮಾರ್ಗ ದರ್ಶಿ ನಿಯಮ ರೂಪಿಸಿ ಆದೇಶಿಸಿತ್ತು. 2008ರಲ್ಲಿ ಈ ಮಾರ್ಗದರ್ಶಿ ನಿಯಮಗಳನ್ನು ಮಾರ್ಪಾಡು ಮಾಡಿತು.