ಸಂಘಟನೆಗಳಿಗೆ ಸೇರದಂತೆ ವಿದ್ಯಾರ್ಥಿಗಳಿಗೆ ನಿರ್ಬಂಧ
ಶಾಲಾ, ಕಾಲೇಜುಗಳಲ್ಲಿ, ವಿದ್ಯಾರ್ಥಿಗಳು ಯಾವುದೇ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳದಂತೆ ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಬೆಂಗಳೂರು: ಶಾಲಾ, ಕಾಲೇಜುಗಳಲ್ಲಿ, ವಿದ್ಯಾರ್ಥಿಗಳು ಯಾವುದೇ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳದಂತೆ ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ವಿವಿಧ ಸಂಘಟನೆಗಳು ಬಳಸಿಕೊಳ್ಳುತ್ತಿವೆ. ಅನೇಕ ಕಡೆ ರಾಜಕೀಯ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಬಳಕೆಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಚಿಂತಿಸಿದೆ. ವಿದ್ಯಾರ್ಥಿಗಳು ಸಂಘಟನೆಗಳಿಗೆ ಬಳಕೆಯಾಗುವುದು ಮತ್ತು ರಾಜಕೀಯವಾಗಿ ಬಳಕೆಯಾಗುವ ಬಗ್ಗೆ ಪೋಷಕರಿಂದಲೇ ದೂರುಬಂದಿವೆ. ಅದನ್ನು ತಡೆಯುವುದಕ್ಕೂ ಪೋಷಕರಿಂದಲೇ ಸಲಹೆಗಳು ಬಂದಿವೆ. ಹೀಗಾಗಿ ಸದ್ಯದಲ್ಲೇ ಸುತ್ತೋಲೆ ಹೊರಡಿಸಲು ಮುಂದಾಗಿದ್ದೇವೆ ಎಂದು ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ವಿದ್ಯಾರ್ಥಿಗಳಿಗೆ ಯಾವುದೋ ಒಂದು ಸಂಘಟನೆಗೆ ಸಂಬಂಧಿಸಿದಂತೆ ನಿರ್ಬಂಧಿಸುವುದಿಲ್ಲ, ಬದಲಾಗಿ ಎಲ್ಲಾ ಸಂಘಟನೆಗಳಿಗೆ ಅನ್ವಯವಾಗುವಂತೆ ತಡೆಯುತ್ತೇವೆ.
ಆ ಮೂಲಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಮಾಡಲಾಗುತ್ತದೆ. ಈ ಸಂಬಂಧ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಸೇಠ್ ತಿಳಿಸಿದರು.
(ಸಾಂದರ್ಭಿಕ ಚಿತ್ರ)